ಕಟೀಲಿನಲ್ಲಿ ವಿಚಿತ್ರ ವೇಷ ಧರಿಸಿ 3ರ ಬಾಲಕಿಗೆ ನೆರವಾದ ಯುವಕರು
ಮಂಗಳೂರು, ಫೆಬ್ರವರಿ 09: ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಗುವಿನ ಚಿಕಿತ್ಸೆಗಾಗಿ ಕಟೀಲು ಕ್ಷೇತ್ರದ ಬ್ರಹ್ಮಕಲಶೋತ್ಸವ ಸಂದರ್ಭ ಯುವಕರ ತಂಡವೊಂದು ವಿಶೇಷ ವೇಷ ಧರಿಸಿ ಸುಮಾರು ಮೂರು ಲಕ್ಷ ಹಣ ಸಂಗ್ರಹಿಸಿ ಆ ಮಗುವಿನ ಪೋಷಕರಿಗೆ ನೀಡಿದ್ದಾರೆ.
ನಿಹಾರಿಕ ಎಂಬ 5 ವರ್ಷದ ಬಾಲಕಿ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ. ಆಕೆಯನ್ನು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಗೆ 10 ಲಕ್ಷ ತಗುಲಲಿದ್ದು, ನಿಹಾರಿಕಾಳ ತಂದೆ ತಾಯಿ ಬಡವರಾದ್ದರಿಂದ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಗಿತ್ತು. ಈ ಸಂದರ್ಭದಲ್ಲಿ ಮೂಡಬಿದಿರೆಯ ನೇತಾಜಿ ಬ್ರಿಗೇಡ್ ಯುವ ಸಂಘಟನೆಯ ಯುವಕರು ಸಹಾಯಕ್ಕೆ ಮುಂದಾದರು.
ಬಾಲಕಿಯ ಕಿಡ್ನಿ ಚಿಕಿತ್ಸೆಗೆ ವೇಷ ತೊಟ್ಟ ಯುವಕರ ತಂಡ
ತಂಡದ ವಿಕ್ಕಿ ಶೆಟ್ಟಿ ಬೆದ್ರ ಎಂಬುವರಿಗೆ ವಿಶೇಷ ವೇಷ ಧರಿಸಿ ಕಟೀಲು ಬ್ರಹ್ಮಕಲಶೋತ್ಸವದ ದಿನ ಭಕ್ತರಿಂದ ದೇಣಿಗೆ ಸಂಗ್ರಹಿಸಿದ್ದರು. ವಿಕ್ಕಿ ಶೆಟ್ಟಿ ಈ ಹಿಂದೆಯೂ ವಿವಿಧ ವೇಷಗಳನ್ನು ಧರಿಸಿ ಹಲವು ಮಂದಿಗೆ ನೆರವಾಗಿದ್ದವರು. ಒಂದು ಒಳ್ಳೆಯ ಉದ್ದೇಶವನ್ನು ಮನಗಂಡ ಜನರೂ ಹಣ ಸಹಾಯ ಮಾಡಿದ್ದರು. ಒಂದೇ ದಿನದಲ್ಲಿ 3 ಲಕ್ಷದ 136 ರೂಪಾಯಿ ಸಂಗ್ರಹವಾಗಿತ್ತು. ಕ್ಷೇತ್ರದಲ್ಲಿ ಸಂಗ್ರಹವಾದ ಒಟ್ಟು ಹಣವನ್ನು ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಕಟೀಲು ದೇಗುಲದ ಪ್ರಧಾನ ಅರ್ಚಕರಾದ ಹರಿನಾರಾಯಣ ಅಸ್ರಣ್ಣರವರು ನಿಹಾರಿಕಾಳ ಪೋಷಕರಿಗೆ ಹಸ್ತಾಂತರಿಸಿದರು.