ಕುಕ್ಕೆ ಸುಬ್ರಹ್ಮಣ್ಯದ ವಾರ್ಷಿಕ ಆದಾಯದಲ್ಲಿ ಅವ್ಯವಹಾರ; ಸ್ಪಷ್ಟನೆ
ಮಂಗಳೂರು, ಏಪ್ರಿಲ್ 28; ಕರ್ನಾಟಕ ರಾಜ್ಯದ ನಂಬರ್ ಒನ್ ಶ್ರೀಮಂತ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ. ದೇವಾಲಯದ ವಾರ್ಷಿಕ ಆದಾಯದ ಲೆಕ್ಕಪರಿಶೋಧನೆಯೇ ನಡೆದಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂದಿತ್ತು. ಆರೋಪಕ್ಕೆ ದೇವಾಲಯದ ಆಡಳಿತ ಮಂಡಳಿ ಕೊನೆಗೂ ಸ್ಪಷ್ಟೀಕರಣ ನೀಡಿದೆ.
ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್ ರಾಮ್ ಸುಳ್ಳಿ, "ದೇವಾಲಯದ ವಾರ್ಷಿಕ ಆದಾಯದಲ್ಲಿ ಅವ್ಯವಹಾರ ಆಗಿದೆ ಎನ್ನುವುದು ಸಂಪೂರ್ಣ ಸುಳ್ಳಾಗಿದೆ. 5 ವರ್ಷಗಳಿಂದ ದೇವಾಲಯದ ವಾರ್ಷಿಕ ಆದಾಯದ ಲೆಕ್ಕ ಪರಿಶೋಧನೆ ನಡೆದಿಲ್ಲ ಎಂಬ ಆರೋಪವೂ ಸುಳ್ಳು" ಎಂದು ಹೇಳಿದರು.
ಕುಕ್ಕೆ ಸುಬ್ರಹ್ಮಣ್ಯದ ಆದಾಯದಲ್ಲಿ ಗೋಲ್ಮಾಲ್, ಸಿಎಂಗೆ ದೂರು
"2012-2013, 2013-2014 ನೇ ಇಸವಿಯ ವಾರ್ಷಿಕ ಆದಾಯದ ಲೆಕ್ಕಾಚಾರವನ್ನು ಲೆಕ್ಕ ಪರಿಶೋಧನಾ ಇಲಾಖೆಯ ಅಧಿಕಾರಿಗಳೇ ನಡೆಸಿದ್ದಾರೆ. ಇದರ ಸ್ವೀಕೃತಿ ಪತ್ರವನ್ನೂ ದೇವಾಲಯದ ಆಡಳಿತ ಮಂಡಳಿಗೆ ನೀಡಿದ್ದಾರೆ. 2015 ರಿಂದ 2019 ರವರೆಗೆ ಖಾಸಗಿ ಲೆಕ್ಕ ಪರಿಶೋಧಕರು ವಾರ್ಷಿಕ ಆದಾಯದ ಲೆಕ್ಕಪರಿಶೋಧನೆಯನ್ನು ಮಾಡಿದ್ದಾರೆ. ಇದಕ್ಕಾಗಿ ಪಾಲನಾ ವರದಿಯನ್ನೂ ಧಾರ್ಮಿಕ ದತ್ತಿ ಇಲಾಖೆಗೆ ನೀಡಿದ್ದೇವೆ" ಎಂದರು.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಇನ್ಮುಂದೆ ನಿರಂತರ ವಿದ್ಯುತ್ ಪೂರೈಕೆ
ಮೋಹನ್ ರಾಂ ಸುಳ್ಳಿ ಸ್ಪಷ್ಟನೆ
"2020 ರಿಂದ 2022ರ ವಾರ್ಷಿಕ ಆದಾಯದ ಲೆಕ್ಕ ಪರಿಶೀಲನೆ ನಡೆದಿಲ್ಲ. ಈ ಬಗ್ಗೆ ಧಾರ್ಮಿಕ ದತ್ತಿ ಇಲಾಖೆಗೆ ಪತ್ರವನ್ನು ಬರೆದಿದ್ದೇವೆ. ಆದರೆ ಕೊರೊನಾ ಕಾರಣ ಮತ್ತು ಸಿಬ್ಬಂದಿ ಕೊರತೆಯಿಂದ ಸರ್ಕಾರದ ಕಡೆಯಿಂದ ಲೆಕ್ಕ ಪರಿಶೋಧನೆ ನಡೆದಿಲ್ಲ. ಈಗಾಗಲೇ ಲೆಕ್ಕ ಪರಿಶೋಧನಾ ಇಲಾಖೆಯ ಅಧಿಕಾರಿಗಳು ದೇವಾಲಯಕ್ಕೆ ಬಂದು ಪರಿಶೀಲನೆ ಮಾಡಿದ್ದಾರೆ" ಎಂದು ಮೋಹನ್ ರಾಂ ಸುಳ್ಳಿ ಹೇಳಿದ್ದಾರೆ.
ಆರೋಪದ ಹಿಂದೆ ಷಡ್ಯಂತ್ರ ಅಡಗಿದೆ
"ದೇವಾಲಯದ ಮೇಲೆ ಮಾಡಿರುವ ಸುಳ್ಳು ಆರೋಪದ ಹಿಂದೆ ದೇವಾಲಯದ ಹೆಸರು ಕೆಡಿಸುವ ಷಡ್ಯಂತ್ರವಿದೆ. ದೇವಾಲಯದ ಟೆಂಡರ್ ಪ್ರಕಿಯೆ ಎಲ್ಲವೂ ಇ-ಟೆಂಡರ್ ಮೂಲಕ ನಡೆಯುತ್ತಿದೆ. ಬಾಡಿಗೆ ಇನ್ನಿತರ ಯಾವುದೇ ವಹಿವಾಟಿನಲ್ಲಿ ಲೋಪದೋಷವಾಗಿಲ್ಲ. ದೇವಾಲಯದ ಎಲ್ಲಾ ಲೆಕ್ಕಗಳು ಪಾರದರ್ಶಕವಾಗಿದೆ" ಎಂದು ಸ್ಪಷ್ಟನೆ ನೀಡಿದರು.
ಮುಖ್ಯಮಂತ್ರಿಗಳಿಗೆ ದೂರು
ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದ ಆದಾಯದ ಲೆಕ್ಕ ಪರಿಶೋಧನೆಯೇ ನಡೆದಿಲ್ಲ. ಕಣ್ಣಳತೆಗೇ ಆದಾಯ ತೋರಿಸಿ ದೇವಾಲಯದ ಆಡಳಿತ ಮಂಡಳಿ ಲೆಕ್ಕ ಕೊಡುತ್ತಿದೆ. 5 ವರ್ಷದಿಂದ ಲೆಕ್ಕ ಪರಿಶೋಧನೆ ನಡೆಯಲಿಲ್ಲ. ದೇವಾಲಯದ ವಾರ್ಷಿಕ ಆದಾಯದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ಕುರಿತು ಬೆಂಗಳೂರು ಮೂಲದ ವಕೀಲ ಶ್ರೀ ಹರಿ ಕುತ್ಸ ಎಂಬುವವರು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ದೂರು ನೀಡಿದ್ದರು.
ರಾಜ್ಯದ ಶ್ರೀಮಂತ ದೇವಾಲಯ
ಕರ್ನಾಟಕದ ಮುಜರಾಯಿ ದೇವಾಲಯಗಳಲ್ಲಿಯೇ ಕುಕ್ಕೆ ಸುಬ್ರಮಣ್ಯ ಶ್ರೀಮಂತ ದೇವಾಲಯವಾಗಿದೆ. ಪ್ರತಿ ವರ್ಷ 90 ಕೋಟಿಗೂ ಅಧಿಕ ಆದಾಯ ದೇವಾಲಯಕ್ಕೆ ಬರುತ್ತದೆ. ಸರ್ವ ಸಂಸ್ಕಾರ ಸೇರಿದಂತೆ ವಿವಿಧ ಸೇವೆಗಳನ್ನು ಮಾಡಿಸಲು ಸಾವಿರಾರು ಭಕ್ತರು ದೇವಾಲಯಕ್ಕೆ ಆಗಮಿಸುತ್ತಾರೆ.