ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಕಲರವ; ಚಿಕ್ಕಮೇಳದಿಂದ ಮನೆ ಮನೆಗಳಲ್ಲಿ ಪ್ರದರ್ಶನ
ಮಂಗಳೂರು, ಜುಲೈ 22: ಕರಾವಳಿ ಜನರ ಜಾನಪದೀಯ ಸಂಸ್ಕೃತಿ ಯಕ್ಷಗಾನಕ್ಕೆ ಮಳೆಗಾಲದಲ್ಲಿ ವಿರಾಮ ಬಿದ್ದಿದೆ. ಮಳೆಗಾಲದ 6 ತಿಂಗಳು ಇಡೀ ಕರಾವಳಿಯಲ್ಲಿ ಯಕ್ಷಗಾನ ಬಯಲಾಟಗಳು ನಡೆಯುವುದಿಲ್ಲ. ಹೀಗಾಗಿ ಕಲಾವಿದರಿಗೂ ಈ ಮಳೆಗಾಲದ ಸಂದರ್ಭದಲ್ಲಿ ರಜೆಯ ಸಮಯವಾಗಿದೆ. ಜನರಿಗೂ ಮನರಂಜನೆ ರಹಿತ ದಿನಗಳಾಗಿವೆ.
ಯಕ್ಷಗಾನದಲ್ಲಿ ದೈವಿಕ ಶಕ್ತಿಯನ್ನು ಕಾಣುವ ಕರಾವಳಿ ಜನರು, ಯಕ್ಷಗಾನವನ್ನು ಹರಕೆಯ ರೂಪದಲ್ಲಿ ನೋಡುತ್ತಾರೆ. ಪ್ರತೀ ಯಕ್ಷಗಾನ ಮೇಳಗಳು ದೇವಸ್ಥಾನಗಳ ಹಿನ್ನಲೆಯಿಂದ ಬಂದಿರುತ್ತದೆ. ಮಳೆಗಾಲದ ಈ ಸಂದರ್ಭದಲ್ಲಿ ಯಕ್ಷಗಾನ ಬಯಲಾಟ ಇಲ್ಲದೇ ಇರುವುದರಿಂದ ಚಿಕ್ಕ ಮೇಳಗಳು ಮನೆ ಮನೆಗೆ ಹೋಗಿ ಯಕ್ಷಗಾನದ ಚಿಕ್ಕ ಪ್ರಸಂಗವನ್ನು ಆಡಿ ತೋರಿಸುತ್ತದೆ.
ಆಸ್ಕರ್ ಫರ್ನಾಂಡೀಸ್ ಆರೋಗ್ಯ ವಿಚಾರಿಸಿದ ಜನಾರ್ದನ ಪೂಜಾರಿ
ಮನೆ ಮನೆಗೆ ತೆರಳಿ ದೇವರ ಫೋಟೋವನ್ನಿಟ್ಟು, ಅದಕ್ಕೆ ಪೂಜೆ ಮಾಡಿ ಯಕ್ಷಗಾನದ ಪ್ರಸಂಗ ಮಾಡಲಾಗುತ್ತದೆ. ಪೌರಾಣಿಕ ಪ್ರಸಂಗಗಳನ್ನೇ ಈ ವೇಳೆ ಆಡಿ ತೋರಿಸಲಾಗುತ್ತದೆ. ಇಬ್ಬರು ವೇಷಧಾರಿಗಳು, ಭಾಗವತರು, ಮದ್ದಳೆಗಾರರು ಸೇರಿದಂತೆ ಸಹಾಯಕರು ಈ ಚಿಕ್ಕ ಮೇಳದ ತಂಡದಲ್ಲಿರುತ್ತಾರೆ. ಇವರೆಲ್ಲರೂ ಹವ್ಯಾಸಿ ಕಲಾವಿದರಾಗಿರುತ್ತಾರೆ.
ಸಂಜೆಯಾಗುತ್ತಿದ್ದಂತೆಯೇ ಪ್ರತಿ ಮನೆಗೆ ತೆರಳುವ ಚಿಕ್ಕಮೇಳದ ಕಲಾವಿದರು, ಸುಮಾರು 15 ನಿಮಿಷಗಳ ಪ್ರದರ್ಶನ ನೀಡಿ, ದೇವರಿಗೆ ಮಂಗಳಾರತಿ ಬೆಳಗಿ ತೆರಳುತ್ತಾರೆ. ಹೀಗೆ ಮಾಡುವುದರಿಂದ ಮನೆಯ ಸಂಕಷ್ಟಗಳೆಲ್ಲಾ ದೂರವಾಗಿ ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಪ್ರಾಪ್ತಿಯಾಗಲಿದೆ ಎನ್ನುವ ನಂಬಿಕೆ ಕರಾವಳಿಯ ಜನರಲ್ಲಿದೆ.
ಹೀಗೆ ಮನೆ ಮನೆಗೆ ತೆರಳಿದ ಸಂದರ್ಭದಲ್ಲಿ ಜನರು ಶಕ್ತಿಯಾನುಸಾರವಾಗಿ ನೀಡುವ ಹಣದಿಂದ ಕಲಾವಿದರು ವೇತನವನ್ನು ಪಡೆಯುತ್ತಾರೆ. ಈ ಚಿಕ್ಕ ಮೇಳಗಳೂ ದೇವಸ್ಥಾನದಿಂದಲೇ ಹೊರಡುವುದರಿಂದ ಜನರು ನೀಡಿದ ಹಣದಲ್ಲಿ ದೇವಸ್ಥಾನಕ್ಕೂ ನೀಡಲಾಗುತ್ತದೆ. ಬೆಳ್ತಂಗಡಿಯ ನಾಳ ದುರ್ಗಾಪರಮೇಶ್ವರಿ ದೇವಸ್ಥಾನ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ದೇವಸ್ಥಾನಗಳು ಚಿಕ್ಕಮೇಳಗಳನ್ನು ಹೊಂದಿದೆ.