ಅಫ್ಘಾನಿಸ್ತಾನದಲ್ಲಿದ್ದ ಗಂಡನ ಸುರಕ್ಷತೆಗಾಗಿ ಕೊರಗಜ್ಜನಿಗೆ ಹರಕೆ ಹೊತ್ತಿದ್ದ ಪತ್ನಿ!
ಮಂಗಳೂರು, ಆಗಸ್ಟ್ 23: ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಕನ್ನಡಿಗರನ್ನು ಯಶಸ್ವಿಯಾಗಿ ತಾಯ್ನಾಡಿಗೆ ಕರೆ ತರುವ ಕೆಲಸವನ್ನು ಭಾರತ ಸರ್ಕಾರ ಮತ್ತು ಭಾರತೀಯ ವಾಯುಸೇನೆ ಮಾಡುತ್ತಿದೆ.
ಅಫ್ಘಾನಿಸ್ತಾನದಲ್ಲಿ ಸಿಲುಕಿಹಾಕಿಕೊಂಡಿದ್ದ ಮಂಗಳೂರು ಮೂಲದ ಐದು ಮಂದಿ ಸುರಕ್ಷಿತವಾಗಿ ಮಂಗಳೂರಿಗೆ ಮರಳಿದ್ದಾರೆ. ಅಫ್ಘಾನಿಸ್ತಾನದ ಕಾಬೂಲ್ನಲ್ಲಿ ಅಮೆರಿಕ ಮಿಲಿಟರಿ ಅಡಿಯಲ್ಲಿ ಅಕೌಂಟೆಂಟ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಂಗಳೂರು ನಗರ ಹೊರವಲಯ ಕೊಲ್ಯದ ಕನ್ನೀರ್ತೋಟ ನಿವಾಸಿ ಪ್ರಸಾದ್ ಆನಂದ್ ಸುರಕ್ಷಿತವಾಗಿ ಮನೆಗೆ ಮರಳಿದ್ದಾರೆ. ಕಾಬೂಲ್ನಿಂದ ಒಟ್ಟು ಐದು ಮಂದಿ ಮಂಗಳೂರು ಮೂಲದರು ಏರ್ಲಿಫ್ಟ್ ಆಗಿದ್ದು, ಸುರಕ್ಷಿತವಾಗಿ ತಲುಪಿದ್ದಾರೆ.
ಕಾಬೂಲ್ನಲ್ಲಿ ಕಳೆದ ಹತ್ತು ವರ್ಷಗಳಿಂದ ಅಕೌಂಟೆಂಟ್ ಆಗಿದ್ದ ಪ್ರಸಾದ್ ಆನಂದ್ ಆಗಸ್ಟ್ 23ರ ಬೆಳಗ್ಗೆ ಮನೆಗೆ ತಲುಪಿದ್ದಾರೆ. ಕಾಬೂಲ್ನ ಕರಾಳ ನೆನಪನ್ನು ಮೆಲುಕು ಹಾಕಿದ ಪ್ರಸಾದ್, ಇನ್ಮುಂದೆ ಎಂದೂ ಅಫ್ಘಾನಿಸ್ತಾನದ ಕಡೆ ಹೋಗಲ್ಲ ಎಂದು ಹೇಳಿದ್ದಾರೆ.
ನ್ಯಾಟೋ ಪಡೆಯಲ್ಲಿ ಪ್ರಸಾದ್ ಆನಂದ್ ಕೆಲಸ ಮಾಡುತ್ತಿದ್ದರು
ಅಮೆರಿಕ ಮಿಲಿಟರಿಯ ನ್ಯಾಟೋ ಪಡೆಯ ಅಡಿಯಲ್ಲಿ ಮಂಗಳೂರಿನ ಪ್ರಸಾದ್ ಆನಂದ್ ಕೆಲಸ ಮಾಡುತ್ತಿದ್ದು, ಅಮೆರಿಕ ಎಂಬಸ್ಸಿಯೇ ಅಮೆರಿಕ ವಾಯುಸೇನಾ ವಿಮಾನದ ಮೂಲಕ ಕಾಬೂಲ್ನಿಂದ ಕತಾರ್ಗೆ ಸುರಕ್ಷಿತವಾಗಿ ರವಾನೆ ಮಾಡಿದ್ದಾರೆ. ನಂತರ ಭಾರತೀಯ ವಾಯುಸೇನೆಯ ವಿಮಾನದ ಮೂಲಕ ದೆಹಲಿಯನ್ನು ತಲುಪಿ, ದೆಹಲಿಯಿಂದ ಯಶಸ್ವಿಯಾಗಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾರೆ.
ನಮ್ಮ ನೆಲೆಗೆ ನ್ಯಾಟೋ ಪಡೆ ಭದ್ರತೆ
ಮನೆಗೆ ಬಂದ ಬಳಿಕ ಮಾತನಾಡಿದ ಮಾತನಾಡಿದ ಪ್ರಸಾದ್ ಆನಂದ್, "ಕಳೆದ ಹತ್ತು ವರ್ಷಗಳಿಂದ ಕಾಬೂಲ್ನಲ್ಲಿ ಉದ್ಯೋಗ ಮಾಡುತ್ತಿದ್ದೇನೆ. ವರ್ಷಕ್ಕೆ ಎರಡು ಬಾರಿ ಮನೆಗೆ ಬಂದು ಹೋಗುತ್ತಿದ್ದೆ. ಇಲ್ಲಿಯವರೆಗೆ ಯಾವ ಸಮಸ್ಯೆಯೂ ಉಂಟಾಗಿಲ್ಲ. ಆದರೆ ಕಳೆದ ಎರಡ್ಮೂರು ತಿಂಗಳುಗಳಿಂದ ಪರಿಸ್ಥಿತಿ ಸ್ವಲ್ಪ ಬಿಗಾಡಾಯಿಸುತ್ತಾ ಬಂದಿದೆ. ಅಮೆರಿಕ ರಾಯಭಾರಿ ಕಚೇರಿ ನಮ್ಮನ್ನು ಮರಳಿ ಭಾರತಕ್ಕೆ ತೆರಳಬೇಕಾದೀತು ಎಂದು ಎಚ್ಚರಿಸಿತ್ತು. ನಮ್ಮ ನೆಲೆಗೆ ನ್ಯಾಟೋ ಪಡೆ ಭದ್ರತೆ ಇರುವುದರಿಂದ ಯಾವುದೇ ಸಮಸ್ಯೆಯಾಗಿಲ್ಲ. ಆದರೆ ಕಾಬೂಲ್ನ ಬೇರೆಡೆ ಭಾರೀ ಸಮಸ್ಯೆಯಾಗಿದೆ. ತಾಲಿಬಾನಿಗಳ ಕ್ರೂರತೆಯ ಬಗ್ಗೆ ಆತಂಕವಿತ್ತು," ಅಂತಾ ಹೇಳಿದ್ದಾರೆ.
ಕೊರಗಜ್ಜ ದೈವಕ್ಕೆ ಹರಕೆ ಹೇಳಿದ್ದೆ
ಇನ್ನು ಗಂಡ ಪ್ರಸಾದ್ ಆನಂದ್ ಸುರಕ್ಷಿತವಾಗಿ ಮನೆಗೆ ಮರಳಿದ್ದರಿಂದ ಪ್ರಸಾದ್ ಪತ್ನಿ ಭವಿಳಾ ಕೂಡಾ ಖುಷಿಯಾಗಿದ್ದಾರೆ. "ತನ್ನ ಗಂಡನ ಸುರಕ್ಷತೆಗಾಗಿ ದೇವರಿಗೆ ಬೇಡುತ್ತಿದ್ದೆ. ಗಂಡ ಸುರಕ್ಷಿತವಾಗಿ ಮರಳಿ ಬಂದರೆ ಕೊರಗಜ್ಜ ದೈವಕ್ಕೆ ಹರಕೆ ಹೇಳಿದ್ದೆ. ಕೊರಗಜ್ಜ ಕೈ ಬಿಡಲಿಲ್ಲ. ಸುರಕ್ಷಿತವಾಗಿ ಮನೆಗೆ ಬಂದಿದ್ದಾರೆ. ಮನೆಯಲ್ಲಿ ಅಮ್ಮ ಮತ್ತು ಇಬ್ಬರು ಪುಟ್ಟ ಮಕ್ಕಳು ಮಾತ್ರ ಇದ್ದಿದ್ದರಿಂದ ಆತಂಕವನ್ನು ನಿಭಾಯಿಸಲು ಕಷ್ಟವಾಗುತ್ತಿತ್ತು. ಆದರೆ ಈಗ ಎಲ್ಲರ ಸಹಕಾರದೊಂದಿಗೆ ಗಂಡ ಪ್ರಸಾದ್ ಮನೆಗೆ ಸುರಕ್ಷಿತವಾಗಿ ಬಂದಿರುವುದು ತುಂಬಾ ಖುಷಿಯಾಗಿದೆ ಎಂದು ಹೇಳಿದ್ದಾರೆ. ಇನ್ನು ಮನೆಯ ಸದಸ್ಯರೂ ಪ್ರಸಾದ್ ಸುರಕ್ಷಿತವಾಗಿ ಮನೆಗೆ ಮರಳಿರುವುದು ಸಾಕ್ಷಾತ್ ದೇವರೇ ಬಂದಂತೆ ಆಗಿದೆ," ಅಂತಾ ಹರ್ಷ ವ್ಯಕ್ತಪಡಿಸಿದ್ದಾರೆ.
ಶಾಸಕ ಯು.ಟಿ. ಖಾದರ್ ಭೇಟಿ
ಇನ್ನು ಪ್ರಸಾದ್ ವಾಸವಿರುವ ಕೊಲ್ಯದ ಕನ್ನೀರ್ತೋಟ ಮನೆಗೆ ಮಾಜಿ ಸಚಿವ, ಉಳ್ಳಾಲ ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ. ಖಾದರ್ ಭೇಟಿ ನೀಡಿದ್ದಾರೆ. ಪ್ರಸಾದ್ ಜೊತೆ ಅಫ್ಘಾನಿಸ್ತಾನ ಪರಿಸ್ಥಿತಿಯನ್ನು ಖಾದರ್ ಸಮಾಲೋಚನೆ ಮಾಡಿದ್ದಾರೆ. ಅಲ್ಲದೇ ಏರ್ಲಿಫ್ಟ್ ಬಗ್ಗೆಯೂ ಮಾಹಿತಿ ಕೇಳಿದ್ದಾರೆ. ಪ್ರಸಾದ್ ಮನೆಯವರ ಜೊತೆಯೂ ಕುಶಲೋಪಚಾರಿ ವಿಚಾರಿಸಿದ ಯುಟಿ ಖಾದರ್, "ಸುರಕ್ಷಿತವಾಗಿ ಮನೆಗೆ ಬಂದಿರುವುದರಿಂದ ನನಗೂ ಖುಷಿಯಾಗಿದೆ," ಅಂತಾ ಹೇಳಿದ್ದಾರೆ.
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮಾಜಿ ಸಚಿವ ಯು.ಟಿ. ಖಾದರ್, "ನನ್ನ ಕ್ಷೇತ್ರದ ಹಲವು ಮಂದಿ ಈಗಾಗಲೇ ರಕ್ಷಣೆಯಾಗಿದ್ದಾರೆ. ಇನ್ನೂ ಕೆಲವು ಮಂದಿ ಅಫ್ಘಾನಿಸ್ತಾನದಲ್ಲಿರುವ ಬಗ್ಗೆ ಮಾಹಿತಿ ಇದೆ. ಈಗಾಗಲೇ ಸಿಎಂ ಬಸವರಾಜ ಬೊಮ್ಮಾಯಿಗೆ ಈ ಕುರಿತು ಮನವಿ ಮಾಡಿದ್ದೇನೆ. ಎಲ್ಲರನ್ನೂ ಸುರಕ್ಷಿತವಾಗಿ ಕರೆ ತರುವ ಕೆಲಸ ನಡೆಯುತ್ತಿದೆ. ಇದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ," ಎಂದು ಕೊಲ್ಯದಲ್ಲಿ ಮಾಜಿ ಸಚಿವ ಯು.ಟಿ. ಖಾದರ್ ಹೇಳಿಕೆ ನೀಡಿದರು.ಮತ್ತೆ ನಾಲ್ವರು ಕನ್ನಡಿಗರು ಮಂಗಳೂರಿಗೆ ವಾಪಸ್
ಪ್ರಸಾದ್ ಜೊತೆಗಿದ್ದ ಮತ್ತೆ ನಾಲ್ವರು ಕನ್ನಡಿಗರು ಮಂಗಳೂರಿಗೆ ಆಗಮಿಸಲಿದ್ದಾರೆ. ದೆಹಲಿಯಿಂದ ಮುಂಬೈ ಬಂದು ಬಳಿಕ ಮಂಗಳೂರಿಗೆ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಫ್ಘಾನಿಸ್ತಾನದಿಂದ ಬಂದ ಐವರಿಗೂ ಕೋವಿಡ್ ನೆಗೆಟಿವ್ ದಾಖಲಾದ ಹಿನ್ನಲೆಯಲ್ಲಿ ತಾಯ್ನಾಡಿನತ್ತ ಕನ್ನಡಿಗರು ಮರಳಿದ್ದಾರೆ.
ಮಂಗಳೂರಿನ ಬಿಜೈ ನಿವಾಸಿ ಶ್ರವಣ್ ಅಂಚನ್, ಮೂಡಬಿದ್ರೆಯ ಜಗದೀಶ್ ಪೂಜಾರಿ, ಬಜಪೆ ನಿವಾಸಿ ದಿನೇಶ್ ರೈ, ಕಿನ್ನಿಗೋಳಿ ಪಕ್ಷಿಕೆರೆ ನಿವಾಸಿ ಡೇವಿಡ್ ಡಿಸೋಜಾ ಕಾಬೂಲ್ನಿಂದ ಆಗಮಿಸಲಿರುವ ಕನ್ನಡಿಗರಾಗಿದ್ದಾರೆ.