ಸುಳ್ಯ ಶಾಸಕ ಅಂಗಾರ ಅವರಿಗೆ ಒಲಿದು ಬರಲಿದೆಯೇ ಸಚಿವ ಸ್ಥಾನ?
ಮಂಗಳೂರು, ಜುಲೈ 29: ಸೋಮವಾರ ಸದನದಲ್ಲಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ಮತ ಯಾಚಿಸಿ ಬಹುಮತ ಸಾಬೀತುಪಡಿಸಿದ್ದಾರೆ. ಈಗ ಎಲ್ಲೆಲ್ಲೂ ಸರ್ಕಾರ ರಚನೆಯ ಮಾತುಕತೆ. ಈ ನಡುವೆ ಬಿಜೆಪಿ ಪಾಳಯದಲ್ಲಿ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ಪೈಪೋಟಿಯೂ ಶುರುವಾಗಿದೆ.
ದಕ್ಷಿಣ ಕನ್ನಡದ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲೂ ಭಾರೀ ಲೆಕ್ಕಾಚಾರ ನಡೆಯುತ್ತಿದೆ. ಸುಳ್ಯ ವಿಧಾನಸಭಾ ಕ್ಷೇತ್ರ ರಚನೆಯಾಗಿ 57 ವರ್ಷವಾದರೂ ಸುಳ್ಯದಿಂದ ಚುನಾಯಿತರಾದ ಶಾಸಕರಾರಿಗೂ ಇದುವರೆಗೆ ಮಂತ್ರಿಗಿರಿ ಲಭಿಸಿಲ್ಲ. ಆದರೆ ಈ ಬಾರಿ ಸುಳ್ಯದ ಸೋಲಿಲ್ಲದೆ ಸರದಾರ ಎಂದೇ ಹೇಳಲಾಗುವ ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ದೊರಕಲಿದೆ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ಒತ್ತಾಯ ಕೂಡ ಕೇಳಿ ಬರತೊಡಗಿದೆ.
ನೂತನ ಬಿಜೆಪಿ ಸರ್ಕಾರದಲ್ಲಿ ದಕ್ಷಿಣ ಕನ್ನಡದ ಯಾರಿಗೆ ಒಲಿಯುತ್ತೆ ಸಚಿವ ಸ್ಥಾನ?
ಪುತ್ತೂರು ವಿಧಾನಸಭಾ ಕ್ಷೇತ್ರದೊಂದಿಗೆ ಸೇರಿದ್ದ ಸುಳ್ಯ ತಾಲೂಕು ಪ್ರತ್ಯೇಕಗೊಂಡು ಹೊಸ ಕ್ಷೇತ್ರವಾದ ನಂತರ 14 ಬಾರಿ ಚುನಾವಣೆ ಎದುರಿಸಿದೆ. ಇಲ್ಲಿನ ಜನಪ್ರತಿನಿಧಿಗಳು ಆಡಳಿತ ಪಕ್ಷದ ಸದಸ್ಯರಾಗಿದ್ದರೂ ಸಚಿವ ಸ್ಥಾನ ದೊರೆತಿಲ್ಲ. ಆದರೆ ಈ ಬಾರಿ ಬಿಜೆಪಿ ಸರಕಾರ ರಚನೆಯಲ್ಲಿ ಮೀಸಲು ಕ್ಷೇತ್ರವಾಗಿರುವ ಸುಳ್ಯವನ್ನು ಸತತ ಆರನೇ ಬಾರಿಗೆ ಪ್ರತಿನಿಧಿಸುತ್ತಿರುವ ಎಸ್. ಅಂಗಾರ ಅವರಿಗೆ ಸಚಿವ ಸ್ಥಾನ ದೊರೆಯುವ ಸಾಧ್ಯತೆ ಹೆಚ್ಚು ಅನ್ನುವ ಚರ್ಚೆ ಬಿರುಸು ಪಡೆದಿದೆ. ಎಸ್.ಅಂಗಾರ ಅವರು ಜಿಲ್ಲೆಯ ಹಿರಿಯ ರಾಜಕಾರಣಿ ಕೂಡ. ಈ ಹಿನ್ನೆಲೆಯಲ್ಲಿ ಲೆಕ್ಕಾಚಾರ ಆರಂಭವಾಗಿದೆ.
ಸುಳ್ಯವು ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಮೀಸಲು ಕ್ಷೇತ್ರವಾದುದು 1962ರಲ್ಲಿ. ಆ ಬಳಿಕ ಇಲ್ಲಿಂದ ಪ್ರಥಮವಾಗಿ ಸ್ವತಂತ್ರ ಪಕ್ಷದ ರಾಮಚಂದ್ರ ಗೆದ್ದರು. ಅನಂತರ ಪಿ.ಡಿ.ಬಂಗೇರ, ಎ. ರಾಮಚಂದ್ರ, ಬಾಕಿಲ ಹುಕ್ರಪ್ಪ, ಕೆ.ಕುಶಲ, ಅಂಗಾರ ಅವರಿಗೆ ಗೆಲುವು ಲಭಿಸಿತ್ತು. ಎಸ್ ಅಂಗಾರ ಗರಿಷ್ಠ ಅವಧಿಯಿಂದ ಶಾಸಕರಾಗಿದ್ದಾರೆ.
ಸುಳ್ಯ ತಾಲೂಕಿನವರಾಗಿ, ಬೇರೆ ಕ್ಷೇತ್ರದಿಂದ ಗೆದ್ದವರು ಮುಖ್ಯಮಂತ್ರಿ, ಕೇಂದ್ರ-ರಾಜ್ಯದಲ್ಲಿ ಸಚಿವರಾದ ಉದಾಹರಣೆಗಳಿವೆ. ಸುಳ್ಯ ತಾಲೂಕಿನವರಾದ ಡಿ.ವಿ. ಸದಾನಂದ ಗೌಡ ಮುಖ್ಯಮಂತ್ರಿಯಾಗಿ ಈಗ ಕೇಂದ್ರದಲ್ಲಿ ಸಚಿವರಾಗಿದ್ದಾರೆ. ಸುಳ್ಯ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವವರಿಗೆ ಆ ಭಾಗ್ಯ ಇನ್ನೂ ಸಿಕ್ಕಿಲ್ಲ. ಸುಳ್ಯವು ಪುತ್ತೂರು ವಿಧಾನಸಭಾ ಕ್ಷೇತ್ರದ ಭಾಗವಾಗಿದ್ದಾಗ 1952, 57 ಮತ್ತು 62ರಲ್ಲಿ ಬಾಳುಗೋಡು ನಿವಾಸಿ, ನ್ಯಾಯವಾದಿ ಕೂಜುಗೂಡು ವೆಂಕಟರಮಣ ಗೌಡ 3 ಅವಧಿಗೆ ಶಾಸಕರಾಗಿದ್ದರು. ಆಗ ಅವರಿಗೆ ನಿಜಲಿಂಗಪ್ಪ ಸರಕಾರದಲ್ಲಿ ಉಪ ಸಚಿವ ಸ್ಥಾನದ ಆಹ್ವಾನ ಬಂದಿತ್ತು.
ಎಲ್ಲಾ ಅತೃಪ್ತರು ಆಲ್ ಔಟ್: ಬಿಜೆಪಿಗೆ ಇದರಿಂದ ಅನುಕೂಲವೇ ಜಾಸ್ತಿ!
ಆದರೆ ಕ್ಯಾಬಿನೆಟ್ ಸ್ಥಾನದ ನಿರೀಕ್ಷೆಯಲ್ಲಿದ್ದ ಗೌಡರು ಅವಕಾಶವನ್ನು ತಿರಸ್ಕರಿಸಿದ್ದರು. ಬಳಿಕ 2008ರ ಬಿಜೆಪಿ ಸರಕಾರದಲ್ಲಿ ಎಸ್.ಅಂಗಾರ ಅವರಿಗೆ ಸಚಿವ ಸ್ಥಾನ ದೊರೆಯಲಿದೆ ಎಂಬ ನಿರೀಕ್ಷೆಯಿದ್ದರೂ ಹುಸಿಯಾಗಿತ್ತು. ಆದರೆ ಈ ಬಾರಿಯಾದರೂ ಅಂಗಾರ ಅವರಿಗೆ ಸಚಿವ ಸ್ಥಾನ ದೊರಕಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ.