ಮಹಿಳೆಯರಿಗೆ ಮಚ್ಚಿನೇಟು; ಆರೋಪಿ ಕೊಟ್ಟ ಕಾರಣಕ್ಕೆ ಪೊಲೀಸರು ತಬ್ಬಿಬ್ಬು!
ಮಂಗಳೂರು, ಸೆಪ್ಟೆಂಬರ್ 20; ಮಂಗಳೂರಿನಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗೆ ನುಗ್ಗಿ ಮಹಿಳಾ ಸಿಬ್ಬಂದಿಗಳ ಮೇಲೆ ತಲ್ವಾರ್ನಿಂದ ದಾಳಿ ನಡೆಸಿದ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಕುಂದಾಪುರ ಮೂಲದ ನವೀನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಮಹಿಳಾ ಸಿಬ್ಬಂದಿ ಮೇಲೆ ದಾಳಿ ಮಾಡಿದ ಕಾರಣವನ್ನು ಆರೋಪಿ ನವೀನ್ ಎಳೆ ಎಳೆಯಾಗಿ ತೆರೆದಿಟ್ಟಿದ್ದಾನೆ.
ಮಂಗಳೂರು ನಗರದ ಕರಂಗಲಪಾಡಿಯಲ್ಲಿರುವ ಡಯಟ್ ಸಂಸ್ಥೆಗೆ ಸೋಮವಾರ ಮಧ್ಯಾಹ್ನ ನುಗ್ಗಿದ್ದ ನವೀನ್ ಅಟ್ಟಹಾಸ ಮೆರೆದಿದ್ದ. ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಒಳಗೆ ಲೆಕ್ಚರರ್ ಒಬ್ರಿಗೆ ಗಿಫ್ಟ್ ಕೊಡುವ ನೆಪದಲ್ಲಿ ಬಂದಿದ್ದ ಆರೋಪಿ ಮೂವರು ಮಹಿಳಾ ಸಿಬ್ಬಂದಿಗಳ ಮೇಲೆ ತಲ್ವಾರ್ನಿಂದ ಹಲ್ಲೆ ಮಾಡಿದ್ದ.
ಮಂಗಳೂರು ಶಿಕ್ಷಣ ತರಬೇತಿ ಕೇಂದ್ರಕ್ಕೆ ನುಗ್ಗಿ ತಲ್ವಾರ್ ಬೀಸಿದ ಹಳೇ ವಿದ್ಯಾರ್ಥಿ
ಘಟನೆಯಲ್ಲಿ ಸಿಬ್ಬಂದಿಗಳಾದ ನಿರ್ಮಲಾ, ರೀನಾ ರಾಯ್, ಗುಣವತಿ ಎಂಬುವರಿಗೆ ಗಾಯವಾಗಿದ್ದು ನಿರ್ಮಲಾ ಅವರ ಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಿರ್ಮಲಾ ತಲೆಗೆ ಏಟಾಗಿದ್ದು,ರಕ್ತಸ್ರಾವವಾಗಿದೆ. ರೀನಾ ರಾಯ್ ಎಂಬುವವರ ಮುಖಕ್ಕೆ ತಲ್ವಾರ್ ಏಟು ಬಿದ್ದಿದೆ. ಸದ್ಯ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
12 ವರ್ಷದ ಬಳಿಕ ಅಸ್ಸಾಂನ ಕುಟುಂಬ ಸೇರಿದ ಉಡುಪಿಯಲ್ಲಿದ್ದ ಮಹಿಳೆ
ಇನ್ನು ಆರೋಪಿ ನವೀನ್ ಬಂಧನವಾಗಿದ್ದು ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ. ವಿಚಾರಣೆ ವೇಳೆ ಮಂಗಳೂರು ಪೊಲೀಸರಿಗೆ ಭಯಾನಕ ವಿಚಾರ ಗೊತ್ತಾಗಿದೆ. ಆರೋಪಿ ನವೀನ್ ಕುಂದಾಪುರದ ನ್ಯಾಯಾಲಯದಲ್ಲಿ ಜವಾನ ಕೆಲಸ ಮಾಡುತ್ತಿದ್ದ. ಇದಕ್ಕೂ ಮುನ್ನ ಶಿಕ್ಷಕನಾಗುವ ಗುರಿಯೊಂದಿಗೆ ಮಂಗಳೂರಿನ ಡಯೆಟ್ ಶಿಕ್ಷಣ ಕೇಂದ್ರದಲ್ಲಿ ತರಬೇತಿಗೆಂದು ಹಾಜರಾಗಿದ್ದ. ಆದರೆ ಈ ಸಂದರ್ಭದಲ್ಲೂ ಇತರರೊಂದಿಗೆ ಜಗಳವಾಡುತ್ತಾ ಅಶಾಂತಿ ಸೃಷ್ಟಿಸುತ್ತಿದ್ದ. ತರಬೇತಿ ಪಡೆಯುತ್ತಿದ್ದ ಸಂದರ್ಭದಲ್ಲಿ ವೀಣಾ ಎಂಬ ಶಿಕ್ಷಕಿಯ ಜೊತೆ ಆರೋಪಿ ನವೀನ್ ಪದೇ ಪದೇ ಜಗಳ ಮಾಡುತ್ತಿದ್ದ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಇದೇ ಕಾರಣಕ್ಕಾಗಿ ಆರೋಪಿ ನವೀನ್ನನ್ನು ತರಬೇತಿ ಕೇಂದ್ರದಿಂದ ಹೊರಹಾಕಿದ್ದರು. ಇದೇ ದ್ವೇಷದಿಂದ ನವೀನ್ ಈಗ ದಾಳಿ ಮಾಡಿದ್ದಾನೆ ಎಂದು ತಿಳಿದುಬಂದಿದೆ. ನಾನು ವಿಧ್ಯಾಭ್ಯಾಸ ಮಾಡುತ್ತಿದ್ದಾಗ ನನ್ನನ್ನು ಶಿಕ್ಷಕಿ ವೀಣಾ ಅವಮಾನ ಮಾಡುತ್ತಿದ್ದರು. ಎಲ್ಲರ ಎದುರು ನಿಂದಿಸುತ್ತಿದ್ದರು. ವಿನಾಕಾರಣ ಕ್ಲಾಸ್ನಲ್ಲಿ ನನಗೆ ಕಿರುಕುಳ ನೀಡುತ್ತಿದ್ದರು ಎಂದು ಹೇಳಿದ್ದಾನೆ.
ಯಾದಗಿರಿ; ಮಹಿಳೆ ನಗ್ನಗೊಳಿಸಿ ಹಲ್ಲೆ, ಇಬ್ಬರಿಂದ ಅತ್ಯಾಚಾರ
ಶಿಕ್ಷಕಿ ವೀಣಾ ಮತ್ತು ಅಲೋಷಿಯಸ್ ಕಾಲೇಜಿನ ಓರ್ವ ವಿದ್ಯಾರ್ಥಿ ಜೊತೆ ಸೇರಿ ನನ್ನ ಮೇಲೆ ಮಾಟ ಮಾಡಿಸಿದ್ದಾರೆ. ಅವರ ಮಾಟದಿಂದ ನನಗೆ ಈಗಲೂ ತೊಂದರೆಯಾಗುತ್ತಿದೆ. ಹೀಗಾಗಿ ನನ್ನ ಮೇಲೆ ಮಾಡಿರುವ ಮಾಟ ತೆಗೆಯಿರಿ ಅಂತಾ ಹೇಳೋಕೆ ಹೋಗಿದ್ದೆ. ಆದರೆ ಅವರು ತರಬೇತಿ ಕೇಂದ್ರದಲ್ಲಿ ಇಲ್ಲದ ಕಾರಣ ಕೋಪದಿಂದ ಬೇರೆಯವರ ಮೇಲೆ ದಾಳಿ ಮಾಡಿದೆ ಅಂತಾ ಆರೋಪಿ ನವೀನ್ ಬಾಯಿ ಬಿಟ್ಟಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, "ಆರೋಪಿ ನವೀನ್ ಮಾನಸಿಕ ಖಾಯಿಲೆಯನ್ನು ಹೊಂದಿದ್ದಾನೆ. ಈತ ಕ್ಷಣಕ್ಕೊಮ್ಮೆ ವ್ಯಾಘ್ರನಾಗುತ್ತಾನೆ. ತನಗೆ ಈ ಸಮಸ್ಯೆ ಆಗೋಕೆ ಶಿಕ್ಷಕಿ ವೀಣಾ ಕಾರಣ ಅಂತಾ ಅಂದುಕೊಂಡು ಅವರ ಜೊತೆ ನೇರಾ ನೇರಾ ಮಾತನಾಡುವ ನಿರ್ಧಾರ ಮಾಡಿದ್ದಾನೆ. ಈ ವೇಳೆ ಗಲಾಟೆಯಾದರೆ ಹತ್ಯೆ ಮಾಡುವ ಉದ್ದೇಶದಿಂದ ಕುಂದಾಪುರದಲ್ಲಿ ಕತ್ತಿಯನ್ನು ಖರೀದಿಸಿದ್ದ. ಕತ್ತಿಯನ್ನು ಬ್ಯಾಗ್ ನಲ್ಲಿರಿಸಿ ಡಯೆಟ್ ಕೇಂದ್ರಕ್ಕೆ ಬಂದಿದ್ದಾನೆ. ಬಳಿಕ ವೀಣಾ ಅವರು ಇಲ್ಲದೇ ಇದ್ದಿದ್ದರಿಂದ ಮೂವರ ಮೇಲೆ ದಾಳಿ ಮಾಡಿದ್ದಾನೆ" ಎಂದು ಹೇಳಿದ್ದಾರೆ.
Recommended Video
ಮಂಗಳೂರು ಪೊಲೀಸರು ಆರೋಪಿ ನವೀನ್ ವಿಚಾರಣೆಯನ್ನು ತೀವ್ರಗೊಳಿಸಿದ್ದು ಹಲ್ಲೆ ಮಾಡಲು ಇನ್ನೂ ಬೇರೆ ಕಾರಣ ಇದೆಯಾ? ಎಂಬುವುದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ.