ಟಿಪ್ಪು ಹೆಸರು ಹೇಳಿದರೆ ಮಂಗಳೂರಿನ ಕ್ರೈಸ್ತರ ರಕ್ತ ಕುದಿಯುವುದೇಕೆ?
Recommended Video
ಮಂಗಳೂರು, ನವೆಂಬರ್ 09 : ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗೆ ಕ್ಷಣ ಗಣನೆ ಆರಂಭವಾಗುತ್ತಿದ್ದಂತೆ ರಾಜ್ಯದಾದ್ಯಂತ ಟಿಪ್ಪು ಜಯಂತಿಗೆ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯ ಸರಕಾರ ನವೆಂಬರ್ 10ರಂದು ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ರಸ್ತೆಗಿಳಿದು ಪ್ರತಿಭಟನೆ ಆರಂಭಿಸಿದೆ.
ಮೈಸೂರು ರಾಜ್ಯವನ್ನಾಳಿದ ಸುಲ್ತಾನ್ ಫತೇಹ್ ಅಲಿ ಸಹಾಬ್ ಟಿಪು ಅಲಿಯಾಸ್ ಟಿಪ್ಪು ಸುಲ್ತಾನ್ ಒಬ್ಬ ವೀರ, ಸ್ವಾತಂತ್ರ್ಯ ಹೋರಾಟಗಾರ ಎಂಬ ವಾದ ಒಂದೆಡೆಯಾದರೆ, ಟಿಪ್ಪು ಸುಲ್ತಾನ್ ಒಬ್ಬ ಮತಾಂಧ, ಪ್ರಜಾಪೀಡಕ, ದಾಳಿ ಕೋರ, ನರಹಂತಕ ಎನ್ನುವ ವಿರೋಧ ಹೇಳಿಕೆ ಇನ್ನೊಂದೆಡೆ.
ಸ್ವಾತಂತ್ರ್ಯ ಯೋಧ ಟಿಪ್ಪು ಸುಲ್ತಾನ್ -ಜಯಂತಿ, ಆಚರಣೆ ಅಗತ್ಯವೇನು?
ಟಿಪ್ಪು ಸುಲ್ತಾನ್ ವಿರುದ್ಧ ಕೊಡವರಿಗೆ ಹೇಗೆ ಆಕ್ರೋಶವಿದೆಯೋ ಆದೇ ರೀತಿ ಕರಾವಳಿಯ ಕ್ರೈಸ್ತರಿಗೆ ಟಿಪ್ಪು ಸುಲ್ತಾನ್ ಕುರಿತು ವೈರತ್ವವಿದೆ. ಕ್ರೈಸ್ತರ ಮೇಲೆ ಟಿಪ್ಪು ಸುಲ್ತಾನ್ ನಡೆಸಿದ ಕೌರ್ಯ, ದಬ್ಬಾಳಿಕೆ, ದಾಳಿಯನ್ನು ಮಂಗಳೂರಿನ ಕ್ರೈಸ್ತರು ಇಂದಿಗೂ ಮರೆತಿಲ್ಲ. ಮಂಗಳೂರು ಹೊರವಲಯದ ಕಿರೆಂ ರೆಮದಿ ಚರ್ಚ್ ಅಂದು ಟಿಪ್ಪು ಸುಲ್ತಾನ್ ಎಸಗಿದೆ ದಬ್ಬಾಳಿಕೆಗೆ ಸಾಕ್ಷಿಯಾಗಿ ದೌರ್ಜನ್ಯದ ಕತೆಯನ್ನು ಹೇಳುತ್ತದೆ.
ಇತಿಹಾಸದ ಪುಟಗಳು ಈ ಕಥೆಯನ್ನು ಮರೆತಿದ್ದರೂ ಮಂಗಳೂರಿನ ಕ್ರೈಸ್ತರು ಇನ್ನೂ ಮರೆತಿಲ್ಲ. ಟಿಪ್ಪು ಸುಲ್ತಾನ್ ಹೆಸರು ಕೇಳಿದರೆ ಇಂದಿಗೂ ಅವರ ರಕ್ತ ಕುದಿಯುತ್ತದೆ. ಯಾಕೆ ಕುದಿಯುತ್ತದೆ? ಇದರ ಹಿನ್ನೆಲೆಯೇನು? ಕ್ರೈಸ್ತರ ಮೇಲೆ ಟಿಪ್ಪು ಸುಲ್ತಾನ್ ಅಂದು ಎಸಗಿದ ದಬ್ಬಾಳಿಕೆಯಾದರೂ ಎಂಥದು ಎಂಬ ಕಥಾನಕವನ್ನು ಮುಂದೆ ಓದಿರಿ.
ಹಿಂದೂಗಳಿಗೆ ಕ್ರೈಸ್ತರ ಹೊರೆಕಾಣಿಕೆ
ಮಂಗಳೂರಿನಲ್ಲಿ ಅಂದು ಟಿಪ್ಪು ಸುಲ್ತಾನ್ (20 ನವೆಂಬರ್ 1750 - 4 ಮೇ 1799) ನಡೆಸಿದ ಕೌರ್ಯ, ಅದರಿಂದ ಕ್ರೈಸ್ತರನ್ನು ರಕ್ಷಿಸಿದ ಸ್ಥಳೀಯ ಹಿಂದೂ ಕುಟುಂಬಗಳಿಗೆ ಕ್ರೈಸ್ತರು ಪ್ರತಿವರ್ಷ ಹೊರೆಕಾಣಿಕೆ ಅರ್ಪಿಸುವ ಪ್ರತೀತಿ ತಲತಲಾಂತರಗಳಿಂದ ನಡೆಸಿಕೊಂಡು ಬಂದಿದ್ದಾರೆ. ಇಂದಿಗೂ ಮಂಗಳೂರಿನ ಕೀರಂ ಚರ್ಚ್ ನಲ್ಲಿ 3 ಬಂಟ್ ಸಮುದಾಯದ ಕುಟುಂಬಸ್ಥರನ್ನು ಕರೆದು ಸನ್ಮಾನಿಸಿ ಹೊರೆಕಾಣಿಕೆ ಅರ್ಪಿಸಿ ರಾಜ ಮರ್ಯಾದೆ ನೀಡಲಾಗುತ್ತದೆ.
ಹಿಂದೂ ಮನೆತನದವರಿಗೆ ವಿಶೇಷ ಗೌರವ
ಮಂಗಳೂರಿನಿಂದ 30 ಕಿಲೋ ಮೀಟರ್ ದೂರದಲ್ಲಿರುವ ಕಿರೆಂ ರೆಮದಿ ಚರ್ಚ್ ನಲ್ಲಿ ಇಂದಿಗೂ ಈ ಪ್ರತೀತಿ ಪ್ರತಿವರ್ಷ ನಡೆಯುತ್ತದೆ. ಮುಲ್ಕಿಯ ಕಿನ್ನಿಗೋಳಿ ಸಮೀಪದ ದಾಮಸ್ಕಟ್ಟೆಯಲ್ಲಿ ಕಿರೆಂ ರೆಮದಿ ಅಮ್ಮನವರ ಚರ್ಚ್ ಇದೆ. ಐಕಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಈ ಚರ್ಚ್, ಮಂಗಳೂರು ಡಯೋಸಿಸ್ ನ ಅತ್ಯಂತ ಪ್ರಾಚೀನ ಚರ್ಚ್ ಗಳಲ್ಲಿ ಒಂದು. ಈ ಚರ್ಚ್ ನಲ್ಲಿ ಪ್ರತಿವರ್ಷ ವಾರ್ಷಿಕ ಹಬ್ಬದ ದಿನ ಮೂರು ಹಿಂದೂ ಮನೆತನದವರಿಗೆ ಬಾಳೆ ಹಣ್ಣು, ವಿಳ್ಯದೆಲೆ, ಅಡಿಕೆ ಕೊಟ್ಟು ವಿಶೇಷ ಗೌರವ ಸಲ್ಲಿಸಲಾಗುತ್ತದೆ. ದಾಮಸ್ಕಟ್ಟೆಯಲ್ಲಿರುವ ಕಿರೆಂ ರೆಮದಿ ಅಮ್ಮನವರ ಚರ್ಚ್ ಎಂದೇ ಪ್ರಸಿದ್ಧಿ ಹೊಂದಿರುವ ಈ ಚರ್ಚ್, ಸ್ಥಳೀಯ ಕ್ರೈಸ್ತರಿಂದ ನಿರ್ಮಾಣ ಮಾಡಲಾಗಿತ್ತು.
ಮತ್ತೆ ವಿವಾದಲ್ಲಿ ಟಿಪ್ಪು ಜಯಂತಿ : ಯಾರು, ಏನು ಹೇಳಿದರು?
ಕಿರೆಂ ಚರ್ಚ್ ನಾಶಪಡಿಸಲು ಮುಂದಾಗಿದ್ದ ಟಿಪ್ಪು
1784ರಲ್ಲಿ ಟಿಪ್ಪು ಸುಲ್ತಾನ್ ಕಾರವಾರದಿಂದ ಕಾಸರಗೋಡಿನವರೆಗೆ ಕೆನರಾ ಕ್ರೈಸ್ತರ ಮೇಲೆ ದಾಳಿ ಮಾಡಿದ್ದ ಸಂದರ್ಭದಲ್ಲಿ ಕಿರೆಂ ಚರ್ಚ್ ಅನ್ನು ಟಿಪ್ಪು ಸುಲ್ತಾನ್ ನ ಸೇನೆ ನಾಶ ಪಡಿಸಲು ಮುಂದಾಗಿತ್ತು. ಆಗ ಸ್ಥಳೀಯ ಬಂಟ ಸಮುದಾಯದ 3 ಕುಟುಂಬದ ಸದಸ್ಯರು ಟಿಪ್ಪು ಸುಲ್ತಾನ್ ನ ಸೈನ್ಯದ ದಾಳಿಯನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ಸಿಯಾಗಿದ್ದರು.
ಇಲ್ಲಿಯ ಸ್ಥಳೀಯ ಬಂಟ್ ಸಮುದಾಯದ ಐಕಳ ಬಾವ, ತಾಳಿಪಾಡಿ ಗುತ್ತು, ಹಾಗೂ ಏಳಿಂಜೆ ಅಂಗಡಿಗುತ್ತು ಕುಟುಂಬದ ಸದಸ್ಯರು ಹೋರಾಡಿ ಟಿಪ್ಪು ಸೈನಿಕರನ್ನು ಹಿಮ್ಮೆಟ್ಟಿಸಿದ್ದರು. ಈ ಕಾರಣ ಕಿರೆಂ ರೆಮದಿ ಚರ್ಚ್ ನ ವಾರ್ಷಿಕ ಹಬ್ಬದಂದು ಈ ಮೂರು ಬಂಟ ಮನೆತನದವರಿಗೆ ಬಾಳೆ ಹಣ್ಣಿನ ಗೊನೆ, ವೀಳ್ಯದೆಲೆ ಅಡಿಕೆ ನೀಡಿ ವಿಶೇಷ ಗೌರವ ನೀಡಲಾಗುತ್ತದೆ.
ಕ್ರೈಸ್ತರ ಮಾರಣ ಹೋಮದ ಕಥೆ ಹೇಳುವ ನೆತ್ತರ ಕೆರೆ
ಮಾಹಿತಿಯ ಪ್ರಕಾರ, ಮಂಗಳೂರಿನ ಕರಾವಳಿ ಭಾಗದಲ್ಲಿ ಆಗ ಇದ್ದ 27 ಚರ್ಚ್ಗಳಲ್ಲಿ 25 ಚರ್ಚ್ಗಳನ್ನು ಟಿಪ್ಪು ನೆಲಸಮ ಮಾಡಿದ್ದನು ಎಂದು ಹೇಳಲಾಗುತ್ತದೆ. ಮಂಗಳೂರಿನ ಬಾವುಟೆಗುಡ್ಡೆ ಮಸೀದಿಯನ್ನು ಚರ್ಚ್ಗಳನ್ನು ಒಡೆದು ಅದರ ಕಲ್ಲನ್ನು ಬಳಸಿ ಕಟ್ಟಿದ ಮಸೀದಿ ಎಂದು ಹೇಳಲಾಗುತ್ತದೆ. ಸೆರೆಹಿಡಿದ ಕ್ರೈಸ್ತರನ್ನು ಶ್ರಿರಂಗಪಟ್ಟಣಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಸಾವಿರಾರು ಕ್ರೈಸ್ತರನ್ನು ಟಿಪ್ಪು ಭೀಕರವಾಗಿ ಹತ್ಯೆಗೈದ ಎಂದೂ ಇತಿಹಾಸ ಹೇಳುತ್ತದೆ. ಅದಕ್ಕೆ ಸಾಕ್ಷಿಯಂತೆ ಬಂಟ್ವಾಳ ತಾಲ್ಲೂಕಿನಲ್ಲಿರುವ ನೆತ್ತರ ಕೆರೆ ಸಾವಿರಾರು ಕ್ರೈಸ್ತರ ಮಾರಣ ಹೋಮದ ಕತೆ ನುಡಿಯುತ್ತಿದೆ.
ಕೊಡಗಿನಲ್ಲಿ 'ಟಿಪ್ಪು' ಹೆಸರನ್ನ ನಾಯಿಗಳಿಗೆ ಇಡ್ತಾರೆ: ಪ್ರತಾಪ್ ಸಿಂಹ
ಕ್ರೈಸ್ತ ಹುಡುಗನನ್ನು ರಕ್ಷಿಸಿದ್ದ ಬಂಟರು
1784ರಲ್ಲಿ ಟಿಪ್ಪು ಹಲವು ಸಾವಿರ ಕ್ರೈಸ್ತರನ್ನು ಶ್ರೀರಂಗ ಪಟ್ಟಣಕ್ಕೆ ಕರೆದೊಯ್ದು ಬಂಧನದಲ್ಲಿಟ್ಟಿದ್ದನು. ಟಿಪ್ಪು ಸೆರೆಯಲ್ಲಿ ಕೊಂಡೊಯ್ಯುವ ಸಂದರ್ಭದಲ್ಲಿ ಕ್ರೈಸ್ತ ಸಲ್ದಾನಾ ಕುಟುಂಬದ ಹುಡುಗನ ರಕ್ಷಣೆಗೊಸ್ಕರ ಬಂಟ ಮನೆತನದವರು ಆತನನ್ನು ತಮ್ಮ ಮನೆಯಲ್ಲಿ ಅಡಗಿಸಿಟ್ಟಿದ್ದರು. ನಂತರ ತಮ್ಮ ಕುಟುಂಬದ ಸದಸ್ಯನಂತೆ , ಕಿವಿಗೆ ಚಿನ್ನದ ಓಲೆಗಳನ್ನು ಹಾಕಿ ಶೆಟ್ಟಿ ಕುಟುಂಬದಂತೆ ಬಿಂಬಿಸಿದರು. ನಂತರ ಹಲವಾರು ವರ್ಷಗಳ ಬಳಿಕ ಬಂಧ ಮುಕ್ತಗೊಂಡ ಕುಟುಂಬದ ಸದಸ್ಯರು ಹಿಂದಿರುಗಿದಾಗ ಅವರಿಗೆ ಆ ಹುಡುಗನನ್ನು ಒಪ್ಪಿಸಲಾಗಿತ್ತು. ಆ ಹುಡುಗನ ಕುಟುಂಬದ ವಂಶಸ್ಥರನ್ನು ಕ್ರೈಸ್ತರ ಉಪನಾಮದ ಶೆಟ್ಟಿ ಅಥವಾ ಶೇಟ್ ಎಂದು ಕರೆಯುವ ಸಂಪ್ರದಾಯ ಇಂದಿಗೂ ಇಲ್ಲಿ ಮುಂದುವರೆದಿದೆ. ಇದು ಹಿಂದೂ ಹಾಗೂ ಕ್ರೈಸ್ತರ ಮಧುರ ಬಾಂಧವ್ಯದ ಜೀವಂತ ಸಾಕ್ಷಿಯಾಗಿದೆ.