ದಕ್ಷಿಣ ಕನ್ನಡ ಕ್ಷೇತ್ರ: ಇಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವೇನು?
ಮಂಗಳೂರು, ಮೇ 25: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಅವರನ್ನು ಕಣಕ್ಕಿಳಿಸಿ ಬಿಜೆಪಿಗೆ ಫೈಟ್ ನೀಡಲು ಮುಂದಾಗಿತ್ತು. ಆದರೆ, ಕರಾವಳಿಯಲ್ಲಿ ಮೋದಿ ಹವಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಅವರನ್ನು ಭಾರೀ ಅಂತರದಿಂದ ಗೆಲ್ಲಿಸಿದೆ.
ಮೂರು ಸಂಸದರನ್ನು ಕೊಟ್ಟು ಗಮನ ಸೆಳೆದ ಸುಳ್ಯ
ದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರದಲ್ಲಿ ದೇಶದ ಇನ್ನಾವುದೇ ಮತಕ್ಷೇತ್ರಗಳಲ್ಲೂ ಇಲ್ಲದಷ್ಟು ಮೋದಿ ಹವಾ ಕಾಣಿಸಿಕೊಂಡಿತ್ತು. ಇದೇ ಆಧಾರದಲ್ಲಿ ಈ ಬಾರಿ ಬಿಜೆಪಿ ಅಭ್ಯರ್ಥಿಗಳು ನಿರಾಯಾಸವಾಗಿ ಗೆದ್ದುಬಂದಿದ್ದಾರೆ. ಚುನಾವಣೆ ಸಮಯದಲ್ಲಿ ವೈಯಕ್ತಿಕವಾಗಿ ನಳಿನ್ ಕುಮಾರ್ ಮತ್ತು ಶೋಭಾ ಕರಂದ್ಲಾಜೆ ಬಗ್ಗೆ ಅಪಸ್ವರ ಎದ್ದಿದ್ದರೂ ಪಕ್ಷ ಮತ್ತು ದೇಶ ಮೊದಲು ಅನ್ನೋ ಭಾವನೆಯಿಂದ ಈ ಭಾಗದಲ್ಲಿ ಜನ ಮತ ಚಲಾಯಿಸಿದ್ದಾರೆ. ಇನ್ನು ಅತ್ಯಧಿಕ 78 ಶೇಕಡಾ ಮತ ಚಲಾವಣೆಯಾಗಿದ್ದು ಬಿಜೆಪಿಗೆ ಪ್ಲಸ್ ಪಾಯಿಂಟ್ ಎಂದೇ ಅಂದಾಜಿಸಲಾಗಿತ್ತು.
ಗೆಲ್ಲಲು ಸಾಲಲಿಲ್ಲ ಪ್ರಯತ್ನ
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಎಷ್ಟಾದರೂ ಹೊಸ ಮುಖ. ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಿದ್ದರೂ, ಮಂಗಳೂರು ನಗರಕ್ಕಷ್ಟೇ ಸೀಮಿತವಾಗಿದ್ದ ಯುವ ಮುಖಂಡ. ಆದರೂ ಪಕ್ಷದ ಗೆಲುವಿಗಾಗಿ ಜಿಲ್ಲಾ ಕಾಂಗ್ರೆಸ್ ನಾಯಕರು ಒಟ್ಟಾಗಿ ಕಸರತ್ತು ಮಾಡಬಹುದಾಗಿತ್ತು. ಆದರೆ ಜಿಲ್ಲಾ ಕಾಂಗ್ರೆಸ್ಸಿನಿಂದ ಅಂಥ ಪ್ರಯತ್ನ ಆಗಿಲ್ಲ ಎಂದು ಹೇಳಲಾಗಿದೆ. ಪ್ರಮುಖ ನಾಯಕರು ಪ್ರಚಾರಕ್ಕೇ ಹೋಗದೆ, ಅಭ್ಯರ್ಥಿಯನ್ನು ಹರಕೆಯ ಕುರಿ ಎಂಬಂತಾಗಿಸಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿತ್ತು.
ಬಿಲ್ಲವ ಸಮುದಾಯದ ಅತಿ ಹೆಚ್ಚು ಮತಗಳಿದ್ದಾಗ್ಯೂ ಬಿಲ್ಲವ ನಾಯಕರಾದ ವಿನಯ ಕುಮಾರ್ ಸೊರಕೆ ತನಗೆ ಸೀಟು ಸಿಗದ ಸಿಟ್ಟಲ್ಲಿ ಪ್ರಚಾರದಿಂದ ದೂರ ಉಳಿದಿದ್ದರು. ಇನ್ನು ರಮಾನಾಥ ರೈ, ಐವನ್ ಡಿಸೋಜ, ಯು.ಟಿ.ಖಾದರ್ ತೋರಿಕೆಗಷ್ಟೇ ಪ್ರಚಾರದ ಕಣದಲ್ಲಿದ್ದರು ಎಂದು ಆರೋಪಿಸಲಾಗಿದೆ.
ಕೇಂದ್ರದಲ್ಲಿ ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ
ಪಕ್ಷದೊಳಗಿನ ಭಿನ್ನಾಭಿಪ್ರಾಯ
ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ತಾನು ಸಚಿವ ಡಿ.ಕೆ. ಶಿವಕುಮಾರ್ ಆಪ್ತನೆಂದು ಬಿಂಬಿಸಿಕೊಂಡಿದ್ದೇ ಪಕ್ಷದಲ್ಲಿ ಮುಳುವಾಯ್ತು ಎನ್ನಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸಿನ ನಾಯಕರಿಗೆ ಮಿಥುನ್ ರೈ ಗೆಲ್ಲುವುದಿರಲಿ, ಬಿಜೆಪಿ ಅಭ್ಯರ್ಥಿಗೆ ನಿಕಟ ಸ್ಪರ್ಧೆ ಕೊಡುವುದೇ ಇಷ್ಟವಿರಲಿಲ್ಲ. ಭವಿಷ್ಯದಲ್ಲಿ ಮಿಥುನ್ ರೈ ನಾಯಕನಾಗುತ್ತಾನೆಂಬ ಕಾರಣಕ್ಕೆ ಜಿಲ್ಲಾ ನಾಯಕರು ವ್ಯವಸ್ಥಿತ ಪ್ರಚಾರಕ್ಕೆ ಮನಸ್ಸು ಮಾಡಿರಲಿಲ್ಲ.
ಅದಕ್ಕಾಗಿಯೇ ಜಿಲ್ಲಾ ಕಾಂಗ್ರೆಸ್, ಪ್ರಚಾರದ ಕಣಕ್ಕೆ ರಾಜ್ಯ ನಾಯಕರನ್ನಾಗಲೀ, ಕೇಂದ್ರ ನಾಯಕರನ್ನೂ ಜಿಲ್ಲೆಗೆ ತಂದಿರಲಿಲ್ಲ. ಹೀಗಾಗಿ ಇದರ ಲಾಭವನ್ನು ಎಸ್ ಡಿಪಿಐ ಎತ್ತಿಕೊಂಡಿದ್ದು, ತಮ್ಮ ಮತಬ್ಯಾಂಕನ್ನು ವೃದ್ಧಿಸಿಕೊಂಡು ಕಾಂಗ್ರೆಸಿಗೆ ಸಡ್ಡು ಹೊಡೆಯಲು ಪ್ಲಾನ್ ಮಾಡಿತ್ತು. ಈ ಬಾರಿ ಕನಿಷ್ಠ 60 ಸಾವಿರ ಮತಗಳನ್ನು ಎಸ್ ಡಿಪಿಐ ಪಡೆಯುವ ಸಾಧ್ಯತೆ ಹೊಂದಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸಿನ ಸಾಂಪ್ರದಾಯಿಕ ಮುಸ್ಲಿಂ ಮತಗಳು ಸೋರಿಕೆಯಾಗಿವೆ.
ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಧೂಳಿಪಟ
ಕಳೆದ ಬಾರಿಯೂ 1.43 ಲಕ್ಷ ಮತಗಳ ಅಂತರ
2014ರ ಚುನಾವಣೆಯಲ್ಲಿ ಹಿರಿಯ ಮುಖಂಡ ಜನಾರ್ದನ ಪೂಜಾರಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆಗಲೂ ಕಾಂಗ್ರೆಸಿನ ಬಣ ರಾಜಕೀಯವೇ ಸೇರಿ ಪೂಜಾರಿಯನ್ನು ಸೋಲಿಸಿದ್ದರು ಎಂದು ಹೇಳಲಾಗಿತ್ತು. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಹವಾ ಎಷ್ಟು ಕಾರಣವೋ, ಕಾಂಗ್ರೆಸ್ ನಾಯಕರ ಪಿತೂರಿಯೂ ಕಾರಣವಾಗಿತ್ತು . ಹಾಗಾಗಿ ಕಳೆದ ಬಾರಿ 1.43 ಲಕ್ಷ ಮತಗಳ ಅಂತರದಿಂದ ಕಾಂಗ್ರೆಸ್ ಸೋಲು ಕಂಡಿತ್ತು.
ಈ ಬಾರಿಯೂ ಜನಾರ್ದನ ಪೂಜಾರಿ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆಯಿದೆ. ಇಲ್ಲಿ ಮೋದಿ ಅಲೆಯಿಂದಾಗಿ ಕಾಂಗ್ರೆಸ್ ಪರಿಸ್ಥಿತಿ ಚೆನ್ನಾಗಿಲ್ಲ, ಆದರೆ ನಮ್ಮ ಕಾಂಗ್ರೆಸ್ ನ ಮಿಥುನ್ ರೈ ಉತ್ತಮ ಅಭ್ಯರ್ಥಿ ಎಂದು ಪ್ರಶಂಸಿಸಿದ್ದರು.
ಕಾಂಗ್ರೆಸ್ ನಾಯಕರ ಹೊಣೆಗಾರಿಕೆ
ಮಿಥುನ್ ರೈ ಪರ ಕ್ಷೇತ್ರದಲ್ಲಿ ಯುವಕರ ಒಲವು ಹೆಚ್ಚಿದೆ ಎಂಬ ಅಂಶವು ಚುನಾವಣೆಯಲ್ಲಿ ಕಾಂಗ್ರೆಸ್ ಅನ್ನು ಜಯದ ದಡ ಸೇರಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿತ್ತು. ಆದರೆ ಆ ಲೆಕ್ಕಾಚಾರವು ಇಲ್ಲಿ ತಲೆಕೆಳಗಾಗಿದೆ.
ಈ ಬಾರಿ ಮೋದಿ ಹವಾ ಮತ್ತು ಎಸ್ ಡಿಪಿಐ ಸ್ಪರ್ಧೆಯಿಂದಾಗಿ ಬಿಜೆಪಿ ಗೆಲುವಿನ ಅಂತರ 2.73 ಲಕ್ಷಕ್ಕೇರರಿದೆ. ಇಂಥ ಸೋಲಿಗೆ ಒಂದೆಡೆ ಮೋದಿ ಹವಾಗಿಂತಲೂ ಜಿಲ್ಲಾ ಕಾಂಗ್ರೆಸ್ ನಾಯಕರೇ ಹೊಣೆಯೇ ಕಾರಣ ಅನ್ನುವುದರಲ್ಲಿ ಎರಡು ಮಾತಿಲ್ಲ. ಈ ಕುರಿತ ಕಾಂಗ್ರೆಸ್ ಗಂಭೀರವಾಗಿ ಆತ್ಮವಲೋಕನ ಮಾಡಿಕೊಳ್ಳುವ ಅನಿವಾರ್ಯತೆ ನಿರ್ಮಾಣವಾಗಿದೆ.