ಉಕ್ಕಿ ಹರಿಯುತ್ತಿದ್ದ ಪಶ್ಚಿಮ ಘಟ್ಟದ ಜಲಪಾತಗಳು ಎಲ್ಲಿ ಮಾಯವಾದವು?
ಮಂಗಳೂರು, ಸೆಪ್ಟೆಂಬರ್ 22 : ಮಳೆಗಾಲದಲ್ಲಿ ಉಕ್ಕಿಹರಿದು ಪ್ರವಾಹ ಪರಿಸ್ಥಿತಿ ಸೃಷ್ಟಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ಬತ್ತಿ ಹೋಗುತ್ತಿದೆ. ಮಳೆಗಾಲ ಮುಗಿಯುವ ಮುನ್ನವೇ ನೇತ್ರಾವತಿಯಲ್ಲಿ ನೀರಿನ ಹರಿವು ಭಾರೀ ಪ್ರಮಾಣದಲ್ಲಿ ಕುಸಿದಿದೆ. ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ಉಡುಪಿ ಜಿಲ್ಲೆಯ ನದಿಗಳಲ್ಲೂ ನೀರಿನ ಹರಿವು ದಿಢೀರ್ ಕುಸಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ನೇತ್ರಾವತಿ, ಕುಮಾರಧಾರಾ, ಪಯಸ್ವಿನಿ, ಗುಂಡ್ಯ ಸೇರಿದಂತೆ ಇನ್ನಿತರ ಉಪನದಿಗಳಲ್ಲಿ ನೀರಿನ ಹರಿವು ಊಹಿಸಲು ಸಾಧ್ಯವಾಗದ ಮಟ್ಟದಲ್ಲಿ ಕುಸಿದಿದೆ. ಉಡುಪಿಗೆ ನೀರುಣಿಸುವ ಸ್ವರ್ಣ ನದಿ ಬತ್ತಲಾರಂಭಿಸಿದೆ. ಹೆಬ್ರಿ ಭಾಗದಲ್ಲಿ ಜನವರಿ ಹಾಗು ಫೆಬ್ರವರಿವರೆಗೂ ಭರ್ತಿಯಾಗಿ ಹರಿಯುತ್ತಿದ್ದ ಸೀತಾನದಿಯಲ್ಲೂ ಕಲ್ಲು ಬಂಡೆ, ತಳ ಗೋಚರಿಸತೊಡಗಿದೆ.
ಈ ನಡುವೆ ಪ್ರವಾಸಿಗರ ಸ್ವರ್ಗ ಅಂತಾನೇ ಕರೆಸಿಕೊಳ್ಳುವ ಚಾರ್ಮಾಡಿ ಘಾಟ್ ನಲ್ಲಿ ಫಾಲ್ಸ್ ಗಳು ದಿಢೀರನೇ ಹರಿವು ನಿಲ್ಲಿಸಿವೆ. ಸಾಮಾನ್ಯವಾಗಿ ಡಿಸೆಂಬರ್ ತನಕ ಚಾರ್ಮಾಡಿ ಘಾಟ್ ನ ಅಲ್ಲಲ್ಲಿ ರಸ್ತೆ ಪಕ್ಕದಲ್ಲಿಯೇ ಕಾಣಸಿಗುವ ಫಾಲ್ಸ್ ಗಳು ಈ ಬಾರಿ ಸಪ್ಟೆಂಬರ್ ನಲ್ಲೇ ಬತ್ತಿ ಹೋಗಿವೆ. ಚಾರ್ಮಾಡಿ ಘಾಟ್ ಜಲಪಾತಗಳು ಬತ್ತಿ ಹೋಗಿ ನಿಸ್ತೇಜವಾಗಿದೆ.
ಕೊಡಗಿನ ಪ್ರವಾಹದಲ್ಲಿ ಪತ್ರಕರ್ತರ ಮನೆಗಳೇ ಕೊಚ್ಚಿಹೋಗಿವೆ
ಈ ಭಾಗದಲ್ಲಿ ಎಷ್ಟೆಲ್ಲ ಮಳೆಯಾಗಿ ಆವಾಂತರ ಸೃಷ್ಟಿಸದರೂ, ಜಿಲ್ಲೆಯ ನದಿಗಳೆಲ್ಲ ಉಕ್ಕೇರಿ ಅನಾಹುತ ಸೃಷ್ಟಿಸಿದ್ದರೂ ಇದ್ದಕ್ಕಿದ್ದಂತೆ ಹೀಗೇಕಾಯ್ತು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಜಲತಜ್ಞರು ಈ ರೀತಿಯ ಪ್ರಕೃತಿ ವೈಚಿತ್ರ್ಯಕ್ಕೆ ಕಾರಣಗಳನ್ನು ಹುಡುಕುತ್ತಿದ್ದಾರೆ. ಭವಿತವ್ಯದ ದೃಷ್ಟಿಯಿಂದಲಾದರೂ ಇದರ ಅಧ್ಯಯನವಾಗಬೇಕಿದೆ ಮತ್ತು ಪ್ರತಿ ನಾಗರಿಕರೂ ಪರಿಸರ ಉಳಿಕೆಯ ಬಗ್ಗೆ ಚಿಂತಿಸಬೇಕಿದೆ.
ಜಲಪಾತಗಳೆಲ್ಲ ಎಲ್ಲಿ ಮಾಯವಾದವು?
ಈ ಭಾಗದಲ್ಲಿರುವ ರಸ್ತೆ ಬದಿಯ ಹಲವಾರು ಜಲಪಾತಗಳು ಎರಡು ವಾರಗಳ ಹಿಂದೆ ಮೈದುಂಬಿ ಧುಮ್ಮಿಕ್ಕಿ ಹರಿದು ನೋಡುಗರ ಮನ ಸೆಳೆಯುತ್ತಿದ್ದವು. ಈ ರಸ್ತೆಯಲ್ಲಿ ಸಾಗಿಬರುವ ಪ್ರಯಾಣಿಕರು ರಸ್ತೆ ಬದಿ ವಾಹನ ನಿಲ್ಲಿಸಿ ಈ ಜಲಪಾತದಲ್ಲಿ ನೀರಾಟವಾಗುವುದು ಸರ್ವೇಸಾಮಾನ್ಯವಾಗಿತ್ತು. ಧುಮ್ಮಿಕ್ಕಿ ಹರಿಯುವ ಈ ಜಲಪಾತದ ನೊರೆಹಾಲಿನ ನೀರಿನೊಂದಿಗೆ ಕ್ಲಿಕ್ಕಿಸಿದ ಸೆಲ್ಫಿಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಾಜಿಸುತ್ತಿದ್ದವು.
ಆದರೆ ಈಗ ಜಲಪಾತದ ಒಡಲಿನ ಜಲಧಾರೆ ಕ್ಷೀಣಿಸಿದೆ. ಕಾಡಂಚಿನ ಹಲವಾರು ಸಣ್ಣ ಪುಟ್ಟ ಜಲಪಾತಗಳು, ತೊರೆಗಳು ತಮ್ಮ ವೈಯ್ಯಾರದಿಂದ ವಿಮುಖವಾಗಿವೆ. ಮಳೆಗಾಲದ ಪ್ರೇಕ್ಷಣಿಯ ಸ್ಥಳವಾಗಿ ಮನಸ್ಸಿಗೆ ಆಹ್ಲಾದ ಮೂಡಿಸುತ್ತಿದ್ದ ಈ ಜಲಪಾತಗಳು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಇದ್ದವು. ಝುಳು ಝುಳು ನಿನಾದದೊಂದಿಗೆ ನೊರೆಹಾಲಿನ ಹೊಳೆ ರೂಪ ಪಡೆದು ಜನಾಕರ್ಷಣೆಯ ಕೇಂದ್ರಬಿಂದುವಾಗುತ್ತಿದ್ದ ಈ ಜಲಪಾತಗಳು ಈಗ ಬಿಕೋ ಎನ್ನುತ್ತಿವೆ.
ಕೊಡಗು 1500 ನಿರಾಶ್ರಿತ ಕುಟುಂಬಗಳಿಗೆ 50 ಸಾವಿರ ಪರಿಹಾರ
ಚಾರಣಿಗರ ನೆಚ್ಚಿನ ತಾಣ ವಾಗಿದ್ದ ಜಲಪಾತಗಳು
ಘಟ್ಟದ ಮೇಲಿಂದ ಬಳುಕಿಕೊಂಡು ಇಳಿದು ಬರುವ ಮಳೆ ನೀರು, ಒರತೆ ನೀರಿನ ಜೊತೆಗೆ ಮಿಳಿತಗೊಂಡು ಮಳೆಗಾಲದ ಆಕರ್ಷಣೆಯ ಕೇಂದ್ರಬಿಂದುವಾಗುತ್ತಿದ್ದ ಈ ಜಲಪಾತಗಳಿಗೂ ಈಗ ಬಿಸಿಲ ಬೇಗೆ ತಟ್ಟಿದೆ. ಗುಡ್ಡದ ಅಂಚಿನಿಂದ ಧುಮ್ಮಿಕ್ಕಿ ಹರಿದು ಕೆಳಗಿಳಿದು ಬರುತ್ತಿದ್ದ ಈ ಸಣ್ಣ ಜಲಪಾತಗಳಲ್ಲಿ ಈಗ ಕೇವಲ ಕಲ್ಲು ಬಂಡೆಗಳು ಮಾತ್ರ ಗೋಚರಿಸುತ್ತಿದೆ.
ಇದಲ್ಲದೇ ಸುಳ್ಯ, ಕೊಡಗು, ಮಲೆನಾಡಿನ ತಪ್ಪಲು ಪ್ರದೇಶದ ಚಾಮಡ್ಯ, ದೇವರಕೊಲ್ಲಿ, ನಿಡ್ಯಮಲೆ, ಕಾಂತಬೈಲು, ಕಲ್ಯಾಳ, ಹೊಸಗದ್ದೆ, ಪಳಂಗಾಯ, ಬಿಳಿಮಲೆ, ಸೋಣಂಗೇರಿ, ಕೆಮನಬಳ್ಳಿ ಮೊದಲಾದ ಸಣ್ಣ ಜಲಪಾತಗಳು ತಮ್ಮ ಸೌಂದರ್ಯದಿಂದಾಗಿ ಮಳೆಗಾಲದಲ್ಲಿ ಚಾರಣಿಗರ ನೆಚ್ಚಿನ ತಾಣ ವಾಗಿದ್ದವು. ಈ ಜಲಪಾತಗಳನ್ನು ವೀಕ್ಷಿಸಲೆಂದೇ ಸಾವಿರಾರು ಚಾರಣಿಗರು ಬರುತ್ತಿದ್ದರು. ಆದರೆ ಈಗ ಈ ಜಲಪಾತಗಳಲ್ಲಿ ನೀರಿನ ಹರಿವು ಶೇ 90ರಷ್ಟು ಕಡಿಮೆಯಾಗಿರುವುದು ನಿಜಕ್ಕೂ ದುರಂತ.
ಭೂಕುಸಿತದಿಂದ ಹರಿದುಹೋದ ಅಂತರ್ಜಲ
ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ನೀರಿನ ಒರತೆಯೇ ಮುಚ್ಚಿ ಹೋಗಿದ್ದು, ಜಲಪಾತಗಳು ಹರಿವು ನಿಲ್ಲಿಸಲು ಕಾರಣ ಅನ್ನೋದು ತಜ್ಞರ ಅಭಿಪ್ರಾಯವಾಗಿದೆ. ಭೂಮಿಯ ಮೇಲೆ ಎಷ್ಟೇ ಬಿಸಿಲಿನ ಶಾಖ ಇದ್ದರೂ ನೀರು ಈ ಪ್ರಮಾಣದಲ್ಲಿ ಆವಿಯಾದ ಉದಾಹರಣೆಗಳಿಲ್ಲ. ಆದರೆ ಕಾಡುನಾಶ, ಜಲಮೂಲಗಳ ನಾಶ, ಭಾರೀ ಭೂಕುಸಿತದಿಂದ ಹರಿದು ಹೋದ ಅಂತರ್ಜಲದ ಸಂಗ್ರಹ, ಈ ಜಲಪಾತಗಳಲ್ಲಿ ನೀರಿನ ಹರಿವು ಕಡಿಮೆಯಾಗಲು ನೇರ ಕಾರಣ ಎಂದು ಹೇಳಲಾಗುತ್ತಿದೆ. ಜಲಪಾತಗಳಲ್ಲಿ ಸೆಪ್ಟೆಂಬರ್ ತಿಂಗಳಲ್ಲೇ ನೀರಿನ ಹರಿವು ಕಡಿಮೆ ಆಗಿರುವುದು ಮುಂಬರುವ ದಿನಗಳ ನೀರಿನ ಅಭಾವದ ಭೀಕರತೆಯನ್ನು ತೆರೆದಿಡುತ್ತಿವೆ.
ಹಸಿರು ಸಿರಿಯ ನಡುವೆ ಕಂಗೊಳಿಸುತ್ತಿದೆ ಅಡ್ಯಾರ್ ಜಲಪಾತ
ಪ್ರಕೃತಿಯ ಮೇಲೆ ನಡೆದ ದೌರ್ಜನ್ಯದ ಫಲ
ಪ್ರಕೃತಿಯ ಮೇಲೆ ನಡೆದ ದೌರ್ಜನ್ಯದ ಫಲವೇನೋ ಎಂಬಂತೆ ಈ ಬಾರಿ ಧಾರಾಕಾರ ಮಳೆ ಸುರಿಯಿತು. ಭಾರೀ ಮಳೆಗೆ ಗುಡ್ಡಗಳೇ ಕುಸಿದವು. ಕೆಲವೆಡೆ ಜಲಸ್ಪೋಟದಿಂದ ಆಸ್ತಿಪಾಸ್ತಿ ಸೇರಿಂದಂತೆ ಪ್ರಾಣಹಾನಿಗೂ ಈ ಬಾರಿಯ ಮಳೆಯೇ ಕಾರಣವಾಯಿತು. ಈಗ ಮಳೆ ನಿಂತಿದೆ, ಆದರೆ ನದಿಯಲ್ಲಿ ಪ್ರವಾಹವಾಗಿ ಹರಿದ ಮಳೆ ನೀರು ಎಲ್ಲಿ ಹೋಯಿತು? ಎಂಬುದೇ ಜನರಿಗೆ ಯಕ್ಷಪ್ರಶ್ನೆಯಾಗಿ ಕಾಡತೊಡಗಿದೆ.
ಸುಳ್ಯ, ಬೆಳ್ತಂಗಡಿ ಭಾಗದ ತೋಟಗಳ ಬದಿಯ ತೋಡಿನಲ್ಲಿ ನೀರಿಲ್ಲದೇ ಭಯಾನಕ ದೃಶ್ಯ ಎದುರಾಗಿದೆ. ಪರಿಸರದ ಚಿಕ್ಕ ಹೊಳೆಗಳಾದ ಗೌರಿ, ಮಡಾವು ಹೊಳೆಯಲ್ಲು ನೀರು ಬತ್ತತೊಡಗಿದೆ. ಮುಂದಿನ ದಿನಗಳಲ್ಲಿ ಕೃಷಿಗೆ ನೀರಿಲ್ಲದಿದ್ದರೆ ಗತಿ ಏನು ಎಂದು ಕೃಷಿಕರು ಈಗಲೇ ತಲೆ ಮೇಲೆ ಕೈಹೊತ್ತಿ ಕೂತಿದ್ದಾರೆ. ರಾಜ್ಯ ಸರಕಾರ, ಪರಿಸರ ತಜ್ಞರು, ಸ್ಥಳೀಯ ಜನರು ಕೂಡಲೆ ಎಚ್ಚೆತ್ತುಕೊಂಡು ಮುಂದೇನು ಮಾಡಬೇಕು ಎಂಬುದರ ಬಗ್ಗೆ ಚಿಂತನ ಮಂಥನ ನಡೆಸಬೇಕಿದೆ. ಇಲ್ಲದಿದ್ದರೆ ಭವಿಷ್ಯ ಭೀಕರವಾಗಿರಲಿದೆ.