ಯಾರಿದು ಇಂಜಿನಿಯರ್ ಆದಿತ್ಯ? ಈತನಿಗೇಕೆ ಬಾಂಬ್ ಬೆದರಿಕೆ ಕರೆ ಚಟ?
ಉಡುಪಿ ಜಿಲ್ಲೆಯ ಇಂಜಿನಿಯರ್ ಪದವೀಧರ ಆದಿತ್ಯರಾವ್ ಈಗ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ವಸ್ತು ಇರಿಸಿದ ಆರೋಪ ಹೊತ್ತುಕೊಂಡಿದ್ದಾನೆ. ಬೆಂಗಳೂರಿನಲ್ಲಿ ಐಜಿಪಿ ಕಚೇರಿಗೆ ಇಂದು ಆಗಮಿಸಿ ನೀಲಮಣಿ ರಾಜು ಅವರ ಮುಂದೆ ಶರಣಾಗತನಾಗಿದ್ದಾನೆ. ಆದಿತ್ಯರಾವ್ ಹಿನ್ನಲೆಯನ್ನು ಕೆದಕಿದಾಗ ಆತನಿಗೆ ಬಾಂಬ್ ಬೆದರಿಕೆ ಕರೆ ಮಾಡುವ ಚಾಳಿ ಇತ್ತು ಎಂಬುದು ಕೇಸ್ ಹಿಸ್ಟರಿಯಿಂದ ತಿಳಿದು ಬರುತ್ತದೆ.
ನಿವೃತ್ತ ಬ್ಯಾಂಕ್ ಮ್ಯಾನೇಜರ್ ಕೃಷ್ಣಮೂರ್ತಿ ಹಾಗೂ ತಮ್ಮನ ಜೊತೆ ಚಿಲಿಂಬಿಯಲ್ಲಿ ವಾಸ ಆದಿತ್ಯ ವಾಸವಾಗಿದ್ದ ಆದಿತ್ಯನಿಗೆ ಓದಿಗೆ ತಕ್ಕ ಉದ್ಯೋಗ ಸಿಕ್ಕಿರಲಿಲ್ಲ ಎಂಬುದು ತಿಳಿದು ಬರುತ್ತದೆ. ನಿರುದ್ಯೋಗ ಸಮಸ್ಯೆ, ವ್ಯವಸ್ಥೆ ವಿರುದ್ಧ ಆಕ್ರೋಶವೇ ಆತನನ್ನು ಬಾಂಬ್ ಬೆದರಿಕೆ ಕರೆ ಹಾಗೂ ಸ್ಫೋಟಕ ಬಳಸಿ ಬೆದರಿಸುವಂತೆ ಮಾಡಲು ಪ್ರೇರಿಪಿಸಿದೆ.
ಆರೋಪಿ ಆದಿತ್ಯರಾವ್ ಸ್ಫೋಟಕ ತಯಾರಿಸಿದ್ದು ಹೇಗೆ?
ಆದಿತ್ಯನ ಸೋದರ ಕೂಡಾ ಮೂಡಬಿದರೆಯಲ್ಲಿ ಬ್ಯಾಂಕಿನಲ್ಲಿ ಉದ್ಯೋಗಿಯಾಗಿದ್ದಾನೆ. ಮೆಕ್ಯಾನಿಕಲ್ ಇಂಜಿನಿಯರ್ ಓದಿರುವ ಆದಿತ್ಯ ಬೆಂಗಳೂರು ಹಾಗೂ ಮಂಗಳೂರು ವಿಮಾನ ನಿಲ್ದಾಣದಲ್ಲಿ ತನ್ನ ವಿದ್ಯೆಗೆ ತಕ್ಕ ನೌಕರಿ ಸಿಗಬಹುದು ಎಂಬ ಆಸೆಯಿಂದ ಅರ್ಜಿ ಹಾಕಿದ್ದ. ಆದರೆ ಅರ್ಜಿ ತಿರಸ್ಕೃತಗೊಂಡಿತ್ತು. ಇದಾದ ಬಳಿಕ ಆತನ ಮನಸ್ಥಿತಿ ಹತಾಶೆಯಿಂದ ಆಕ್ರೋಶಕ್ಕೆ ತಿರುಗಿದೆ...
ಬಾಂಬ್ ತಯಾರಿಸಿದ್ದು ಹೇಗೆ?
ಮಂಗಳೂರು ವಿಮಾನ ನಿಲ್ದಾಣದ ಟಿಕೆಟ್ ಕೌಂಟರ್ ಬಳಿ ಇಟ್ಟು ಹೋಗಿದ್ದ ಬ್ಯಾಗ್ ನಲ್ಲಿದ್ದ ಮ್ಯಾಪ್ ಡೀಕೋಡಿಂಗ್ ಕಾರ್ಯ ನಡೆದಿದೆ. ಬಾಂಬ್ ಅಥವಾ ಸ್ಫೋಟಕ ವಸ್ತುಗಳ ಸ್ಯಾಂಪಲ್ ಸಂಗ್ರಹ ಹಾಗೂ ಪರಿಶೀಲನೆ ಕಾರ್ಯದಲ್ಲಿ ರಾಷ್ಟ್ರ್ರೀಯ ತನಿಖಾ ಸಂಸ್ಥೆ(ಎನ್ಐಎ)ಯ ಬಾಂಬ್ ಪತ್ತೆ ತಂಡದವರು ತನಿಖೆ ನಡೆಸಲು ಆದಿತ್ಯ ಉದ್ಯೋಗ ಮಾಡುತ್ತಿದ್ದ ಹೋಟೆಲ್ ಗೆ ಭೇಟಿ ನೀಡಿದ್ದಾರೆ.
ಸದಾನಂದ ಶೆಟ್ಟಿ ಒಡೆತನದ ಬಲ್ಮಠದ ಕ್ವಾಲಿಟಿ ಹೋಟೆಲ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕ್ಯಾಶ್ ಕೌಂಟರ್ ನಲ್ಲಿದ್ದ ಆದಿತ್ಯ ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ್ದ ಬಿಳಿ ಬಣ್ಣದ ಪೌಡರ್ ಹೊಟೇಲ್ ನಲ್ಲಿ ಪತ್ತೆಯಾಗಿದೆ. ಹೊಟೇಲ್ ಸಿಬ್ಬಂದಿ ಮತ್ತು ಮಾಲೀಕರ ವಿಚಾರಣೆ ನಡೆಸಿದಾಗ, ಆದಿತ್ಯನ ಚಲನವಲನಗಳು ವಿಚಿತ್ರವಾಗಿರುತ್ತಿತ್ತು, ಆದರೆ, ಕೆಲಸ ನಿಯತ್ತಾಗಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಹೋಟೆಲ್ ರೂಮಿನಲ್ಲೇ ಕುಳಿತು ಬಾಂಬ್ ತಯಾರಿಸಿದ್ದ ಆದಿತ್ಯ ಲ್ಯಾಪ್ ಟ್ಯಾಪ್ ಬ್ಯಾಗಿನಲ್ಲಿರಿಸಿದ್ದ. ಆ ಬ್ಯಾಗನ್ನು ತನ್ನ ಕಾಲ ಬುಡದಲ್ಲೇ ಇಟ್ಟುಕೊಳ್ಳುತ್ತಿದ್ದ. ಆದಿತ್ಯನ ಬಳಿ ಒಂದು ಬ್ಯಾಗ್ ಸದಾಕಾಲ ಇರುತ್ತಿತ್ತು, ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ಬಾಬು ಹೆಗ್ಡೆ ಹೇಳಿಕೆ ನೀಡಿದ್ದಾನೆ.
ಉದ್ಯೋಗ ಸಿಗದ ಕಾರಣ ಬೆದರಿಕೆ ಕರೆ ಒಡ್ಡಿದ್ದ
2018ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿಯಾಗಿ ಸೇರಲು ಯತ್ನಿಸಿ ವಿಫಲನಾಗಿದ್ದ. ಈ ಬಗ್ಗೆ ಏಜೆನ್ಸಿ ಜೊತೆ ಕಿತ್ತಾಡಿಕೊಂಡು ಆಕ್ರೋಶದಿಂದ ಹೊರ ಬಂದಿದ್ದ. ನಂತರ ಹುಸಿ ಬಾಂಬ್ ಕರೆ ಮಾಡಿದ್ದ. ಆದಿತ್ಯನನ್ನು ಪತ್ತೆ ಹಚ್ಚಿದ ಪೊಲೀಸರು ಬಂಧಿಸಿ 6 ತಿಂಗಳು ಜೈಲಿನಲ್ಲಿರಿಸಿದ್ದರು.
ಮಂಗಳೂರಿನಲ್ಲಿ ಸ್ಫೋಟಕ ವಸ್ತು ಇರಿಸಿದ್ದ ದಿನ ಕೂಡಾ ಮಂಗಳೂರಿನ ಸುತ್ತಾ ಮುತ್ತಾ ಮೂರು ಕಡೆ ಬಾಂಬ್ ಇದೆ ಎಂದು ಬೆದರಿಕೆ ಕರೆ ಮಾಡಿದ್ದ. ಈ ಹಿಂದೆ ಬೆಂಗಳೂರಿನ ಪೊಲೀಸರು ಬಂಧಿಸಿದ್ದರು. ಇದಕ್ಕೆ ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡುತ್ತಿದ್ದೇನೆ ಎಂದು ಆದಿತ್ಯ ಹೇಳಿಕೊಂಡಿದ್ದಾನೆ.
ಬೆಂಗಳೂರಿನಲ್ಲೂ ಕೆಲ ವಾಸವಿದ್ದ ಆದಿತ್ಯ, ಲ್ಯಾಪ್ ಟ್ಯಾಪ್ ಕದ್ದ ಆರೋಪದ ಮೇಲೆ ಸುದ್ದುಗುಂಟೆ ಪಾಳ್ಯ ಪೊಲೀಸರ ವಶಕ್ಕೆ ಸಿಕ್ಕಿದ್ದ, ಜೈಲು ಶಿಕ್ಷೆ ಅನುಭವಿಸಿದ್ದ.
ಆರೋಪಿ ಆದಿತ್ಯ ಈ ಮುನ್ನ ಎಲ್ಲೆಲ್ಲಿ ಕೆಲಸ ಮಾಡಿದ್ದ?
ಮಾನಸಿಕವಾಗಿ ಕುಗ್ಗಿದ್ದ
ಡಿಸೆಂಬರ್ 16ರಂದು ಕುಡ್ಲ ಹೋಟೆಲ್ ನಲ್ಲಿ ಬಿಲ್ಲಿಂಗ್ ಸೆಕ್ಷನ್ ನಲ್ಲಿ ಕೆಲಸಕ್ಕೆ ಸೇರಿದ್ದ ಆದಿತ್ಯ ಸಭ್ಯನಂತೆ ಕಾಣುತ್ತಿದ್ದ, ಹೆಚ್ಚು ಮಾತನಾಡುತ್ತಿರಲಿಲ್ಲ, ಮಣಿಪಾಲದ ಹೌಸಿಂಗ್ ಬೋರ್ಡ್ ನಲ್ಲಿ ವಾಸವಿದ್ದೇನೆ, ತಂದೆಗೆ ಹುಷಾರಿಲ್ಲ ಹೀಗಾಗಿ, ಉದ್ಯೋಗದ ಅವಶ್ಯಕತೆ ಹೆಚ್ಚಾಗಿದೆ ಎಂದಿದ್ದ. ಇತ್ತೀಚೇಗೆ ಮೃತರಾದ ತಾಯಿ ನೆನಪಿನಲ್ಲಿ ಕೊರಗುತ್ತಿದ್ದ, ಮಠ, ಸಾರ್ವಜನಿಕ ಕಾರ್ಯಕ್ರಮದಲ್ಲಿ ಅಡುಗೆ ಕೆಲಸ, ಸೆಕ್ಯುರಿಟಿ, ಕ್ಯಾಶಿಯರ್ ಹೀಗೆ ನಾನಾ ಕೆಲಸ ಮಾಡಿದ್ದರೂ ವಿದ್ಯೆಗೆ ತಕ್ಕ ಉದ್ಯೋಗ ಸಿಕ್ಕಿಲ್ಲ ಎಂಬುದು ಆತನನ್ನು ಬಾಧಿಸುತ್ತಿತ್ತು ಎಂದು ಸಹೋದ್ಯೋಗಿ ಬಾಬು ಹೆಗ್ಡೆ ವಿವರಿಸಿದ್ದಾರೆ.
ವಿದ್ಯೆಗೆ ಬೆಲೆಯೇ ಇಲ್ಲವೇ ಎನ್ನುತ್ತಿದ್ದ
ವಿದ್ಯೆಗೆ ಬೆಲೆಯೇ ಇಲ್ಲವೇ ಎನ್ನುತ್ತಿದ್ದ ಆದಿತ್ಯರಾವ್ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದ್ದು, ಮೈಸೂರು ವಿಶ್ವವಿದ್ಯಾಲಯದಿಂದ ಎಂಬಿಎ ಪಡೆದಿದ್ದು, ಮೂಲತಃ ಉಡುಪಿ ಜಿಲ್ಲೆ ಮಣಿಪಾಲದವನು. ಆದರೆ, ಮೂಲ ಮನೆಯ ಬಳಿ ಹೋಗಿ ಬಹುಕಾಲವಾಗಿದೆ. ತಂದೆ ಮಂಗಳೂರು ಸಮೀಪ ಚಿಲಂಬಿಯಲ್ಲಿದ್ದಾರೆ. 37 ವರ್ಷ ವಯಸ್ಸಿನ ಆದಿತ್ಯನನ್ನು ಮತ್ತೆ ಮತ್ತೆ ಒಂದೆ ರೀತಿಯ ಕ್ರೈಂ ಎಸಗುವ ಆರೋಪಿಯಾಗಿ ಪೊಲೀಸರು ಗುರುತಿಸಿದ್ದಾರೆ. ಮಾನಸಿಕ ಖಿನ್ನತೆ, ವ್ಯವಸ್ಥೆ ವಿರುದ್ಧ ಆಕ್ರೋಶ, ಸೇಡು ಈತನ ಈ ಕೃತ್ಯಕ್ಕೆ ಕಾರಣ ಇರಬಹುದು ಎಂದು ಶಂಕಿಸಲಾಗಿದೆ. ಸದ್ಯ ಎಸಿಪಿ ಬೆಳ್ಳಪ್ಪ ನೇತೃತ್ವದ ತಂಡ ಮಂಗಳೂರಿನಿಂದ ಹೊರಟ್ಟಿದ್ದು, ಬೆಂಗಳೂರಿನ ಹಲಸೂರು ಪೊಲೀಸ್ ಠಾಣೆಗೆ ಬಂದು ಆದಿತ್ಯನನ್ನು ತಮ್ಮ ವಶಕ್ಕೆ ಪಡೆಯಲಿದ್ದಾರೆ. ಅಗತ್ಯ ಬಿದ್ದರೆ ಎನ್ ಎಸ್ ಜಿ ಬಾಂಬ್ ಪತ್ತೆ ತಂಡ ಕೂಡಾ ಆದಿತ್ಯನನ್ನು ವಿಚಾರಣೆಗೊಳಪಡಿಸಬಹುದು.