ಮಂಗಳೂರು; ವಾಟ್ಸಪ್ ಗ್ರೂಪ್ ಮೇಲೆ ಪೊಲೀಸರ ಕಣ್ಗಾವಲು
ಮಂಗಳೂರು, ಮೇ 06: ಸಾರ್ವಜನಿಕ ಸ್ಥಳಗಳಲ್ಲಿ ಮುಸ್ಲಿಂ ಯುವತಿಯರು ಬುರ್ಖಾ, ಹಿಜಾಬ್ ತೆಗೆಯದಂತೆ ವಾಟ್ಸಪ್ ಗ್ರೂಪ್ ಮೂಲಕ ಬೆದರಿಕೆ ಹಾಕಿರುವ ಪ್ರಕರಣ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬ ಗ್ರೂಪ್ನಲ್ಲಿ ಸಂದೇಶ ಹರದಿಡಾಡಿದ್ದು, ಪೊಲೀಸರ ಗ್ರೂಪ್ ಮೇಲೆ ಕಣ್ಗಾವಲು ಇಟ್ಟಿದ್ದಾರೆ.
ತಾಲಿಬಾನ್ ಸಂಸ್ಕೃತಿ ಹೇರಿಕೆಯ ಪ್ರಯತ್ನದ ಭಾಗವಾಗಿ ಮುಸ್ಲಿಂ ಡಿಫೆನ್ಸ್ ಫೋರ್ಸ್ ಎಂಬ ವಾಟ್ಸಪ್ ಗ್ರೂಪ್ನಲ್ಲಿ ಮುಸ್ಲಿಂ ಯುವತಿಯರಿಗೆ ಬೆದರಿಕೆ ಹಾಕಲಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ , ಬುರ್ಖಾ ತೆಗೆಯುವ ಯುವತಿಯರ ಮೇಲೆ ಮುಸ್ಲಿಂ ಡಿಫೆನ್ಸ್ ಫೋರ್ಸ್ ಕಣ್ಣಿಡಲಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ಹಿಜಾಬ್ ವಿವಾದ: ಎರಡು ದಿನದಲ್ಲಿ ಸುಪ್ರೀಂಕೋರ್ಟ್ನಲ್ಲಿ ಮೇಲ್ಮನವಿ ವಿಚಾರಣೆ?
ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿಯರ ಪೋಷಕರು ಸಹ ಎಚ್ಚರಿಕೆಯಿಂದ ಇರುವಂತೆ ಸಂದೇಶದಲ್ಲಿ ತಿಳಿಸಲಾಗಿದ್ದು, ಪಾರ್ಕ್, ಮಾಲ್, ಥಿಯೇಟರ್ ಸುತ್ತುವ ಯುವತಿಯರನ್ನು ಗುಂಪಿನ ಸಂದೇಶದಲ್ಲಿ ಗುರಿಯಾಗಿ ಇಟ್ಟುಕೊಳ್ಳಲಾಗಿದೆ.
ಪೊಲೀಸರ ಕಣ್ಗಾವಲು; ಈ ಗ್ರೂಪ್ನ ಸಂದೇಶ ವೈರಲ್ ಆಗುತ್ತಿದ್ದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ಸಂದೇಶದ ಮೂಲವನ್ನು ಪತ್ತೆ ಹಚ್ಚಲು ಮಂಗಳೂರು ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಉಡುಪಿ: ದ್ವಿತೀಯ ಪಿಯುಸಿ ಪರೀಕ್ಷೆ; ಗಣಿತ ಪರೀಕ್ಷೆಗೆ ಹಾಜರಾಗದ ಹಿಜಾಬ್ ವಿದ್ಯಾರ್ಥಿನಿಯರು
ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಈ ಕುರಿತು ಮಾಹಿತಿ ನೀಡಿದ್ದು,"ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಟ್ಟಿದ್ದೇವೆ. ಬುರ್ಖಾ ಧರಿಸುವ ಮುಸ್ಲಿಂ ಹೆಣ್ಣು ಮಕ್ಕಳಿಗೆ ಎಚ್ಚರಿಕೆ ನೀಡಲಾಗಿದೆ. ಮಾಲ್ಗಳಲ್ಲಿ ತಿರುಗಾಡುವ ಹೆಣ್ಣು ಮಕ್ಕಳ ಪೋಷಕರಿಗೂ ಎಚ್ಚರಿಕೆ ನೀಡಿದ್ದಾರೆ. ಇನ್ ಸ್ಟಾಗ್ರಾಂ ಪೇಜ್ ಮತ್ತು ವಾಟ್ಸಪ್ ಗ್ರೂಪ್ನಲ್ಲಿ ಈ ರೀತಿಯ ಸಂದೇಶ ಹಾಕಲಾಗಿದೆ" ಎಂದು ಹೇಳಿದ್ದಾರೆ.
"ಈ ಸಂದೇಶ ಯಾರು ಹಾಕಿದ್ದು ಎಂಬುವುದರ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ. ಈ ಬಗ್ಗೆ ಯಾರೂ ಇನ್ನೂ ದೂರು ದಾಖಲು ಮಾಡಿಲ್ಲ. ಎಫ್ಐಆರ್ ಕೂಡಾ ದಾಖಲಾಗಿಲ್ಲ. ಆದರೆ, ಸೋಷಿಯಲ್ ಮೀಡಿಯಾ ಸೆಲ್ನಲ್ಲಿ ಈ ಬಗ್ಗೆ ದಾಖಲೆ ಮಾಡಿದ್ದೇವೆ. ವಿದೇಶಿ ಸಿಮ್ ಬಳಸಿ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಸಂದೇಶ ಬರೆಯುವವರ ಮೇಲೂ ನಿಗಾ ವಹಿಸಿದ್ದೇವೆ" ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
"ಮುಸ್ಲಿಂ ಡಿಫೆನ್ಸ್ ಫೋರ್ಸ್ ವಾಟ್ಸಪ್ ಗ್ರೂಪ್ ಬಗ್ಗೆಯೇ ತನಿಖೆಗೆ ಪೊಲೀಸ್ ತಂಡ ರಚನೆ ಮಾಡಿಲ್ಲ. ಈ ಬಗ್ಗೆ ದೂರುಗಳೂ ಬಂದಿಲ್ಲ, ದೂರು ಬಂದಾಗ ಕಾನೂನು ಪ್ರಕಾರ ಕ್ರಮ ಕೈಗೊಳ್ಳುತ್ತೇವೆ. ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ಕೆಲಸ ಆಗುತ್ತಿದೆ. ಯಾರು ಕೆಟ್ಟ ಉದ್ದೇಶದಿಂದ ಈ ರೀತಿ ಮಾಡುತ್ತಾರೋ ಅವರ ಎಲ್ಲಾ ಮಾಹಿತಿ ದಾಖಲೆಯಾಗುತ್ತಿದೆ. ಅಗತ್ಯ ಬಿದ್ದಾಗ ದೊಡ್ಡ ಮಟ್ಟದ ಕ್ರಮ ಕೈಗೊಳ್ಳುತ್ತೇವೆ" ಎಂದು ಎಚ್ಚರಿಸಿದ್ದಾರೆ.
ಸಂದೇಶದಲ್ಲಿ ಏನಿದೆ?; ಬುರ್ಖಾ, ಹಿಜಾಬ್ ಧರಿಸಿ ಮಾಲ್, ಹೋಟೆಲ್ ಸೇರಿದಂತೆ ಸಾರ್ವಜನಿಕ ಜಾಗದಲ್ಲಿ ಹುಡುಗರೊಂದಿಗೆ ಓಡಾಡುವಂತಿಲ್ಲ ಎಂದು ಮುಸ್ಲಿಂ ಡಿಫೆನ್ಸ್ ಫೋರ್ಸ್ ಫತ್ವಾ ಹೊರಡಿಸಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ.
ಮುಸ್ಲಿಂ ಮುಖಂಡ ರಹೀಂ ಉಚ್ಚಿಲ ಈ ಸಂದೇಶದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. " ಹುಬ್ಬಳ್ಳಿಯಲ್ಲಿ ಮುಸ್ಲಿಂ ಯುವಕರ ಕೈಗೆ ಕಲ್ಲು ಕೊಟ್ಟು ಅನೇಕರು ಜೈಲು ಸೇರಿದ್ದಾರೆ. ಈಗ ಈ ಪೇಜ್ ಅನ್ನು ಶೇರ್ ಮಾಡಿ 500ಕ್ಕೂ ಅಧಿಕ ಜನ ಜೈಲಿಗೆ ಹೋಗಲಿದ್ದಾರೆ. ಎಲ್ಲೋ ವಿದೇಶದಲ್ಲಿ ಕೂತು ಸಮಾಜ ಬಾಹಿರ ಕೆಲಸ ಮಾಡುತ್ತಾರೆ. ಮುಸ್ಲಿಂ ತರುಣಿಯರು ಹೇಗಿರಬೇಕೆಂದು ಅವರಿಗೆ ಗೊತ್ತಿದೆ" ಎಂದು ಹೇಳಿದ್ದಾರೆ.
"ಇಸ್ಲಾಂ ಕೂಡಾ ಹೇಗೆ ಬದುಕಬೇಕು ಎಂದು ಕಲಿಸಿದೆ. ಈ ತಾಲಿಬಾನಿ ಸಂಸ್ಕೃತಿ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ನಡೆಯುವುದಿಲ್ಲ. ಭಾರತ ಸಂವಿಧಾನ ಆಧರಿತ ರಾಷ್ಟ್ರ, ಷರಿಯತ್ ಆಧರಿತ ರಾಷ್ಟ್ರ ಅಲ್ಲ. ಮಕ್ಕಳ ಬಗ್ಗೆ ಮನೆಯವರಿಗೆ ಬುದ್ಧಿವಾದ ಹೇಳಬೇಕಿಲ್ಲ. ಭಯ ಉತ್ಪಾದನೆ ಮಾಡುವ ಕೆಲಸವನ್ನು ಪೊಲೀಸರು ನಿಲ್ಲಿಸಬೇಕಿದೆ" ಎಂದರು.