ಈಗ ಶಿರಾಡಿ ಘಾಟ್ ಪರಿಸ್ಥಿತಿ ಹೇಗಿದೆ? ಇಲ್ಲಿದೆ ಸಂಪೂರ್ಣ ವಿವರ
ಮಂಗಳೂರು, ಸೆಪ್ಟೆಂಬರ್.05: ಮಂಗಳೂರು-ಬೆಂಗಳೂರಿನ ಪ್ರಯಾಣಿಕರಿಗೆ ಸಂತಸದ ಸುದ್ದಿಯೊಂದು ತೇಲಿ ಬಂದಿದೆ. ಮಂಗಳೂರು - ಬೆಂಗಳೂರು ಸಂಪರ್ಕಿಸುವ ಶಿರಾಡಿ ಘಾಟ್ ರಾಷ್ಟ್ರೀಯ ಹೆದ್ದಾರಿಯ ರಸ್ತೆ ಲಘು ವಾಹನ ಸಂಚಾರಕ್ಕೆ ತೆರೆದುಕೊಂಡಿದೆ.
ಇನ್ನು ಕೆಲವೇ ದಿನಗಳಲ್ಲಿ ಘನ ವಾಹನಗಳಿಗೂ ಈ ರಸ್ತೆ ಓಪನ್ ಆಗುವ ಮುನ್ಸೂಚನೆ ದೊರೆತಿದೆ. ಪ್ರಸ್ತುತ ಸನ್ನಿವೇಶದಲ್ಲಿ ಘಾಟ್ ಸಂಚಾರ ಮಾತ್ರ ಅತ್ಯಂತ ಅಪಾಯಕಾರಿ ಎನ್ನುವಂತಿದ್ದು ಈಗ ಕೇವಲ ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ.
ಈ ಸುದ್ದಿ ಕೇಳಿ ಬೆಂಗಳೂರಿನಲ್ಲಿ ನೆಲೆಸಿರುವ ಸಾವಿರಾರು ಕರಾವಳಿಗರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಘಾಟ್ ರಸ್ತೆ ವಾಹನ ಸಂಚಾರಕ್ಕೆ ಬಕಪಕ್ಷಿಗಳಂತೆ ಕಾದು ಕುಳಿತಿದ್ದವರಿಗೆ ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲಾಡಳಿತ ಸಂತಸದ ಸುದ್ದಿ ನೀಡಿದ್ದು, ಇಂದಿನಿಂದ ಘಾಟ್ ನಲ್ಲಿ ಲಘು ವಾಹನ ಸಂಚಾರಕ್ಕೆ ಅನುಮತಿ ನೀಡಿದೆ.
ಲಘು ವಾಹನಗಳ ಸಂಚಾರಕ್ಕೆ ಶಿರಾಡಿ ಘಾಟ್ ರಸ್ತೆ ಮುಕ್ತ
ಕಳೆದ ಒಂದೂವರೆ ತಿಂಗಳಿಂದ ಬಂದ್ ಆಗಿದ್ದ ಶಿರಾಡಿ ಘಾಟ್ ಹೆದ್ದಾರಿಯಲ್ಲಿ ಇಂದು ಮಧ್ಯಾಹ್ನದಿಂದ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ದಕ್ಷಿಣ ಕನ್ನಡ ಮತ್ತು ಹಾಸನ ಉಪ ವಿಭಾಗಾಧಿಕಾರಿಗಳು ಹಾಗೂ ಹೆದ್ದಾರಿ ಇಲಾಖೆಯ ಹಿರಿಯ ಎಂಜಿನಿಯರ್ ಗಳ ಜಂಟಿ ತಂಡ ಇಂದು ಶಿರಾಡಿ ಘಾಟ್ ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿತು.
ರಸ್ತೆಗಳ ಗುಣಮಟ್ಟ, ತಿರುವುಗಳಲ್ಲಿನ ಅಪಾಯ ಸೇರದಂತೆ ಗುಡ್ಡ ಕುಸಿಯುವ ಬಗ್ಗೆ ಪರಿಶೀಲನೆ ನಡೆಸಿದ ತಂಡ ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದೆ. ಸದ್ಯ ಘಾಟ್ ಪರಿಸ್ಥಿತಿ ಹೇಗಿದೆ ಎನ್ನುವ ಚಿತ್ರಣ ಇಲ್ಲಿದೆ.
ಲಘು ವಾಹನಗಳಿಗೆ ಸಂಚಾರಕ್ಕೆ ಅನುವು
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಂಜಿನಿಯರ್ ಗಳ ಜೊತೆಗೆ ಸ್ಥಳ ವೀಕ್ಷಣೆ ಮಾಡಿದ ಅಧಿಕಾರಿಗಳು ನಂತರ ಶಿರಾಡಿ ಘಾಟ್ ಪ್ರವಾಸಿ ಮಂದಿರದ ಕಚೇರಿಯಲ್ಲಿ ಸಭೆ ನಡೆಸಿದರು. ನಂತರ ಲಘು ವಾಹನಗಳನ್ನು ರಸ್ತೆಯಲ್ಲಿ ಸಂಚರಿಸಲು ಬಿಡುವ ನಿರ್ಧಾರ ಕೈಗೊಂಡರು.
ದಕ್ಷಿಣ ಕನ್ನಡ ಮತ್ತು ಹಾಸನ ಭಾಗದ ಜನರ ಒತ್ತಾಯ ಹಿನ್ನೆಲೆಯಲ್ಲಿ ಲಘು ವಾಹನಗಳಿಗೆ ಸಂಚಾರಕ್ಕೆ ಅನುವು ಮಾಡಲಾಗಿದೆ. ಆದರೆ ಘಾಟಿ ರಸ್ತೆಯಲ್ಲಿ 11 ಕಡೆ ಹೆದ್ದಾರಿ ಪಾರ್ಶ್ವ ಭಾಗ ಕುಸಿದಿದ್ದು, ಅಪಾಯಕಾರಿಯಾಗಿದೆ.
ಹೀಗಾಗಿ ಈ ಪ್ರದೇಶಗಳಲ್ಲಿ 24 ಗಂಟೆ ಪೊಲೀಸ್ ಭದ್ರತೆಯೊಂದಿಗೆ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಹಾಸನ ಉಪ ವಿಭಾಗಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾರೆ.
ಶಿರಾಡಿ ಘಾಟ್ ಭಾನುವಾರ ಸಂಚಾರಕ್ಕೆ ಮುಕ್ತ, ಮೈಮರೆತರೆ ಪ್ರಪಾತಕ್ಕೆ ಖಚಿತ
ಸಾಲುಗಟ್ಟಿ ನಿಂತಿದ್ದ ವಾಹನಗಳು
ಘಾಟ್ ಸಂಚಾರ ಅಪಾಯಕಾರಿಯಾಗಿದ್ದು, ಹಲವು ಕಡೆ ಶೋಚನೀಯ ಸ್ಥಿತಿ ಇದೆ. 11 ಕಡೆ ಕಾಂಕ್ರೀಟ್ ಹೆದ್ದಾರಿಯ ತಡೆಗೋಡೆ ಸಂಪೂರ್ಣ ಕುಸಿದಿದ್ದು, ನಿಧಾನಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಇದರಿಂದಾಗಿ ರಾತ್ರಿ ಹೊತ್ತಿನಲ್ಲಿ ಪೊಲೀಸರ ಕಣ್ತಪ್ಪಿಸಿ ಘನ ವಾಹನಗಳು ಸಂಚರಿಸಿದಲ್ಲಿ ಅಪಾಯ ಸಾಧ್ಯತೆಯಿದೆ ಎಂದು ಅತಂಕ ವ್ಯಕ್ತಪಡಿಸಲಾಗಿದೆ.
ಹೀಗಾಗಿ ತುರ್ತಾಗಿ ಕಾಮಗಾರಿ ನಡೆಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಆದರೆ ಇಂದು ಮುಂಜಾನೆಯೇ ಶಿರಾಡಿ ಘಾಟ್ ವಾಹನ ಸಂಚಾರಕ್ಕೆ ತೆರೆದುಕೊಳ್ಳುತ್ತದೆ ಎಂಬ ಊಹಾ ಪೋಹದ ಗೊಂದಲದಿಂದಾಗಿ ಇಂದು ಮುಂಜಾನೆಯೇ ನೂರಾರು ವಾಹನಗಳು ಶಿರಾಡಿ ಘಾಟ್ ನ ಪ್ರವೇಶ ದ್ವಾರದ ಬಳಿ ಸಾಲುಗಟ್ಟಿದ್ದವು.
ಆದರೆ ಜಿಲ್ಲಾಡಳಿತದಿಂದ ಯಾವುದೇ ಸೂಚನೆ ಬರದ ಹಿನ್ನೆಲೆಯಲ್ಲಿ ಸಂಚಾರಕ್ಕಾಗಿ ರಸ್ತೆ ತೆರೆಯಲು ಪೊಲೀಸರು ನೀರಾಕರಿಸಿದ್ದರು.
ಶಿರಾಡಿ ಘಾಟಿ ರಸ್ತೆಯಲ್ಲಿ ಜನಪ್ರತಿನಿಧಿಗಳ ಕಾರಿಗೆ ತಡೆಯೊಡ್ಡಿದ ಮರ!
ನಷ್ಟ ಅನುಭವಿಸಿದ ಹೋಟೆಲ್ ಮಾಲೀಕರು
ಮುಂಜಾನೆ ಗುಂಡ್ಯ ಗೇಟ್ ಬಳಿ ಪೊಲೀಸ್ ಸಿಬ್ಬಂದಿ ಹಾಗು ವಾಹನ ಸವಾರರ ನಡುವೆ ಮಾತಿನ ಚಕಮಕಿ ಕೂಡ ನಡೆದಿದೆ. ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಗುಂಡ್ಯ ಗೇಟ್ ಬಳಿ ವಾಹನ ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದರು.
ಲಘು ವಾಹನ ಸಂಚಾರಕ್ಕೆ ಪರಿಶೀಲನೆಯ ಬಳಿಕ ಅವಕಾಶ ನೀಡುತ್ತೇವೆ ಎಂದು ಹಾಸನ ಜಿಲ್ಲಅಧಿಕಾರಿ ರೋಹಿಣಿ ಸಿಂದೂರಿ ನಿನ್ನೆ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಮುಂಜಾನೆಯಿಂದಲೇ ವಾಹನ ಸವಾರರು ಘಾಟ್ ರಸ್ತೆ ಗೆ ಬಂದು ತಲುಪಿದ್ದು ಗೊಂದಲಕ್ಕೆ ಕಾರಣ ಎಂದು ಹೇಳಲಾಗಿದೆ.
ಕೊನೆಗೂ ಲಘು ವಾಹನ ಸಂಚಾರ ಆರಂಭವಾದ ಹಿನ್ನೆಲೆಯಲ್ಲಿ ಗುಂಡ್ಯ ಹಾಗು ಸಕಲೇಶಪುರದ ಅಂಗಡಿ ವ್ಯಾಪಾರಿಗಳಲ್ಲೂ ಮಂದಹಾಸ ಮೂಡಿದೆ. ವಾಹನ ಸಂಚಾರ ನಿಷೇಧವಾಗಿರುವ ದಿನದಿಂದ ಅಂಗಡಿ ವ್ಯಾಪಾರಿ, ಹೋಟೆಲ್ ಮಾಲಿಕರು ನಷ್ಟ ಅನುಭವಿಸುತ್ತಿದ್ದರು.
ಗೊಂದಲ ನಿವಾರಣೆ
ಹೌದು ಈಗ ಎಲ್ಲ ಗೊಂದಲ ನಿವಾರಣೆ ಆಗಿದೆ. ಒಟ್ಟಿನಲ್ಲಿ ರಾಜಧಾನಿ ಸಂಪರ್ಕಿಸಲು ಚಾರ್ಮಾಡಿ ಹೆದ್ದಾರಿಯನ್ನಷ್ಟೇ ಅವಲಂಬಿಸಿದ್ದ ಪ್ರಯಾಣಿಕರು ಸದ್ಯಕ್ಕೆ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಮಂಗಳೂರು - ಬೆಂಗಳೂರು ರೈಲು ಸಂಚಾರ ಯಾವಾಗ ಆರಂಭಗೊಳ್ಳಲಿದೆ ಎಂಬ ಪ್ರಶ್ನೆ ಈಗ ಮೂಡಲಾರಂಭಿಸಿದೆ.
ಅದಲ್ಲದೇ ಮಂಗಳೂರು- ಮೈಸೂರು ಸಂಪರ್ಕಿಸುವ ಸಂಪಾಜೆ ಘಾಟ್ ರಸ್ತೆ ದುರಸ್ತಿಗೊಂಡು ವಾಹನ ಸಂಚಾರಕ್ಕೆ ತೆರದುಕೊಳ್ಳುವ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.