ಬಂಗಾರಪ್ಪ ಬಗ್ಗೆ ಬರೆದಿದ್ದೆಲ್ಲ ಸತ್ಯ: ಪೂಜಾರಿ ಮತ್ತೆ ತಡವಿಕೊಂಡರು!
ಮಂಗಳೂರು, ಫೆಬ್ರವರಿ 14: "ನನ್ನ ಆತ್ಮಚರಿತ್ರೆಯಲ್ಲಿ ಏನು ಬರೆದಿದ್ದೇನೋ ಅವೆಲ್ಲವೂ ಸತ್ಯ. ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ಸತ್ಯವನ್ನೇ ಹೇಳಿರುವುದು" ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ತಮ್ಮ ಟೀಕಾಕಾರರಿಗೆ ತಿರುಗೇಟು ನೀಡಿದ್ದಾರೆ.
ಮಂಗಳೂರಿನಲ್ಲಿ ಮರುಮುದ್ರಿತ 'ಸಾಲ ಮೇಳದ ಸಂಗ್ರಾಮ' ಬಿಡುಗಡೆಗೊಳಿಸಿ ಅವರು ಮಾತನಾಡಿ, ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿರುವುದೆಲ್ಲ ಸುಳ್ಳು ಎಂದು ಹೇಳಿಕೆ ನೀಡಿದ್ದ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಅವರಿಗೆ ವೇದಿಕೆಯಿಂದಲೇ ಉತ್ತರಿಸಿದರು.
ಪೂಜಾರಿ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಿ ಎಂದ ಬಂಗಾರಪ್ಪ ಅಭಿಮಾನಿಗಳು
ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರಿಗೆ ಬಂಗಾರಪ್ಪ ಹೊಡೆಯಲು ಹೋಗಿದ್ದರು ಎಂದು ತಮ್ಮ ಆತ್ಮ ಚರಿತ್ರೆಯಲ್ಲಿ ಜನಾರ್ದನ ಪೂಜಾರಿ ಉಲ್ಲೇಖಿಸಿದ್ದರು. ಅದಕ್ಕೆ ಬಂಗಾರಪ್ಪ ಅವರ ಮಗ, ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಇತ್ತೀಚೆಗೆ ಜನಾರ್ಧನ ಪೂಜಾರಿ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಈ ಹಿನ್ನೆಲೆಯಲ್ಲಿ ಮಧು ಬಂಗಾರಪ್ಪ ಅವರಿಗೆ ತಿರುಗೇಟು ನೀಡಿದ ಪೂಜಾರಿ, ನಾವು ಬಿಲ್ಲವರು. ಸತ್ಯ ಹೇಳಲು ಭಯಪಡಲ್ಲ. ಬಂಗಾರಪ್ಪ ಅವರ ಕುರಿತು ಬರೆದಿರುವುದೆಲ್ಲ ಸತ್ಯ ಎಂದು ಹೇಳಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದಂತೆ ನನ್ನ ಆತ್ಮ ಚರಿತ್ರೆಯಲ್ಲಿ ಸತ್ಯವನ್ನೇ ಹೇಳಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವೆ ಸುಮಾ ವಸಂತ್ ಅವರ ಬಗ್ಗೆ ಬೇಸರ ವ್ಯಕ್ತಪಡಿಸಿದ ಜನಾರ್ದನ ಪೂಜಾರಿ, ಪ್ರತಿ ವರ್ಷ ಶಿವರಾತ್ರಿ ಜಾಗರಣೆಗೆ ಸುಮಾ ವಸಂತ್ ಕುದ್ರೋಳಿಗೆ ಬರುತ್ತಿದ್ದರು. ಆದರೆ ಈ ಬಾರಿ ಸುಮಾ ವಸಂತ್ ಕುದ್ರೋಳಿಯನ್ನು ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಕುದ್ರೋಳಿಗೆ ಬಂದಿದ್ದರಿಂದ ಸುಮಾ ವಸಂತ್ ದೊಡ್ಡ ಹುದ್ದೆಗೇರುವಂತಾಗಿತ್ತು. ಪರಮಾತ್ಮನ ಕ್ಷೇತ್ರದಲ್ಲಿ ಹೇಳುತ್ತಿದ್ದೇನೆ, ಸುಮಾ ವಸಂತ್ ಪ್ರಮಾದ ಮಾಡಿದ್ದಾರೆ ಎಂದು ಕಿಡಿ ಕಾರಿದರು.