ಆರೋಪಿ ಆದಿತ್ಯರಾವ್ ಕೃತ್ಯದ ಕುರಿತು ಸಹೋದರ ಹೇಳಿದ್ದೇನು?
Recommended Video
ಮಂಗಳೂರು, ಜನವರಿ 22: ಮಂಗಳೂರು ಬಜ್ಪೆ ವಿಮಾನ ನಿಲ್ದಾಣದ ಬಳಿ ಸ್ಫೋಟಕ ಇರಿಸಿದ ಆರೋಪಿ ಆದಿತ್ಯರಾವ್ ಬೆಂಗಳೂರಿಗೆ ಬಂದು ತಾನಾಗಿಯೇ ಪೊಲೀಸರಿಗೆ ಶರಣಾಗಿದ್ದಾನೆ. ತಾನೇ ಸ್ಫೋಟಕ ಇರಿಸಿದ್ದು ಎಂದೂ ತಪ್ಪೊಪ್ಪಿಕೊಂಡಿದ್ದಾನೆ.
ಈ ನಡುವೆ ಮಂಗಳೂರಿನಲ್ಲಿ ನೆಲೆಸಿರುವ ಆತನ ತಂದೆ ಮತ್ತು ಸಹೋದರನನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಆದಿತ್ಯರಾವ್ ಎಸಗಿದ ಕೃತ್ಯದ ಬಗ್ಗೆ ಕುಟುಂಬದವರಿಗೆ ಮಾಹಿತಿ ಇತ್ತೇ ಎಂಬ ಆಯಾಮದಲ್ಲಿ ಅವರನ್ನು ಪ್ರಶ್ನಿಸಿದ್ದಾರೆ. ಆದರೆ ಆದಿತ್ಯ ರಾವ್ಗೂ ತಮಗೂ ಸಂಬಂಧವಿಲ್ಲ. ಆತನಿಂದ ಸಂಪರ್ಕ ಕಡಿದುಕೊಂಡು ವರ್ಷಗಳೇ ಆಗಿವೆ. ಆತನ ಕುರಿತು ಯಾವುದೇ ಮಾಹಿತಿ ಇಲ್ಲ ಎಂದು ಅವರ ತಮ್ಮ ಅಕ್ಷತ್ ರಾವ್ ತಿಳಿಸಿದ್ದಾರೆ.
ಆರೋಪಿ ಆದಿತ್ಯರಾವ್ ಸ್ಫೋಟಕ ತಯಾರಿಸಿದ್ದು ಹೇಗೆ?
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಕ್ಷತ್ ರಾವ್, ಆತನ ಕೃತ್ಯಕ್ಕೆ ನಾವು ಜವಾಬ್ದಾರಿ ಹೊತ್ತುಕೊಳ್ಳಲು ಸಾಧ್ಯವಿಲ್ಲ. ಆತನನ್ನು ಮನೆಯಿಂದ ಬಿಟ್ಟು ಎರಡು ವರ್ಷಗಳಾಗಿವೆ ಎಂದರು.
ಆತನ ಕೃತ್ಯಕ್ಕೆ ನಾವು ಹೊಣೆಯಲ್ಲ
ಆದಿತ್ಯ ರಾವ್ ನನ್ನ ಅಣ್ಣ ಹೌದು. ಈ ಹಿಂದೆ ಆತ ಹುಸಿ ಬಾಂಬ್ ಬೆದರಿಕೆ ಕರೆಗಳನ್ನು ಮಾಡಿದಾಗಲೇ ಬುದ್ದಿವಾದ ಹೇಳಿದ್ದೆವು. ಆ ರೀತಿ ಮಾಡಬಾರದು ಎಂದು ತಿಳಿ ಹೇಳಿದ್ದೆವು. ಅವನನ್ನು ಮನೆಯಿಂದಲೇ ಬಿಟ್ಟುಬಿಟ್ಟಿದ್ದೇವೆ. ನಮಗೆ ಅವನ ಸಂಪರ್ಕ ಇಲ್ಲ. ನಮ್ಮ ಪಾಡಿಗೆ ನಾವು ದುಡಿಯುತ್ತಿದ್ದೇವೆ. ಅವನ ಕೃತ್ಯಕ್ಕೆ ನಾವು ಜವಾಬ್ದಾರರಲ್ಲ. ಎರಡು ವರ್ಷದಿಂದ ಅವನ ಸಂಪರ್ಕವೇ ಇಲ್ಲ ಎಂದು ಹೇಳಿದರು.
ಮೊದಲಿನಿಂದಲೂ ಸಂಪರ್ಕ ಕಡಿಮೆ
ಅವನು ಚಿಕ್ಕಂದಿನಲ್ಲಿ ಸರಿಯಾಗಿ ಇದ್ದ. ಎಂಟನೇ ಕ್ಲಾಸಿನಿಂದ ಇಬ್ಬರೂ ಬೇರೆ ಬೇರೆ ಹಾಸ್ಟೆಲ್ ಸೇರಿಕೊಂಡೆವು. ಆಗಾಗ ಮನೆಯಲ್ಲಿ ಸೇರುತ್ತಿದ್ದೆವು. ಎಂಬಿಎ, ಬಿಇ ಓದಿದ್ದಾನೆ. ನಮ್ಮ ಪೋಷಕರಿಗೆ ನಾವಿಬ್ಬರೇ ಮಕ್ಕಳು. ನಮ್ಮದು ಮೂಲತಃ ಮಣಿಪಾಲ. ಇಲ್ಲಿಗೆ ಬಂದು ಆರು ತಿಂಗಳಾಯಿತು. ತಂದೆ ಬ್ಯಾಂಕ್ ಉದ್ಯೋಗಿಯಾಗಿದ್ದರಿಂದ ಬೇರೆ ಬೇರೆ ಊರುಗಳಿಗೆ ಹೋಗುವಂತಾಗಿತ್ತು. ಅಣ್ಣನೊಂದಿಗೆ ಮೊದಲಿನಿಂದಲೂ ನನಗೆ ಸಂಪರ್ಕ ಕಡಿಮೆ. ಅವನು ಬೆದರಿಕೆ ಕರೆ ಮಾಡಿದ ಬಳಿಕ ಅಪ್ಪ ಕೂಡ ಅವನಿಗೆ ಬೈದು ಮನೆಗೆ ಬರುವುದು ಬೇಡ ಎಂದಿದ್ದರು.
ಇಂಜಿನಿಯರ್ ಆದಿತ್ಯನಿಗೇಕೆ ಬಾಂಬ್ ಬೆದರಿಕೆ ಕರೆ ಚಟ?
ತಾಯಿ ತೀರಿಕೊಂಡಾಗ ಸಂಪರ್ಕ
ನಾವು ಕೊನೆಯ ಬಾರಿ ಅವನನ್ನು ಸಂಪರ್ಕಿಸಿದ್ದು ನಮ್ಮ ತಾಯಿ ಫೆಬ್ರವರಿಯಲ್ಲಿ ತೀರಿಕೊಂಡಾಗ. ದೊಡ್ಡ ಮಗ ಆಗಿದ್ದರಿಂದ ಅವರ ಅಂತಿಮ ಕಾರ್ಯಗಳನ್ನು ಅವನು ಮಾಡಬೇಕಿತ್ತು. ಆಗ ಆತ ಚಿಕ್ಕಬಳ್ಳಾಪುರದ ಜೈಲಿನಲ್ಲಿದ್ದ. ಹೀಗಾಗಿ ಆತ ಬಾರದೆ ಇದ್ದಿದ್ದರಿಂದ ನಾನೇ ಕಾರ್ಯಗಳನ್ನು ಪೂರೈಸಿದ್ದೆ.
ಕೆಟ್ಟ ಕೃತ್ಯಕ್ಕೆ ಬೆಂಬಲ ನೀಡಿಲ್ಲ
ಆತ ಮಾಡಿದ ಕೃತ್ಯಗಳ ಬಗ್ಗೆ ತಿಳಿದುಕೊಳ್ಳಲು ಸಹ ನಮಗೆ ಆಸಕ್ತಿ ಇಲ್ಲ. ಈ ವಿಚಾರದಲ್ಲಿ ಪೊಲೀಸರ ವಿಚಾರಣೆಗೆ ನಮ್ಮ ತಂದೆ ಆತ ಮಗ ಎಂದಾಗಲೀ, ನಾನು ಅಣ್ಣ ಎಂಬುದನ್ನಾಗಲೀ ನೋಡದೆ ಸಂಪೂರ್ಣ ಸಹಕಾರ ನೀಡಿದ್ದೇವೆ. ಆತನ ಕೆಟ್ಟ ಕೃತ್ಯಕ್ಕೆ ಎಂದಿಗೂ ಬೆಂಬಲ ನೀಡಿಲ್ಲ. ಜಾಮೀನು ತೆಗೆದುಕೊಳ್ಳಲು ಸಹ ಸಹಾಯ ಮಾಡಿಲ್ಲ. ಆತನ ಕುರಿತಾದ ನನ್ನ ಎಷ್ಟೋ ಊಹೆಗಳು ತಪ್ಪಾಗಿವೆ. ಈ ಕೃತ್ಯವನ್ನು ಭಾವುಕತೆಯಿಂದ ಮಾಡಿದ್ದಾನೆ ಎಂದು ಹೇಳುವುದಿಲ್ಲ. ಈ ಘಟನೆ ಬಗ್ಗೆ ನನಗೆ ನಿನ್ನೆ ಗೊತ್ತಾಯಿತು. ನನಗೂ ಭಯ ಆಯ್ತು. ನನಗೆ ಈ ಬಗ್ಗೆ ಊಹೆ ಮಾಡುವುದಕ್ಕೆ ಕೂಡ ಆಗುತ್ತಿಲ್ಲ ಎಂದರು.