ಮಂಗಳೂರು ಸ್ಫೋಟಕ: ಆರೋಪಿ ಆದಿತ್ಯರಾವ್ ವಿರುದ್ಧ ದಾಖಲಾದ ಪ್ರಕರಣಗಳೇನು?
ಮಂಗಳೂರು, ಜನವರಿ 23: ಬಜ್ಪೆ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ ಆರೋಪಿ ಏಕಾಂಗಿಯಾಗಿ ಈ ಕೃತ್ಯ ಎಸಗಿದ್ದರೂ, ಅದು ಅಪಾರ ಜೀವಹಾನಿಗೆ ಎಡೆಮಾಡಿಕೊಡುವ ಸಾಧ್ಯತೆ ಇತ್ತು ಮತ್ತು ಅಪಾಯಕಾರಿ ದುಷ್ಕೃತ್ಯವಾಗಿದ್ದ ಕಾರಣ ಭಯೋತ್ಪಾದಕ ಕೃತ್ಯಕ್ಕೆ ತೆಗೆದುಕೊಳ್ಳುವ ಕ್ರಮವನ್ನು ತೆಗೆದುಕೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಬಾಂಬ್ ಇರಿಸಿದ್ದಾಗಿ ಹುಸಿ ಬೆದರಿಕೆ ಕರೆಗಳನ್ನು ಮಾಡಿದ್ದ ಆದಿತ್ಯ ರಾವ್, ಅದಕ್ಕಾಗಿ ಜೈಲುಶಿಕ್ಷೆಯನ್ನು ಸಹ ಅನುಭವಿಸಿದ್ದ. ಈಗ ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ್ದು ಮತ್ತು ಇಂಡಿಗೋ ವಿಮಾನಯಾನ ಸಂಸ್ಥೆಯ ವಿಮಾನದಲ್ಲಿ ಬಾಂಬ್ ಇರಿಸಿದ್ದಾಗಿ ಹುಸಿ ಕರೆ ಮಾಡಿ ಬೆದರಿಸಿದ್ದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಎಫ್ಐಆರ್ ದಾಖಲಾಗಿದೆ. ಆತನ ಮೇಲೆ ವಿವಿಧ ಕಾಯ್ದೆಗಳ ವಿವಿಧ ಸೆಕ್ಷನ್ಗಳ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
"ಆದಿತ್ಯ ಒಬ್ಬನೇ ಈ ಕೃತ್ಯ ಎಸಗಿದ್ದ; ಆತನ ಮೇಲೆ ಉಗ್ರರ ಮೇಲಿನ ಕಠಿಣ ಕ್ರಮ"
ಆದಿತ್ಯರಾವ್ ವಿರುದ್ಧ ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ. ದೇಶದ ಆಂತರಿಕ ಭದ್ರತೆಗೆ ಆತ ಧಕ್ಕೆ ಉಂಟುಮಾಡಲು ಪ್ರಯತ್ನಿಸಿದ್ದಾನೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ತಿಳಿಸಿದ್ದಾರೆ. ಆರೋಪಿಯನ್ನು ಮಂಗಳೂರಿನ ಸ್ಥಳೀಯ ನ್ಯಾಯಾಲಯ ಹತ್ತು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಸ್ಫೋಟಕ ವಸ್ತುಗಳ ಕಾಯ್ದೆ
ಸ್ಫೋಟಕ ವಸ್ತುಗಳ ಕಾಯ್ದೆ 1908, ಸೆಕ್ಷನ್ 5ರ ಅಡಿ ಅನುಮಾನಾಸ್ಪದ ಸಂದರ್ಭಗಳಲ್ಲಿ ಸ್ಫೋಟಕಗಳನ್ನು ತಯಾರಿಸುವ ಮತ್ತು ಸ್ಫೋಟಕ ಹೊಂದಿರುವ ಅಪರಾಧ ಮತ್ತು ಸೆಕ್ಷನ್ 6ರ ಅಡಿ ದುಷ್ಕೃತ್ಯದಲ್ಲಿ ಭಾಗಿ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಕಾನೂನುಬಾಹಿರ ಚಟುವಟಿಕೆ
ಕಾನೂನುಬಾಹಿರ ಚಟುವಟಿಕೆಗಳು (ತಡೆ) ಕಾಯ್ದೆ, 1967ರ ಸೆಕ್ಷನ್ 10ರ ಅಡಿ ಕಾನೂನುಬಾಹಿರ ಸಂಘಟನೆಯೊಂದರ ಸದಸ್ಯನಾಗಿರುವುದು, ಸೆಕ್ಷನ್ 11- ಕಾನೂನುಬಾಹಿರ ಸಂಸ್ಥೆಯೊಂದರ ಹಣಕಾಸು ವಹಿವಾಟಿನಲ್ಲಿ ಭಾಗಿಯಾಗಿರುವುದು, ಸೆಕ್ಷನ್ 13- ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವುದು ಮತ್ತು ಸೆಕ್ಷನ್ 18- ಸಂಚು ರೂಪಿಸಿದ ಅಪರಾಧ ಪ್ರಕರಣಗಳು ದಾಖಲಾಗಿವೆ.
ಮಂಗಳೂರು ಬಾಂಬ್ ಪ್ರಕರಣ: ಆರೋಪಿ ಆದಿತ್ಯರಾವ್ ಬೆಂಗಳೂರಲ್ಲಿ ಶರಣಾಗಿದ್ದು ಈ ಕಾರಣಕ್ಕಾಗಿ!
ಐಪಿಸಿ ಸೆಕ್ಷನ್ ಅಡಿ ಎರಡು ಪ್ರಕರಣ
ಭಾರತೀಯ ದಂಡ ಸಂಹಿತೆ (ಐಪಿಸಿ) 1860ರ ಅಡಿ ಕೂಡ ಆದಿತ್ಯ ರಾವ್ ವಿರುದ್ಧ ಎರಡು ಪ್ರಕರಣಗಳನ್ನು ದಾಖಲು ಮಾಡಲಾಗಿದೆ. ಸೆಕ್ಷನ್ 120ಬಿ ಅಡಿ ಅಪರಾಧ ಸಂಚಿನ ಪ್ರಕರಣ ಮತ್ತು ಸೆಕ್ಷನ್ 307ರ ಹತ್ಯೆ ಪ್ರಯತ್ನ ಪ್ರಕರಣಗಳನ್ನು ದಾಖಲು ಮಾಡಲಾಗಿದೆ.
ಹತ್ತು ದಿನ ಪೊಲೀಸ್ ಕಸ್ಟಡಿಗೆ
ಆರೋಪಿ ಆದಿತ್ಯರಾವ್ನನ್ನು ಹತ್ತು ದಿನಗಳ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ಆರೋಪಿಯನ್ನು ಮಧ್ಯಾಹ್ನ ಮಂಗಳೂರಿನ ಆರನೇ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆತನನ್ನು ನ್ಯಾಯಾಧೀಶ ಕೆಎನ್ ಕಿಶೋರ್ ಕುಮಾರ್ ಪೊಲೀಸ್ ಕಸ್ಟಡಿಗೆ ಒಪ್ಪಿಸಿದರು. ನ್ಯಾಯಾಲಯದಲ್ಲಿ ಕೈಕಟ್ಟಿ ನಿಂತಿದ್ದ ಆದಿತ್ಯ ರಾವ್ 'ನಾನು ಮಾಡಿದ್ದು ತಪ್ಪು' ಎಂದು ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.