ಮಳೆ ಸರಣಿ ರಜೆ; ಭಾನುವಾರ ತರಗತಿ ಪ್ರಸ್ತಾಪಕ್ಕೆ ಶಿಕ್ಷಕರಿಂದ ವಿರೋಧ
ಮಂಗಳೂರು ಆಗಸ್ಟ್ 20: ಕರಾವಳಿ ಜಿಲ್ಲೆಗಳ ಮಕ್ಕಳಿಗೆ ಇನ್ನು ಶನಿವಾರ ಮತ್ತು ಭಾನುವಾರ ಕೂಡ ಶಾಲೆಯಲ್ಲಿ ತರಗತಿಗಳು ನಡೆಯಲಿವೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿದ ಮಹಾ ಮಳೆ, ಪ್ರವಾಹದಿಂದಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸುಮಾರು 6 ದಿನಗಳ ರಜೆ ನೀಡಲಾಗಿತ್ತು. ಈ ರಜೆಯನ್ನು ಸರಿದೂಗಿಸುವ ನಿಟ್ಟಿನಲ್ಲಿ ಶನಿವಾರ ಅಥವಾ ಭಾನುವಾರ ತರಗತಿಗಳನ್ನು ನಡೆಸಲು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
ಮಳೆಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಸರಣಿ ರಜೆ ನೀಡಿತ್ತು. ವಿದ್ಯಾರ್ಥಿಗಳಿಗೆ ದೊರೆತ ಸತತ ರಜೆ ಹಿನ್ನೆಲೆಯಲ್ಲಿ ಪಠ್ಯ ಅಪೂರ್ಣಗೊಳ್ಳಲಿದ್ದು, ಪರಿಹಾರವಾಗಿ ಶನಿವಾರ ಮಧ್ಯಾಹ್ನದ ನಂತರ ಅಥವಾ ರವಿವಾರ ತರಗತಿ ನಡೆಸಲು ಸೂಚಿಸಲಾಗಿದೆ. ಕಳೆದ ಮಳೆಗಾಲದಲ್ಲೂ ಭಾರೀ ಮಳೆ ಉಂಟಾದ ವೇಳೆ ಘೋಷಿಸಿದ ರಜೆಗಳನ್ನು ಹೆಚ್ಚುವರಿ ತರಗತಿ ನಡೆಸಿ ಸರಿದೂಗಿಸಲಾಗಿತ್ತು.
ಎಲ್ಲರಂತಲ್ಲ ಈ ತಹಶೀಲ್ದಾರ್; ಸಂತ್ರಸ್ತರಿಗೆಂದು ತಲೆಮೇಲೆ ಮೂಟೆ ಹೊತ್ತು ತಂದರು!
ನೆರೆ ಪೀಡಿತ ಪ್ರದೇಶಗಳಲ್ಲಿ ಶಾಲೆ ಆರಂಭಿಸುವ ಮುನ್ನ ಎಂಜಿನಿಯರ್ ಮೂಲಕ ಕಟ್ಟಡದ ಸ್ಥಿತಿಗತಿ ಪರಿಶೀಲಿಸಿ, ಕಟ್ಟಡದ ಕ್ಷಮತಾ ದೃಢಪತ್ರ ಪಡೆಯುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಸುತ್ತೋಲೆಯಲ್ಲಿ ತಿಳಿಸಿದೆ.
ಮಳೆ ಮತ್ತು ಪ್ರವಾಹದ ಕಾರಣ ಶಾಲೆಗಳಿಗೆ ನೀಡಿದ್ದ ರಜೆಯನ್ನು ಸರಿದೂಗಿಸಲು ರವಿವಾರ ತರಗತಿ ನಡೆಸುವ ಪ್ರಸ್ತಾವಕ್ಕೆ ಶೈಕ್ಷಣಿಕ ವಲಯದಲ್ಲಿಯೇ ವಿರೋಧ ವ್ಯಕ್ತವಾಗುತ್ತಿದೆ. ಶನಿವಾರ ಮಧ್ಯಾಹ್ನ ತರಗತಿ ನಡೆಸುವುದಕ್ಕೆ ಯಾವುದೇ ತಕರಾರು ಇಲ್ಲ. ಆದರೆ ಭಾನುವಾರ ನಡೆಸುವ ಬಗ್ಗೆ ಆಕ್ಷೇಪವಿದೆ ಎಂದು ಮಂಗಳೂರು ಪ್ರೌಢಶಾಲಾ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಅಲೋಶಿಯಸ್ ಡಿ ಸೋಜಾ ತಿಳಿಸಿದ್ದಾರೆ.
ವಾರದ 6 ದಿನಗಳಲ್ಲಿ ಪಾಠ ಪ್ರವಚನ ಕೇಳುವ ಮಕ್ಕಳಿಗೆ ವಾರದಲ್ಲಿ ಒಂದು ದಿನವಾದರೂ ವಿಶ್ರಾಂತಿ ಬೇಕಾಗುತ್ತದೆ. ವಾರದ 7 ದಿನವೂ ಪಾಠ ಕೇಳುವುದೆಂದಾದರೆ ಮಕ್ಕಳು ಮಾನಸಿಕ ಒತ್ತಡಕ್ಕೆ ಒಳಗಾಗಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.