ಇತಿಹಾಸ ಅರಿಯದವರಿಂದ ಟಿಪ್ಪು ಬಗ್ಗೆ ಅಪಪ್ರಚಾರ: ಖಾದರ್
ಟಿಪ್ಪು ಜಯಂತಿಯನ್ನು ಕೆಲವರು ವಿರೋಧಿಸುತ್ತಾರೆ ಎಂಬ ಕಾರಣಕ್ಕೆ ಕಾರ್ಯಕ್ರಮವನ್ನು ಕೈಬಿಡುವುದಿಲ್ಲ. ಜನರ ಭಾವನೆಗಳನ್ನು ಕೆರಳಿಸಿ, ರಾಜಕೀಯ ಮಾಡಲು ಯತ್ನಿಸುವವರಿಗೆ ಹೆದರುವುದಿಲ್ಲ. ಅಂತಹವರಿಗೆ ತಕ್ಕ ಪಾಠ ಕಲಿಸಲಾಗುವುದು: ಖಾದರ್
ಮಂಗಳೂರು, ಅಕ್ಟೋಬರ್ 21: ರಾಜ್ಯ ಸರಕಾರ ನವೆಂಬರ್ 10ರಂದು ನಡೆಸಲು ಉದ್ದೇಶಿಸಿರುವ ಟಿಪ್ಪು ಜಯಂತಿಯನ್ನು ಕೈಬಿಡುವುದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್ ತಿಳಿಸಿದ್ದಾರೆ.
ಮಂಗಳೂರು ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಈ ಬಗ್ಗೆ ಮಾತನಾಡಿದ ಖಾದರ್, ಕಳೆದ ವರ್ಷ ಹೊರಡಿಸಿರುವ ಆದೇಶದಂತೆ ಈ ವರ್ಷವೂ ಸರಕಾರದ ವತಿಯಿಂದ ಟಿಪ್ಪು ಸುಲ್ತಾನ್ ಜಯಂತಿಯನ್ನು ಆಚರಿಸಲಾಗುವುದು . ಹಾಗೆಯೇ ತಲಾಖ್ ಮತ್ತು ಏಕರೂಪ ನಾಗರಿಕ ಸಂಹಿತೆ ವಿಚಾರದಲ್ಲಿ ಕೇಂದ್ರ ಸರಕಾರ ನಿರ್ಧಾರಕ್ಕೆ ಬರುವ ಮುನ್ನ ಮುಸ್ಲಿಂ ಧಾರ್ಮಿಕ ಮುಖಂಡರ ಜೊತೆ ಚರ್ಚೆ ನಡೆಸಬೇಕು ಎಂದು ಹೇಳಿದರು.[ಕೊಡವ ಸಮಾಜ ಬಿಜೆಪಿ ಬ್ರ್ಯಾಂಚ್ ಆಫೀಸ್ ಆಗಬಾರದು: ಎಕೆ ಸುಬ್ಬಯ್ಯ]
ಭಾರತದ ಸಂವಿಧಾನದ ವ್ಯಾಪ್ತಿಯೊಳಗೆ ಇಸ್ಲಾಂನ ಆಚರಣೆಗಳಿಗೆ ಮಾನ್ಯತೆ ಇದೆ. ಅದಕ್ಕೆ ತಕ್ಕಂತೆ ಕೇಂದ್ರ ಸರಕಾರವೂ ಗೌರವ ನೀಡಬೇಕಾಗುತ್ತದೆ. ಟಿಪ್ಪು ಜಯಂತಿಯನ್ನು ಕೆಲವರು ವಿರೋಧಿಸುತ್ತಾರೆ ಎಂಬ ಕಾರಣಕ್ಕೆ ಕಾರ್ಯಕ್ರಮವನ್ನು ಕೈಬಿಡುವುದಿಲ್ಲ. ಜನರ ಭಾವನೆಗಳನ್ನು ಕೆರಳಿಸಿ, ರಾಜಕೀಯ ಮಾಡಲು ಯತ್ನಿಸುವವರಿಗೆ ಹೆದರುವುದಿಲ್ಲ. ಅಂತಹವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದರು.['ಹಿಂದೂಗಳ ಮೇಲೆ ದೌರ್ಜನ್ಯ ಮಾಡಿದ ಟಿಪ್ಪುವಿನ ಜಯಂತಿ ಬೇಡ']
ಆಳ್ವಿಕೆ ನಡೆಸಿದ ಎಲ್ಲ ವ್ಯಕ್ತಿಗಳಲ್ಲೂ ಒಳ್ಳೆಯ ಮತ್ತು ಕೆಟ್ಟ ಗುಣಗಳು ಇದ್ದವು. ಇತಿಹಾಸ ಅರಿಯದವರು ಮತ್ತು ಅಧ್ಯಯನ ಮಾಡಲು ಆಸಕ್ತಿ ತೋರದವರು ತಪ್ಪು ಮಾಹಿತಿ ಪ್ರಚಾರ ಮಾಡಿ, ಜನರನ್ನು ಕೆರಳಿಸುತ್ತಾರೆ. ಇಲ್ಲಿ ಸರಕಾರಕ್ಕಿಂತ ದೊಡ್ಡವರು ಯಾರು ಇಲ್ಲ ಎಂದು ಅವರು ಹೇಳಿದರು.