ಕಾಂಗ್ರೆಸ್ನವರ ಮಕ್ಕಳನ್ನು ಅಗ್ನಿಪಥ್ಗೆ ಕೇಳಿಲ್ಲ, ದೇಶಕ್ಕಾಗಿ ಸೇವೆ ಸಲ್ಲಿಸುವವರು ಬರ್ತಾರೆ: ಕಟೀಲ್
ಮಂಗಳೂರು, ಜೂನ್ 26: ಅಗ್ನಿಪಥ್ ಯೋಜನೆಗೆ ಸರಕಾರ ಕಾಂಗ್ರೆಸ್ನವರ ಮಕ್ಕಳನ್ನು ಕೇಳಿಲ್ಲ. ಸೇನೆಗೆ ಸೇರ್ಪಡೆಯಾಗಬೇಕೆನ್ನುವ, ದುಡಿಯಲು ಬಯಸುವವರಿಗೆ ಈ ಯೋಜನೆ ಮಾಡಲಾಗಿದೆ. ಶಿಕ್ಷಣದ ಜೊತೆಗೆ ಉದ್ಯೋಗ ಕೊಡುವ ರೀತಿಯಲ್ಲಿ, ಮುಂದಕ್ಕೂ ಉದ್ಯೋಗದ ಅವಕಾಶ ಕೊಡುವ ಹಾಗೆ ಅಗ್ನಿಪಥ್ ಯೋಜನೆಯಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಮಾತನಾಡುವ ವೇಳೆ ಮಾಧ್ಯ ಪ್ರತಿನಿಧಿಗಳ ಅಗ್ನಿಪಥ್ ಬಗ್ಗೆ ಕಾಂಗ್ರೆಸ್ ವಿರೋಧದ ಬಗ್ಗೆ ಕೇಳಿದ್ದಕ್ಕೆ ಪ್ರತಿಕ್ರಿಯೆ ನೀಡಿದರು. "ಸೇನೆಗೆ ಯುವ ಜನತೆ ಸೇರ್ಪಡೆಯಾಗಬೇಕು. ಎಲ್ಲರಿಗೂ ಸೈನಿಕ ಸಂಸ್ಕಾರ, ಶಿಕ್ಷಣ ದೊರೆಯಬೇಕು. ರಾಷ್ಟ್ರಭಕ್ತಿ ಜಾಗೃತಿಯಾಗಬೇಕೆಂದು 17 ರಿಂದ 23 ವರ್ಷದವರಿಗೆ ಈ ಯೋಜನೆ ತರಲಾಗಿದೆ. ಇಂತಹ ಜಾಗೃತಿ ಮೂಡಿದ್ದಲ್ಲಿ ರಾಷ್ಟ್ರಕ್ಕೂ ಒಳ್ಳೆಯದಾಗುತ್ತದೆ ಎಂಬ ಚಿಂತನೆ ಅಗ್ನಿಪಥ್ ನ ಹಿಂದಿದೆ. ಆದರೆ ಈ ಅಗ್ನಿಪಥ್ ಗೆ ನಾವು ಕಾಂಗ್ರೆಸ್ ನ ಮಕ್ಕಳನ್ನು ಕೇಳುತ್ತಿಲ್ಲ. ಸೇನೆಗೆ ಸೇರ್ಪಡೆ, ದುಡಿಯಲು ಬಯಸುವವರಿಗೆ ಶಿಕ್ಷಣದ ಜೊತೆಗೆ ಉದ್ಯೋಗ ಕೊಡುವ ರೀತಿಯಲ್ಲಿ ಮುಂದಕ್ಕೂ ಉದ್ಯೋಗದ ಅವಕಾಶ ಕೊಡುವ ಹಾಗೆ ಅಗ್ನಿಪಥ್ ಯೋಜನೆಯನ್ನು ರಚನೆ ಮಾಡಲಾಗಿದೆ," ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹೇಳಿದರು.
ಆರ್.ಬಿ.ಶ್ರೀಕುಮಾರ್ ಬಂಧನಕ್ಕೆ ಸಂತಸ ವ್ಯಕ್ತಪಡಿಸಿರುವ ಇಸ್ರೋ ಮಾಜಿ ವಿಜ್ಞಾನಿ
ಒಳ್ಳೆಯ ಕಾರ್ಯಕ್ಕೆಲ್ಲಾ ಕಾಂಗ್ರೆಸ್ನಿಂದ ವಿಘ್ನ
ಮೋದಿಯವರು ರಾಷ್ಟ್ರಕ್ಕೆ ಉಪಯುಕ್ತವಾಗುವಂತಹ ಹತ್ತಾರು ಯೋಜನೆಗಳನ್ನು ತಂದಿದ್ದಾರೆ. ಆ ಎಲ್ಲಾ ಯೋಜನೆಗಳನ್ನು ವಿರೋಧ ಮಾಡಿದವರು ಕಾಂಗ್ರೆಸ್ ನವರು. ಈ ದೇಶದಲ್ಲಿ ಯಾವುದೆಲ್ಲಾ ಒಳ್ಳೆಯದಾಗುತ್ತದೋ ಅದನ್ನೆಲ್ಲಾ ವಿರೋಧ ಮಾಡುವುದು ಕಾಂಗ್ರೆಸಿಗರ ಮಾನಸಿಕತೆ. ಅದರಲ್ಲಿ ಅಗ್ನಿಪಥ್ ಕೂಡಾ ಒಂದು ಎಂದು ಅವರು ಹೇಳಿದರು.
ಕಾಂಗ್ರೆಸ್ನಿಂದ ಗಲಭೆಗೆ ಪ್ರಚೋದನೆ
ಕಾಂಗ್ರೆಸ್ಗೆ ಅಧಿಕಾರ ಕೈತಪ್ಪಿದ ಬಳಿಕ ನಿರಂತರವಾಗಿ ಗಲಭೆಗೆ ಪ್ರಚೋದನೆ ನೀಡುತ್ತಿದೆ. ಕಾನೂನು ಕೈಗೆತ್ತಿಕೊಳ್ಳುವ ಎಲ್ಲಾ ಘಟನೆಗಳಲ್ಲಿ ಸೂತ್ರಧಾರರಂತೆ ವರ್ತಿಸುತ್ತಿದೆ. ಡಿಜೆ ಹಳ್ಳಿ - ಕೆಜಿ ಹಳ್ಳಿ ಗಲಭೆ, ಶಿವಮೊಗ್ಗ, ಹುಬ್ಬಳ್ಳಿ ಗಲಭೆಗಳ ಹಿಂದೆ ಕಾಂಗ್ರೆಸ್ ಇದೆ. ಕಾಂಗ್ರೆಸ್ ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡುತ್ತದೆ. ದ್ವೇಷದ ರಾಜಕಾರಣವನ್ನು ಮಾಡುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ನ ಮೂರ್ಖತನದ ಪರಮಾವಧಿ
"ಪಠ್ಯಪುಸ್ತಕ ವಿಚಾರದಲ್ಲಿ ರೋಹಿತ್ ಚಕ್ರತೀರ್ಥ ಏನು ಹೇಳಿದ್ದಾರೆ. ಪಠ್ಯದಲ್ಲಿ ಏನಿದೆ ಎಂಬುದನ್ನು ತಿಳಿಯದೆ ಮೂರ್ಖತನದ ಪರಮಾವಧಿಯನ್ನು ಮೆರೆಯುತ್ತಿದೆ. ಕಾಂಗ್ರೆಸ್ ನವರು ಕ್ಷಮೆ ಕೇಳಿ ಎಂದು ಹೇಳಿದರೆ ಬಿಜೆಪಿ ಯಾವುದಕ್ಕೂ ಕ್ಷಮೆ ಕೇಳುವುದಿಲ್ಲ. ವಿರೋಧ ಪಕ್ಷದವರು ಕೇಳುತ್ತಾರೆಂದು ಎಲ್ಲದಕ್ಕೂ ಕ್ಷಮೆ ಕೇಳಲು ಸಾಧ್ಯವಿಲ್ಲ. ನಾವು ಆಡಳಿತ ನಡೆಸುವವರು, ಹೇಗೆ ನಡೆಸಬೇಕೆಂದು ನಮಗೆ ಗೊತ್ತು. ನಿರ್ದಿಷ್ಟ ಸಿದ್ಧಾಂತವನ್ನು ಈ ದೇಶದಲ್ಲಿ ಜಾರಿಗೆ ತಂದಿರೋದೆ ಕಾಂಗ್ರೆಸ್. ಸಾಹಿತಿಗಳು ಈ ಬಗ್ಗೆ ಯೋಚನೆ ಮಾಡಬೇಕಿದೆ. ಮೊದಲಿಗೆ ಪುಸ್ತಕದ ಒಳಗೆ ಏನಿದೆ ಎಂದು ತಿಳಿದುಕೊಳ್ಳಲಿ," ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.
ಇಂದಿರಾ ಗಾಂಧಿ ಸರ್ವಾಧಿಕಾರಿ
ತುರ್ತು ಪರಿಸ್ಥಿತಿ ಕರಾಳ ದಿನಾಚರಣೆಯ ಬಗ್ಗೆ ಮಾತನಾಡಿ, "ಸ್ವಾತಂತ್ರ್ಯ ದಲ್ಲಿ ಭಾಗವಹಿಸದರೆಂಬ ಕಾರಣಕ್ಕಾಗಿ ದೇಶದ ಜನ ಕಾಂಗ್ರೆಸ್ಗೆ ಸುಧೀರ್ಘ ಅಧಿಕಾರ ನೀಡಿದರು. ಆದರೆ ಕಾಂಗ್ರೆಸ್ ಜನರ ಭರವಸೆಯನ್ನು ಹುಸಿಗೊಳಿಸಿತು. ಇಂದಿರಾಗಾಂಧಿ ತನ್ನ ವಿರುದ್ಧ ಧ್ವನಿ ಎತ್ತಿದವರ ವಿರುದ್ಧ ತುರ್ತು ಪರಿಸ್ಥಿತಿ ಹೇರಿ ಸರ್ವಾಧಿಕಾರಿಯಾದರು. ಪ್ರಜಾಪ್ರಭುತ್ವವನ್ನು ಕಗ್ಗೊಲೆ ಮಾಡಿ ಸಂವಿಧಾನವನ್ನು ಕತ್ತಲೆಯಲ್ಲಿರಿಸಿದರು. ದೇಶವನ್ನು ಮತ್ತೆ ಗುಲಾಮಗಿರಿಯತ್ತ ತಳ್ಳಿದರು. ಸರ್ವಾಧಿಕಾರಿ ಇಂದಿರಾ ಗಾಂಧಿ ಇಡೀ ದೇಶದಲ್ಲಿ ಜನ ಜೈಲು ವಾಸ ಅನುಭವಿಸುವಂತೆ ಮಾಡಿದರು. ಬ್ರಿಟಿಷರ ದಬ್ಬಾಳಿಕೆಗಿಂತ ಹೆಚ್ಚು ಹಿಂಸೆಯನ್ನು ಕಾಂಗ್ರೆಸ್ ಜನರಿಗೆ ನೀಡಿತು," ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಜಯಪ್ರಕಾಶ್ ನಾರಾಯಣ್, ಲಾಲ್ ಕೃಷ್ಣ ಅಡ್ವಾಣಿ, ವಾಜಪೇಯಿ ಸೇರಿದಂತೆ ಘಟಾನುಘಟಿ ನಾಯಕರು ಜೈಲು ಸೇರಿದರು. ಅವರ ಜೊತೆಗೆ ಅತೀ ಸಾಮಾನ್ಯ ಜನರೂ ಜೈಲು ಸೇರಿದರು. ಈಗ ಕಾಂಗ್ರೆಸ್ ಬಿಜೆಪಿಗೆ ರಬ್ಬರ್ ಸ್ಟ್ಯಾಂಪ್ ರಾಷ್ಟ್ರಪತಿ ಆಯ್ಕೆ ಅಂತಾ ಮೂದಲಿಸುತ್ತಿದೆ. ಆದರೆ ಅವರು ಒಮ್ಮೆ ನೆನಪು ಮಾಡಲಿ. ತುರ್ತು ಪರಿಸ್ಥಿತಿ ಹೇರಲು ಮಾಡಿದ ಕುತಂತ್ರ ನೆನಪು ಮಾಡಲಿ ಅಂತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.