ಮಂಗಳೂರಿನಲ್ಲಿ ಶುಭ ಸಮಾರಂಭಗಳಿಗೂ ತಟ್ಟಿದ ನೀರಿನ ಬಿಸಿ
ಮಂಗಳೂರು, ಮೇ 19:ಮಂಗಳೂರಿನಲ್ಲಿ ನೀರಿನ ತೀವ್ರ ಅಭಾವ ಎದುರಾಗಿದೆ. ನಗರದಲ್ಲಿ ರೇಷನಿಂಗ್ ನಿಯಮದಂತೆ 3 ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ. ಶೀಘ್ರ ಮಳೆಯಾಗದಿದ್ದರೆ ಮೇ 20ರ ಬಳಿಕ ನಿರಂತರ 4 ದಿನಕ್ಕೊಮ್ಮೆ ನೀರು ನೀಡಿ, ಮತ್ತೆ 4 ದಿನ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ 3.77 ಮೀ. ಇದೆ. ನಗರದ ಬಹುತೇಕ ಮನೆಗಳಿಗೆ ನೀರಿನ ಕೊರತೆ ಮುಂದುವರೆದಿದೆ. ನಗರದಲ್ಲಿ ನೀರಿನ ಸಮಸ್ಯೆ ಬಿಗಡಾಯಿಸುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಿದೆ. ಆದರೆ ಈ ನಡುವೆ ಟ್ಯಾಂಕರ್ಗಳಿಗೂ ಬೇಕಾದಷ್ಟು ನೀರು ಸದ್ಯ ಲಭಿಸುತ್ತಿಲ್ಲ.
ಮಳೆಯಾಗದಿದ್ದರೆ ಮಂಗಳೂರಿಗೆ ಎದುರಾಗಲಿದೆ ನೀರಿನ ಸಂಕಷ್ಟ
ಖಾಸಗಿ ಟ್ಯಾಂಕರ್ಗಳಿಗೆ ಕದ್ರಿ ಕಂಬಳದಲ್ಲಿರುವ ಬಾವಿಯ ಜಲ ಮೂಲವೇ ಪ್ರಧಾನವಾಗಿದೆ. ಆದರೆ ಈಗ ಅಲ್ಲಿಯೂ ನೀರಿನ ಕೊರತೆ ಎದುರಾಗಿದೆ. ಒಂದು ಕಾಲದಲ್ಲಿ ಅಲ್ಲಿಂದ ನಿರಂತರವಾಗಿ ಟ್ಯಾಂಕರ್ಗಳಿಗೆ ನೀರು ಪೂರೈಕೆ ಆಗುತ್ತಿತ್ತು. ಈಗ ಪರಿಸ್ಥಿತಿ ಹಾಗಿಲ್ಲ, ದಿನಕ್ಕೆ 20-25 ಟ್ಯಾಂಕರ್ ನೀರು ಪೂರೈಕೆ ಆಗುತ್ತಿದ್ದ ಕಡೆ ಈಗ 4-5 ಟ್ಯಾಂಕರ್ ನೀರು ಮಾತ್ರ ಲಭಿಸುತ್ತದೆ.
ಟ್ಯಾಂಕರ್ಗಳು ಕ್ಯೂ ನಿಂತು, ಬಾವಿಯಲ್ಲಿ ನೀರು ಸಂಗ್ರಹವಾಗುವ ತನಕ ಕಾದು ಬಳಿಕ ತುಂಬಿಸಿಕೊಳ್ಳಬೇಕಾದ ಸ್ಥಿತಿಯಿದೆ. ನೀರಿನ ಕೊರತೆಯಿಂದಾಗಿ ಖಾಸಗಿಯವರು ಟ್ಯಾಂಕರ್ ನೀರಿನ ದರವನ್ನು ಹೆಚ್ಚಳ ಮಾಡಿದ್ದಾರೆ. ಈ ಹಿಂದೆ 6,000 ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕರ್ಗೆ 1,200 ರೂ. ಇತ್ತು. ಈಗ ಅದು 1,500 ರೂಪಾಯಿಗೆ ಏರಿದೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೂ ತಟ್ಟಿದ ನೀರಿನ ಬರದ ಬಿಸಿ
ರೇಷನಿಂಗ್ ವ್ಯವಸ್ಥೆ ಜಾರಿ ಬಳಿಕ ಕೆಲವು ಪ್ರದೇಶಗಳಿಗೆ ಸರಬರಾಜು ಸಮರ್ಪಕವಾಗಿ ಆಗದಿರುವುದರಿಂದ ಈ ಪ್ರದೇಶಗಳ ಜನರು ಟ್ಯಾಂಕರ್ ನೀರು ಅವಲಂಬಿಸುವುದು ಅನಿವಾರ್ಯ ವಾಗಿದೆ. ಕೆಲವು ಕಡೆಗೆ ಪಾಲಿಕೆ ವತಿಯಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲು ವ್ಯವಸ್ಥೆ ಮಾಡಲಾಗಿದೆ. ಟ್ಯಾಂಕರ್ ಚಲಿಸಲಾಗದ ಎತ್ತರ ಪ್ರದೇಶಗಳಿಗೆ ಚಿಕ್ಕ ವಾಹನಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ.
ಮಂಗಳೂರಿನಲ್ಲಿ ನೀರಿಗೆ ಸಮಸ್ಯೆ, ಟ್ಯಾಂಕರ್ ಗಳಿಗೆ ಹೆಚ್ಚಿದ ಬೇಡಿಕೆ
ನಗರದಲ್ಲಿ ನೀರು ಅಭಾವವಿರುವ ಮನೆಗಳಿಗೆ ಟೀಮ್ ಗರೋಡಿ ಸಂಘಟನೆ ನೇತೃತ್ವದಲ್ಲಿ ಉಚಿತ ನೀರು ಸರಬರಾಜು ವ್ಯವಸ್ಥೆ ಕೈಗೊಳ್ಳಲಾಗಿದೆ. ನೀರಿನ ಕೊರತೆ ಎದುರಾದ ಹಿನ್ನೆಲೆಯಲ್ಲಿ ನಗರದ ಕೆಲವು ಹೋಟೆಲ್ ಗಳಲ್ಲಿ ಕಾಫಿ ತಿಂಡಿಯನ್ನು ಪೇಪರ್ ಪ್ಲೇಟ್ ಹಾಗೂ ಪ್ಲಾಸ್ಟಿಕ್ ಗ್ಲಾಸ್ನಲ್ಲಿ ನೀಡುತ್ತಿದ್ದಾರೆ.
ಶುಭ ಸಮಾರಂಭಕ್ಕೆ ಧರಿಸುವ ಬಟ್ಟೆಗಳನ್ನು ತೊಳೆದು ಕೊಡಲು ಲಾಂಡ್ರಿಗಳಿಗೆ ನೀಡಿದರೆ, ಸದ್ಯ ಮಂಗಳೂರಿನಲ್ಲಿ ನಿಗದಿತ ದಿನಾಂಕಕ್ಕೆ ಬಟ್ಟೆ ವಾಪಾಸ್ ಸಿಗುತ್ತಿಲ್ಲ. ಕಾರಣವೆಂದರೆ, ಕಾಡುತ್ತಿರುವ ನೀರಿನ ಕೊರತೆ . ನಗರದಲ್ಲಿ ನೀರಿನ ರೇಷನಿಂಗ್ ಜಾರಿಯಾದ ಬಳಿಕ ಬೇರೆ ಬೇರೆ ಉದ್ಯಮಕ್ಕೆ ನೀರಿನ ಹೊಡೆತ ಎದುರಾಗಿದೆ. ಅದರಂತೆ ಬಟ್ಟೆ ತೊಳೆದು ನೀಡುವ ಲಾಂಡ್ರಿ ಉದ್ಯಮದವರಿಗೂ ನೀರಿನ ಕೊರತೆ ಬಹುದೊಡ್ಡ ಪರಿಣಾಮ ಬೀರಿದೆ.
ಶೀಘ್ರದಲ್ಲಿ ಮಳೆಯಾಗುವ ಮೂಲಕ ನಗರದಲ್ಲಿ ನೀರಿನ ಕೊರತೆ ನಿವಾರಣೆಯಾಗಲಿ ಎಂದು ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಗರದ ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಸಲಾಗುತ್ತಿದೆ.