ಕರಾವಳಿಗರಿಗೆ ಕಾಡುತ್ತಿರುವ ನೀರಿನ ಸಮಸ್ಯೆ:ಕೈಗಾರಿಕೆಗಳ ಮೇಲೂ ಎಫೆಕ್ಟ್
ಮಂಗಳೂರು, ಮೇ 08:ಮಂಗಳೂರು ನಗರದಲ್ಲಿ ನೀರಿನ ಸರಬರಾಜು ಬೃಹತ್ ಸಮಸ್ಯೆಯಾಗಿ ಕಾಡತೊಡಗಿದೆ. ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ.
ಒಂದೆಡೆ ನಗರದಲ್ಲಿ ಕುಡಿಯುವ ನೀರಿನ ರೇಷನಿಂಗ್ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಇನ್ನೊಂದೆಡೆ ನಗರದಲ್ಲಿರುವ ಕೈಗಾರಿಕೆಗಳಿಗೆ ನೀರಿನ ಪೂರೈಕೆ ಮಾಡುವ ಅಣೆಕಟ್ಟಿನಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಕೈಗಾರಿಕೆಗಳಿಗೆ ನೀರು ಪೂರೈಕೆಯಲ್ಲಿ ಸಂಪೂರ್ಣ ವ್ಯತ್ಯಯವಾಗಿದೆ.
ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೂ ತಟ್ಟಿದ ನೀರಿನ ಬರದ ಬಿಸಿ
ವಾರದ ಹಿಂದೆ ಎಎಂಆರ್ ಡ್ಯಾಂನಲ್ಲಿ 2 ಮೀಟರ್ ನೀರಿತ್ತು. ಆದರೆ ಈಗ ಪ್ರಸ್ತುತ ಅಣೆಕಟ್ಟು ಸಂಪೂರ್ಣ ಬರಿದಾಗಿದೆ. ಇದರಿಂದ ಎಎಂಆರ್ ಅಣೆಕಟ್ಟು ಮೇಲ್ಭಾಗದಲ್ಲಿರುವ ಎಸ್ ಇ ಝೆಡ್, ಎಂಆರ್ಪಿಎಲ್ ಗೆ ನೀರು ಪೂರೈಕೆಯ ಅಣೆಕಟ್ಟಿನಲ್ಲೂ ನೀರು ತಳಮಟ್ಟ ಕುಸಿದಿದೆ.
ಎಎಂಆರ್ ಅಣೆಕಟ್ಟಿನಲ್ಲಿ ನೀರು ಸಂಪೂರ್ಣ ಖಾಲಿಯಾದ ಪರಿಣಾಮ ಎಸ್ಇಝೆಡ್ಗೆ ನೀರು ಸಂಪೂರ್ಣ ಸ್ಥಗಿತವಾಗಿದೆ ಎಂದು ಹೇಳಲಾಗಿದೆ. ಎಂ ಆರ್ ಪಿ ಎಲ್ ಗೆ ಶೇ.50ರಷ್ಟು ನೀರು ಸರಬರಾಜು ನಿಂತಿದ್ದು, ಸಂಪೂರ್ಣ ನಿಲ್ಲಿಸಿದರೆ ಉತ್ಪಾದನೆಗೆ ತೊಂದರೆಯಾಗಲಿದೆ ಎಂದು ಹೇಳಲಾಗಿದೆ.
ಸರಪಾಡಿಯಲ್ಲಿರುವ ಎಂಆರ್ಪಿ ಎಲ್ ಡ್ಯಾಂನಿಂದ ಸಾಮಾನ್ಯವಾಗಿ ಪ್ರತಿನಿತ್ಯ 6 ಎಂಜಿಡಿ ನೀರು ಸರಬರಾಜಾಗುತ್ತಿದ್ದು, ಇದೀಗ ನೀರಿನ ಅಭಾವ ಕಂಡು ಬಂದ ಹಿನ್ನೆಲೆಯಲ್ಲಿ ನೀರಿನ ಸರಬರಾಜು 4 ಎಂಜಿಡಿಗೆ ಕಡಿತಗೊಳಿಸಲಾಗಿದೆ.
ಮಳೆಯಾಗದಿದ್ದರೆ ಮಂಗಳೂರಿಗೆ ಎದುರಾಗಲಿದೆ ನೀರಿನ ಸಂಕಷ್ಟ
ಎಸ್ಇಝೆಡ್ ಪ್ರದೇಶಕ್ಕೆ ಪ್ರತಿನಿತ್ಯ 9 ಎಂಜಿಡಿ ನೀರು ಸರಬರಾಜು ಮಾಡಲಾಗುತ್ತಿದ್ದು, ನೀರು ಶೇಖರಣೆಯಿಲ್ಲದ ಕಾರಣ ಅದನ್ನು ಸಂಪೂರ್ಣ ಸ್ತಬ್ದಗೊಳಿಸಲಾಗಿದೆ. ಒಂದು ವೇಳೆ ಮಳೆ ಬಾರದೆ ಇದ್ದರೆ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲಿದೆ. ಒಟ್ಟಿನಲ್ಲಿ ನೀರಿನ ಅಭಾವ ದೊಡ್ಡ ದೊಡ್ಡ ಕೈಗಾರಿಕೆಗಳಿಗೂ ತಟ್ಟಿದೆ.
ತುಂಬೆ ಅಣೆಕಟ್ಟಿನಲ್ಲಿ ಉಳಿದಿರುವುದು ಕೇವಲ 4.90 ಮೀಟರ್ ನೀರು!
ಮಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ದಿನ ಕಳೆದಂತೆ ಹೆಚ್ಚಾಗುತ್ತಿದೆ. ಎತ್ತರ ಪ್ರದೇಶಗಳಿಗೆ ಟ್ಯಾಂಕರ್ಗಳಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಒಂದೆರಡು ದಿನದಲ್ಲಿ ಮತ್ತೆ ರೇಶನಿಂಗ್ ಆರಂಭವಾಗಲಿದ್ದು, ನೀರಿನ ಸಮಸ್ಯೆ ಮತ್ತಷ್ಟು ಜಟಿಲವಾಗುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ನೀರು ಪೋಲಾಗದಂತೆ ತಡೆಯುವುದು, ಮಿತವಾದ ಬಳಕೆಯೇ ಸದ್ಯದ ಅನಿವಾರ್ಯತೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.