ಬಾಂಜಾರುಮಲೆಗೆ ಒದಗಿ ಬಂತು ವಿಧಾನಸಭೆ ಚುನಾವಣಾ ಮತಗಟ್ಟೆ ಭಾಗ್ಯ
ಮಂಗಳೂರು ಮೇ 8 : ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿರುವ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕೂಡ ದುರ್ಗಮ ಮತಗಟ್ಟೆಗಳಿದ್ದು, ಅಂತಹ ಪ್ರದೇಶದಲ್ಲೂ ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ ಸಿದ್ಧತೆ ನಡೆಸಲಾಗಿದೆ.
ಪ್ರಯಾಣ ಮಾಡುವ ವ್ಯವಸ್ಥೆಗಳಿಲ್ಲ, ಅಸಮರ್ಪಕ ಸೌಲಭ್ಯ, ಮುಖ್ಯವಾಹಿನಿಯಿಂದ ದೂರ ಉಳಿದಿರುವಂತಹ ಹಳ್ಳಿಗಳಲ್ಲೂ ಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಂತಹ ಎರಡು ಶ್ಯಾಡೋ ಮತಗಟ್ಟೆಗಳು ದಕ್ಷಿಣಕನ್ನಡ ಜಿಲ್ಲೆಯಲ್ಲಿದೆ.
ದ.ಕ. ಜಿಲ್ಲೆಯಲ್ಲಿ ಚುನಾವಣೆಗೆ ಸಿದ್ಧತೆ: ಮತಗಟ್ಟೆಯೊಳಗೆ ಯಾರಿಗೆಲ್ಲಾ ಪ್ರವೇಶ?
ಅವುಗಳಲ್ಲೊಂದು ಬೆಳ್ತಂಗಡಿ ತಾಲೂಕಿನ ಬಾಂಜಾರುಮಲೆ. ಇಲ್ಲಿಗೆ ಕೆಲ ವರ್ಷಗಳ ಹಿಂದೆಯಷ್ಟೇ ಮತಗಟ್ಟೆ ಒದಗಿಸಲಾಗಿತ್ತು. ಆದರೆ ಮೊದಲು ನೆರಿಯ ಗ್ರಾಮಕ್ಕೆ ಮತ ಹಾಕಲು ಬರಬೇಕಿತ್ತು. ಬಾಂಜಾರುಮಲೆಗೆ ಭೇಟಿ ನೀಡಿದ್ದ ಆಗಿನ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಮತಗಟ್ಟೆ ಒದಗಿಸುವ ಭರವಸೆ ಒದಗಿಸಿದ್ದರು.
ಮತ ಹಾಕುವ ಸೌಭಾಗ್ಯ
ಮೊದಲು ಇವರೆಲ್ಲರೂ 30 ಕಿಲೋ ಮೀಟರ್ ನಷ್ಟು ಕ್ರಮಿಸಿ ಗುಂಡಿಬಾಗಿಲು ಎಂಬಲ್ಲಿ ಮತಹಾಕಬೇಕಿತ್ತು. 2013ರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೊದಲ ಬಾರಿಗೆ ಬಾಂಜಾರಮಲೆಗೆ ತೆರಳಿ ಮತ ಹಾಕಿದ್ದ ಗ್ರಾಮಸ್ಥರು ಇದೇ ಮೊದಲ ಬಾರಿಗೆ ಅಸೆಂಬ್ಲಿ ಚುನಾವಣೆಯೊಂದರಲ್ಲಿ ತಮ್ಮೂರಲ್ಲೇ ಊರಿನ ಸಮುದಾಯ ಭವನದಲ್ಲಿರುವ ಮತಗಟ್ಟೆಯಲ್ಲಿ ಮತಹಾಕುವ ಭಾಗ್ಯ ಪಡೆದಿದ್ದಾರೆ.
ಆದಿವಾಸಿ ಜನಾಂಗದವರೇ ಹೆಚ್ಚು
ಬಾಂಜಾರು ಮಲೆಯಲ್ಲಿ 61 ಪುರುಷ ಹಾಗೂ 58 ಮಹಿಳೆಯರು ಸೇರಿದಂತೆ 119 ಮತದಾರರಿದ್ದಾರೆ. ಬೆಳ್ತಂಗಡಿಯಿಂದ ಸುಮಾರು 35 ಕಿಲೋ ಮೀಟರ್ ದೂರದಲ್ಲಿರುವ ಬಾಂಜಾರು ಮಲೆಯಲ್ಲಿ ಇರುವವರು ಬಹುತೇಕ ಮಂದಿ ಮಲೆಕುಡಿಯ ಆದಿವಾಸಿ ಜನಾಂಗದವರು.
ಪರಿಹಾರದ ವ್ಯವಸ್ಥೆ
ಮತಗಟ್ಟೆಯಲ್ಲಿ ಮತದಾನದ ವ್ಯವಸ್ಥೆ ಮಾಡಲು ಹಿಂದಿನ ದಿನವೇ ಇದೇ ಸುತ್ತು ದಾರಿಯಲ್ಲಿ ಸಿಬ್ಬಂದಿ ಹೋಗುತ್ತಾರೆ. ರಾಷ್ಟ್ರೀಯ ಉದ್ಯಾನವನವಾಗಿದ್ದರಿಂದ ಅಭಿವೃದ್ದಿ ಕೆಲಸ ಮಾಡಲು ಕಾನೂನಿನ ತೊಡಕು ಇದ್ದು, ಹಾಗಾಗಿ ಜನರು ಇಲ್ಲಿಂದ ಪರಿಹಾರ ತೆಗೆದುಕೊಂಡು ಹೊರಹೋಗುತ್ತಾರೆ.
ಮತದಾರರ ಸಂಖ್ಯೆ ಕಡಿಮೆಯಿಲ್ಲ
ಕಳೆದ ವರ್ಷ ಕೂಡ 11 ಕುಟುಂಬಗಳು ಇಲ್ಲಿಂದ ವರ್ಗಾವಣೆಗೊಂಡಿವೆ. ಆದರೂ ಹೊಸ ಮತದಾರರು ಸೇರ್ಪಡೆಯಾಗಿರುವ ಕಾರಣ ಸದ್ಯಕ್ಕೆ ಮತದಾರರ ಸಂಖ್ಯೆ ಕಡಿಮೆಯಾಗಿಲ್ಲ.
ಉಡುಪಿಯಲ್ಲಿ ದುರ್ಗಮ ಮತಗಟ್ಟೆಗಳಿಲ್ಲ
ಉಡುಪಿ ಜಿಲ್ಲೆಯಲ್ಲಿ ಯಾವುದೇ ದುರ್ಗಮ ಮತಗಟ್ಟೆಗಳಿಲ್ಲ. ಕುಂದಾಪುರ, ಬೈಂದೂರು, ಕಾರ್ಕಳ ವಿಧಾನಸಭಾ ಕ್ಷೇತ್ರದ ಕೆಲವು ಪ್ರದೇಶದಲ್ಲಿ ವಾಹನ ಸೌಕರ್ಯ ಕೊರತೆ ಹೊರತು ಪಡಿಸಿದರೆ ದುರ್ಗಮ ಮತಗಟ್ಟೆಗಳಿಲ್ಲ.
ಅಧಿಕಾರಿಗಳಿಗೆ ತಾಪತ್ರಯವಿರುವುದಿಲ್ಲ
ಕೆಲವು ಮತಗಟ್ಟೆಗಳು ಕಚ್ಚಾ ರಸ್ತೆಗಳನ್ನು ಹೊಂದಿದ್ದು ಹೀಗಾಗಿ ಮತಗಟ್ಟೆ ಅಧಿಕಾರಿಗಳಿಗೆ ಮತದಾನ ಕೇಂದ್ರ ತಲುಪಲು ಜೀಪ್ ವಾಹನದ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಎಲ್ಲಾ ಮತದಾನ ಕೇಂದ್ರದ ಬಾಗಿಲಿನವರೆಗೆ ವಾಹನಗಳು ತಲುಪುವುದರಿಂದ ಅಧಿಕಾರಿಗಳು ಮತಯಂತ್ರ ಹೊತ್ತು ಸಾಗುವ ಪರಿಸ್ಥಿತಿ ಇಲ್ಲ.