ನಕ್ಸಲ್ ಚಟುವಟಿಕೆ ಆರಂಭವಾದ ಬಗ್ಗೆ ಹೊಸ ವಿಚಾರ ತಿಳಿಸಿದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ
ಮಂಗಳೂರು, ನವೆಂಬರ್. 04: ದೇಶದಲ್ಲಿ ಹೆಚ್ಚಿನ ಹತ್ಯೆಗಳು ಉಗ್ರವಾದಿಗಳಿಗಿಂತಲೂ ನಕ್ಸಲರಿಂದ ನಡೆದಿದೆ. ಆದರೆ ಅದು ಹೆಚ್ಚು ಸುದ್ದಿಯಾಗುತ್ತಿಲ್ಲ. ಕೆಲ ದಿನಗಳ ಹಿಂದೆ ದೂರದರ್ಶನ ಸಿಬ್ಬಂದಿಯ ಹತ್ಯೆ ನಡೆದರೂ ಮಾಧ್ಯಮಗಳಿಗೆ ಅದೊಂದು ಸುದ್ದಿಯೇ ಅಲ್ಲ ಎಂದು ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಬೇಸರ ವ್ಯಕ್ತಪಡಿಸಿದರು.
ಮಂಗಳೂರಿನಲ್ಲಿ ಆಯೋಜಿಸಿರುವ 'ಮಂಗಳೂರು ಲಿಟ್ ಫೆಸ್ಟ್ ಸಾಹಿತ್ಯ ಉತ್ಸವ'ದಲ್ಲಿ ಆರ್.ಜಗನ್ನಾಥನ್ ನಡೆಸಿದ 'ಅರ್ಬನ್ ನಕ್ಸಲ್ಸ್' ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅರ್ಬನ್ ನಕ್ಸಲ್ ಎನ್ನುವ ಪದ ಬಳಕೆ 2011 ರಿಂದ ಶುರುವಾಯಿತು. ಆದರೆ 'ನಕ್ಸಲ್' ಎನ್ನುವುದು ಸುಮಾರು 50 ವರ್ಷ ಹಳೆಯ ಪದ. ಇದರ ಹಿಂದೆ ಮಾವೋವಾದಿ ಚಿಂತನೆ ಅಡಕವಾಗಿದೆ. ನಕ್ಸಲರು ಕಾಂಗ್ರೆಸ್ ಅಥವಾ ಬಿಜೆಪಿ ವಿರೋಧಿಯಲ್ಲ. ಅವರು ದೇಶ ವಿರೋಧಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಕ್ಸಲರಿಂದ ದೂರದರ್ಶನ ಛಾಯಾಗ್ರಾಹಕನ ಬರ್ಬರ ಹತ್ಯೆ
ನಕ್ಸಲರಿಗೆ ಸುಲಿಗೆಯೇ ಪ್ರಮುಖ ಆದಾಯ. ಸಮಾಜ ಸೇವಕಿಯೆನ್ನುವ ಸೋಗಿನಲ್ಲಿ ಅರ್ಬನ್ ನಕ್ಸಲ್ ಮಹಿಳೆಯೊಬ್ಬರು ನಡೆಸುತ್ತಿರುವ ಎನ್ಜಿಒ ಶೇ.100ರಷ್ಟು ನಕ್ಸಲರಿಗಾಗಿಯೇ ಕೆಲಸ ಮಾಡುತ್ತಿದೆ. ಹೆತ್ತವರು ತಮ್ಮ ಮಕ್ಕಳಿಗೆ ದೇಶದ ವಿರುದ್ಧ ಮಾತನಾಡಲು ಹೇಳಿ ಕೊಡುವುದಿಲ್ಲ. ಆದರೆ ವಿಶ್ವವಿದ್ಯಾಲಯದಲ್ಲಿ ಓದಿದ ಕೆಲವರು ದೇಶದ ವಿರುದ್ಧ ಮಾತನಾಡುತ್ತಾರೆ ಎಂದರೆ ಸಮಸ್ಯೆಯ ಮೂಲ ಎಲ್ಲಿದೆ ಎನ್ನುವುದು ನಮಗೆ ಅರಿವಾಗುತ್ತದೆ.
ಎಡಪಂಥೀಯ ಚಿಂತನೆ ಪ್ರವೃತ್ತಿ ದೇಶಕ್ಕೆ ಗಂಡಾಂತರ: ಸಾಹಿತಿ ಭೈರಪ್ಪ
ಲಾಲ್ ಬಹದ್ದೂರ್ ಶಾಸ್ತ್ರೀ ಅವರು ಮರಣ ಹೊಂದಿದ ಮರುವರ್ಷವೇ ಅಂದರೆ 1967ರಲ್ಲಿ ದೇಶದಲ್ಲಿ ನಕ್ಸಲ್ ಚಟುವಟಿಕೆ ಆರಂಭವಾಯಿತು ಎನ್ನುವ ಹೊಸ ವಿಚಾರ ಕುರಿತು ಅಗ್ನಿಹೋತ್ರಿ ಬೆಳಕು ಚೆಲ್ಲಿದರು. ಶಾಸ್ತ್ರೀಜೀಯವರ ಸಾವಿನ ಕುರಿತಾಗಿ ಬರುತ್ತಿರುವ ತಮ್ಮ ಮುಂದಿನ ಚಿತ್ರದ ಬಗ್ಗೆಯೂ ಅಗ್ನಿಹೋತ್ರಿ ವಿವರಿಸಿದರು.