ವಿಟ್ಲದಲ್ಲಿ ಅಪ್ರಾಪ್ತ ಬಾಲಕಿ ಆತ್ಮಹತ್ಯೆ: ಕುಟುಂಬದಿಂದ ಲವ್ ಜಿಹಾದ್ ಆರೋಪ
ಮಂಗಳೂರು ಮೇ 6: ದಕ್ಷಿಣಕನ್ನಡ ಜಿಲ್ಲೆಯ ವಿಟ್ಲದಲ್ಲಿ ನಡೆದ ಬಾಲಕಿ ಆತ್ಮಹತ್ಯೆ ಪ್ರಕರಣ ಈಗ ಲವ್ ಜಿಹಾದ್ ಬಣ್ಣ ಪಡೆದಿದೆ. ಮೇ 4ರಂದು ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಕಣಿಯೂರಿನಲ್ಲಿ 14 ವರ್ಷದ ಅಪ್ರಾಪ್ತ ಬಾಲಕಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಬಾಲಕಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಅನ್ಯಧರ್ಮದ ಯುವಕ ನೀಡಿದ ಪ್ರಚೋದನೆಯೇ ಕಾರಣ ಎಂದು ಮನೆಯವರು ಆರೋಪಿಸಿದ್ದಾರೆ. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಬಾಲಕಿ ಮನೆಯವರಯ ದೂರು ನೀಡಿದ್ದು ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಪರಿಶಿಷ್ಟ ಜಾತಿಗೆ ಸೇರಿದ ಬಾಲಕಿ ಕುಟುಂಬ ಕನ್ಯಾನ ಗ್ರಾಮದ ಕಣಿಯೂರು ಮಸೀದಿ ಹಿಂಭಾಗದ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಸೇರಿದ ಬಾಡಿಗೆ ಮನೆಯಲ್ಲಿ ವಾಸವಿದ್ದು, ಮೃತ ಬಾಲಕಿ, ಬಾಲಕಿಯ ಅಣ್ಣ ಮತ್ತು ತಂದೆ-ತಾಯಿ ವಾಸವಿದ್ದರು. ಮೇ 4 ಬುಧವಾರ ಬೆಳಗ್ಗೆ ಎಲ್ಲರೂ ಮನೆಯಿಂದ ಹೊರಗಿದ್ದ ಸಂದರ್ಭದಲ್ಲಿ ಬಾಲಕಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಾವಿಗೆ ಕಣಿಯೂರು ತಲೆಕ್ಕಿ ನಿವಾಸಿ ಸಾಹುಲ್ ಹಮೀದ್ ಕಾರಣ ಅಂತಾ ಬಾಲಕಿ ತಾಯಿ ಆರೋಪಿಸಿದ್ದಾರೆ.
ಬಾಲಕಿಗೆ ಏಚ್ಚರಿಕೆ ನೀಡಿದ್ದ ಪೋಷಕರು:
ಸಾಹುಲ್ ಹಮೀದ್ ಮತ್ತು ಮೃತ ಬಾಲಕಿ ಪ್ರೀತಿಸುತ್ತಿದ್ದು, ಇವರಿಬ್ಬರು ಧೀರ್ಘ ಕಾಲ ಫೋನ್ ಸಂಭಾಷಣೆಯಲ್ಲಿದ್ದರು. ಈ ವಿಚಾರ ಬಾಲಕಿಯ ಮನೆಯವರಿಗೆ ತಿಳಿದು ಬಾಲಕಿಗೆ ಬುದ್ಧಿವಾದ ಹೇಳಿದ್ದರು. ಬಾಲಕಿ ಹೆತ್ತವರು ಸಾಹುಲ್ ಹಮೀದ್ ಗೆ ಮಗಳ ವಿಚಾರಕ್ಕೆ ಬರದಂತೆ ಎಚ್ಚರಿಕೆ ನೀಡಿದ್ದರು. ಆದರೂ ಸಾಹುಲ್ ಹಮೀದ್ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಪದೇ ಪದೇ ಬಾಲಕಿ ಮನೆಗೆ ಬಂದು ಪ್ರೀತಿ ಸುವಂತೆ ಒತ್ತಾಯಿಸುತ್ತಿದ್ದ. ತಂದೆ-ತಾಯಿಯನ್ನು ಬಿಟ್ಟು ನನ್ನೊಂದಿಗೆ ಬಾ ಅಂತಾ ಒತ್ತಾಯಿಸುತ್ತಿದ್ದ. ಪದೇ ಪದೇ ಮನೆಗ ಬಂದು ಬರೋದಾದರೆ ಬಾ ಇಲ್ಲವಾದರೆ ಸಾಯಿ ಅಂತಾ ಕಿರುಕುಳ ನೀಡುತ್ತಿದ್ದ ಇದರಿಂದ ಮನನೊಂದು ಬಾಲಕಿ ಸಾವನ್ನಪ್ಪಿದ್ದಾಳೆ ಅಂತಾ ಬಾಲಕಿ ತಾಯಿ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.
ಬಾಲಕಿಗೆ ವಾಮಚಾರ:
ಅಲ್ಲದೇ ಬಾಲಕಿಗೆ ವಾಮಾಚಾರ ಮಾಡಿಸಿದ್ದ. ಬಾಲಕಿಯನ್ನು ವಶೀಕರಣ ಮಾಡಲು ಬಾಲಕಿಯ ಕೂದಲೂ ತೆಗೆದುಕೊಂಡು ಹೋಗಿದ್ದ. ಮಾನಸಿಕವಾಗಿ ಚಿತ್ರ ಹಿಂಸೆ ನೀಡಿದ್ದ ಅಂತಾ ಬಾಲಕಿ ತಾಯಿ ಆರೋಪಿಸಿದ್ದಾರೆ. ಬಾಲಕಿಯ ಮನೆಗೆ ವಿಶ್ವ ಹಿಂದೂ ಪರಿಷತ್ ಸೇರಿದಂತೆ ಹಿಂದೂ ಸಂಘಟನೆಯ ಪ್ರಮುಖರು ಭೇಟಿ ನೀಡಿದ್ದಾರೆ. ಬಾಲಕಿಯ ಹೆತ್ತವರ ಬಳಿ ಮಾಹಿತಿ ಪಡೆದ ಶರಣ್ ಪಂಪ್ವೆಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ವ್ಯವಸ್ಥಿತ ಕೊಲೆಯೂ, ಲವ್ ಜಿಹಾದ್ ಗೆ ಬಾಲಕಿ ಬಲಿಯೋ?
"ಇದು ಲವ್ ಜಿಹಾದ್ ನಿಂದ ಆದ ಸಾವಾಗಿದೆ. ವ್ಯವಸ್ಥಿತ ಕೊಲೆಯೂ ಆಗಿದೆ. ಲವ್ ಜಿಹಾದ್ ಗೆ ಬಲಿಯಾದವರ ಸಾಲಿಗೆ ಬಾಲಕಿಯೂ ಸೇರಿದ್ದಾಳೆ. ಬಾಲಕಿಯ ಸಾವಿಗೆ ಕಾರಣನಾದ ಸಾಹುಲ್ ಹಮೀದ್ ನನ್ನು ಬಂಧನ ಮಾಡಬೇಕು. ಅವನ ಮೇಲೆ ಕೊಲೆ ಕೇಸ್ ದಾಖಲೆ ಮಾಡಬೇಕು. ಬಾಲಕಿಯ ಸಾವಿಗೆ ಸಾಹುಲ್ ಹಮೀದ್ ನ ಮನೆಯವರೂ ನೇರ ಕಾರಣ ಆಗುತ್ತಾರೆ. ಬಾಲಕಿ ಸಾವಿಗೆ ಪ್ರಚೋದನೆ ನೀಡಿದ್ದಾರೆ. ಆರು ತಿಂಗಳಿನಿಂದ ಬಾಲಕಿಗೆ ಕಿರುಕುಳ ನೀಡಿದ್ದಾರೆ,'' ಎಂದು ಬಾಲಕಿಯ ಹೆತ್ತವರ ಬಳಿ ಮಾಹಿತಿ ಪಡೆದ ಶರಣ್ ಪಂಪ್ವೆಲ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ವಾಮಾಚಾರ ಮಾಡಲಾಗಿದೆ ಎಂದು ಆರೋಪ
ಸಾಹುಲ್ ಬಾಲಕಿಗೆ ತನ್ನನ್ನು ಪ್ರೀತಿ ಮಾಡುವಂತೆ ಒತ್ತಾಯ ಮಾಡಿದ್ದಾನೆ. ವಾಮಾಚಾರ ಕೂಡಾ ಮಾಡಿದ್ದಾನೆ. ಕೂದಲೂ ತೆಗೆದುಕೊಂಡು ಹೋಗಿ ಭಸ್ಮ ಪ್ರೋಕ್ಷಣೆ ಮಾಡಿದ್ದಾನೆ. ಇದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ. ಪೊಲೀಸರು ಆರೋಪಿಯನ್ನು ಇನ್ನೂ ಬಂಧಿಸಿಲ್ಲ. ಆರೋಪಿಯನ್ನು ಬಂಧಿಸಿ ಕೊಲೆ ಕೇಸ್ ದಾಖಲಿಸದಿದ್ದಲ್ಲಿ ಹೋರಾಟಕ್ಕಿಳಿಯೋದಾಗಿ ಎಚ್ಚರಿಕೆ ನೀಡಿದ್ದಾರೆ. ಸದ್ಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಸಾಹುಲ್ ಹಮೀದ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಪೊಲೀಸರು ಶೋಧಕಾರ್ಯ ಮಾಡುತ್ತಿದ್ದಾರೆ.
ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ನೆರವಿನಿಂದ ಬೆಂಗಳೂರಿನಲ್ಲಿ ಆತ್ಮಹತ್ಯೆ ತಡೆಗಟ್ಟಲು, ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ SAHAI ಸಹಾಯವಾಣಿ ಇಂತಿದೆ: 080 - 25497777