ಮಂಗಳವಾರ ಕ್ಷೌರದಂಗಡಿ ಮುಚ್ಚದ್ದಕ್ಕೆ ಭುಗಿಲೆದ್ದ ಹಿಂಸಾಚಾರ
ಮಂಗಳೂರು, ಅಕ್ಟೋಬರ್ 29 : ಮಂಗಳವಾರ ಕ್ಷೌರಿಕ ಅಂಗಡಿಯನ್ನು ಮುಚ್ಚುವುದು ವಾಡಿಕೆ. ಆದರೆ, ಮುಸ್ಲಿಂ ಕ್ಷೌರಿಕನೊಬ್ಬ ಮಂಗಳವಾರ ಕ್ಷೌರದಂಗಡಿ ಮುಚ್ಚಲು ನಿರಾಕರಿಸಿದ್ದರಿಂದ, ಮಂಗಳೂರಿನಿಂದ 70 ಕಿ.ಮೀ. ದೂರದಲ್ಲಿರುವ ನೆಲ್ಲಿಯಾಡಿ ಗ್ರಾಮದಲ್ಲಿ ತ್ವೇಷಮಯ ವಾತಾವರಣ ಉಂಟಾಗಿತ್ತು.
ಮಂಗಳವಾರ ಕ್ಷೌರದಂಗಡಿ ಮುಚ್ಚಲು ಮುಸ್ಲಿಂ ಕೋಮಿನ ಕ್ಷೌರಿಕ ನಿರಾಕರಿಸಿದ್ದನ್ನು ಹಿಂದೂ ಕ್ಷೌರಿಕರು ಆಕ್ಷೇಪಿಸಿದ್ದಾರೆ. ಇದರಿಂದಾಗಿ ಎರಡೂ ಕೋಮಿನ ನಡುವೆ ಹಿಂಸಾಚಾರ ಭುಗಿಲೆದ್ದಿದೆ. ಈ ಗಲಭೆಯಲ್ಲಿ ಹಲವರು ಗಾಯಗೊಂಡಿದ್ದು, ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯುಂಟಾಗಿದೆ.
ಗಲಭೆಗೆ ಕಾರಣರಾದ ಎರಡೂ ಕೋಮಿನ ದಂಗೆಕೋರರನ್ನು ಪೊಲೀಸರು ಬಂಧಿಸಿದ್ದಾರೆ. ಸ್ಥಳದಲ್ಲಿ ಅಪರಾಧಿ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 144ರ ಪ್ರಕಾರ ನಿಷೇಧಾಜ್ಞೆ ಜಾರಿಮಾಡಲಾಗಿದ್ದು, ಪರಿಸ್ಥಿತಿ ಸದ್ಯಕ್ಕೆ ಹತೋಟಿಯಲ್ಲಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. [ಎಡವಟ್ಟಾಯ್ತು ತಲೆಕೆಟ್ಟೋಯ್ತು, ಎಡವಟ್ ತಲೆಕಟ್!]
ಇದೆಲ್ಲಕ್ಕೆ ಕಾರಣವಾಗಿದ್ದು, ಸಲ್ಮಾನ್ ಎಂಬ ಕ್ಷೌರಿಕ ಮಂಗಳವಾರ ಕ್ಷೌರದಂಗಡಿ ಮುಚ್ಚಿಲ್ಲ. ಆತ ಒಳ್ಳೆಯವನೆ. ಆದರೆ, ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕೆಲ ನಾಯಕರು ಆತನ ತಲೆಯಲ್ಲೇನೋ ತುಂಬಿದ್ದರಿಂದ ಸಲ್ಮಾನ್ ಹೀಗೆ ಮಾಡಿದ್ದಾನೆ ಎಂದು ಭಜರಂಗ ದಳದ ನಾಯಕ ರವಿ ಬಲ್ಯ ಅವರು ಹೇಳಿದ್ದಾರೆ.
ಸಂಪ್ರದಾಯದ ಪ್ರಕಾರ, ಮಂಗಳವಾರ ಯಾವ ಹಿಂದುವೂ ಕೂದಲನ್ನು ಕತ್ತರಿಸಿಕೊಳ್ಳುವುದಿಲ್ಲ. ಸಲ್ಮಾನ್ ಕೂಡ ಮೊದಲು ಮಂಗಳವಾರ ಕ್ಷೌರದಂಗಡಿ ತೆರೆಯುತ್ತಿರಲಿಲ್ಲ. ಆದರೆ, ಇತ್ತೀಚಿನ ಕೆಲ ವಾರಗಳಿಂದ ಮಂಗಳವಾರವೂ ಬೇಕಂತಲೇ ಕ್ಷೌರದಂಗಡಿ ತೆರೆದು ಹಿಂದೂಗಳನ್ನು ಕೆರಳಿಸಿದ್ದಾನೆ ಎಂಬುದು ರವಿ ಅವರ ಅಭಿಪ್ರಾಯ.
ಕ್ಷೌರಿಕ ಸಂಘದ ಅಧ್ಯಕ್ಷರಾದ ಉದಯ್ ಕುಮಾರ್ ಅವರು ಅಂಗಡಿ ಮುಚ್ಚಬೇಕೆಂದು ಸಲ್ಮಾನ್ ನನ್ನು ವಿನಮ್ರತೆಯಿಂದ ಕೇಳಿಕೊಂಡಿದ್ದಾರೆ. ಅದಕ್ಕೆ ಸಲ್ಮಾನ್ ಮತ್ತಿತರರು ಸೊಪ್ಪು ಹಾಕಿಲ್ಲ. ಪ್ರತಿಯಾಗಿ ಉದಯ್ ಅವರನ್ನೇ ನಿಂದಿಸಿ ಕಳಿಸಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಸ್ಥಳೀಯ ನಾಯಕ ತುಕ್ರಪ್ಪ ಶೆಟ್ಟಿ ಹೇಳಿದ್ದಾರೆ.
ಇದರಿಂದ ರೊಚ್ಚಿಗೆದ್ದ ರವಿ ಬಲ್ಯ ಮತ್ತಿತರು ಸಲ್ಮಾನ್ ಅಂಗಡಿ ಮತ್ತು ನೆಲ್ಯಾಡಿ ಜುಮ್ಮಾ ಮಸೀದಿ ಸಂಕೀರ್ಣದಲ್ಲಿರುವ ಮುಸ್ಲಿಂರಿಗೆ ಸೇರಿದ ಅಂಗಡಿಗಳನ್ನು ಧ್ವಂಸ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪಾಲ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು ಕೂಡ ತಿರುಗಿಬಿದ್ದಿದ್ದಾರೆ.