ಬಾಳಿಗ ಹತ್ಯೆ ಪ್ರಕರಣ: ಶೆಣೈಗೆ ಜಾಮೀನು ಎತ್ತಿಹಿಡಿದ ಸುಪ್ರೀಂ
ಮಂಗಳೂರು, ಜುಲೈ 15: ಆರ್ಟಿಐ ಕಾರ್ಯಕರ್ತ ವಿನಾಯಕ ಪಿ. ಬಾಳಿಗಾ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರೇಶ್ ಶೆಣೈಗೆ ನಿರಾಳ ಸುದ್ದಿಯನ್ನು ಸುಪ್ರೀಂಕೋರ್ಟ್ ನೀಡಿದೆ. ನಮೋ ಬ್ರಿಗೇಡ್ ನ ನರೇಶ್ ಶೆಣೈಗೆ ಜಾಮೀನು ಮಂಜೂರು ಮಾಡಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಪುತ್ರ ಶೋಕಂ ನಿರಂತರಂ, ಬಾಳಿಗ ಅವರ ತಾಯಿ ನಿಧನ
'ನರೇಶ್ ಶೆಣೈ ಪ್ರಭಾವಿ ವ್ಯಕ್ತಿಯಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಎಲ್ಲಾ ಸಾಧ್ಯತೆಗಳಿವೆ. ಹೀಗಾಗಿ ಅವರ ಜಾಮೀನನ್ನು ರದ್ದುಗೊಳಿಸಬೇಕು' ಎಂದು ವಿನಾಯಕ ಬಾಳಿಗಾ ತಂದೆ ರಾಮಚಂದ್ರ ಬಾಳಿಗಾ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ನ್ಯಾ. ಆದರ್ಶ ಕುಮಾರ್ ಗೋಯೆಲ್ ಮತ್ತು ನ್ಯಾ. ಉದಯ್ ಲಲಿತ್ ದ್ವಿಸದಸ್ಯ ಪೀಠ, ಆರೋಪಿಗೆ ಜಾಮೀನು ನೀಡಿದಾಗ ಹೈಕೋರ್ಟ್ ವಿಧಿಸಿರುವ ಷರತ್ತುಗಳನ್ನು ಉಲ್ಲಂಘಿಸಿದರೆ ಜಾಮೀನು ರದ್ದುಪಡಿಸಲು ಹೈಕೋರ್ಟ್ ಮೊರೆ ಹೋಗಬಹುದು. ಆದರೆ, ಜಾಮೀನು ಪಡೆದು 10 ತಿಂಗಳುಗಳಾಗಿದ್ದು, ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಘಟನೆಗಳು ನಡೆದಂತೆ ಕಾಣುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದೆ.
2016ರ ಮಾರ್ಚ್ 21ರಂದು ತಮ್ಮ ನಿವಾಸದ ಸಮೀಪದಲ್ಲಿ ಆರ್ ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗ ಅವರನ್ನು ಹತ್ಯೆ ಮಾಡಲಾಗಿತ್ತು. ಮಗನ ಸಾವಿನ ಕೊರಗಿನಲ್ಲಿ ಅವರ ತಾಯಿ ಇತ್ತೀಚೆಗೆ ಮೃತಪಟ್ಟಿದ್ದಾರೆ.