ಪಡಿತರದ ದಾಖಲಾತಿಗಾಗಿ ಲ್ಯಾಪ್ಟಾಪ್ ಹಿಡಿದು ಗುಡ್ಡ ಏರಿದ ನ್ಯಾಯಬೆಲೆ ಸಿಬ್ಬಂದಿ
ಮಂಗಳೂರು, ಮೇ 1: ಸರ್ಕಾರ ಏನೋ ತನ್ನ ಎಲ್ಲಾ ಕಾರ್ಯವನ್ನು ಇ-ಗವರ್ನಮೆಂಟ್ ಮಾಡಿದೆ. ಡಿಜಿಟಲ್ ಇಂಡಿಯಾ ಹೆಸರಲ್ಲಿ ಹಳ್ಳಿ ಹಳ್ಳಿಗೂ ವೇಗದ ಇಂಟರ್ನೆಟ್ ಸೇವೆ ಕೋಡುವುದಾಗಿಯೂ ಹೇಳಿದೆ. ಇಂಟರ್ನೆಟ್ ವಿಚಾರದಲ್ಲಿ ಕುಗ್ರಾಮಗಳ ಸ್ಥಿತಿ ಮಾತ್ರ ಶೋಚನೀಯವಾಗಿದೆ.
ಪಡಿತರ ದಾಖಲಾತಿಗಾಗಿ, ಇಂಟರ್ನೆಟ್ ಇಲ್ಲದೆ ನ್ಯಾಯಬೆಲೆ ಅಂಗಡಿಯ ಸಿಬ್ಬಂದಿ ಮತ್ತು ಜನರು ಲ್ಯಾಪ್ಟಾಪ್ ಹಿಡಿದು ಗುಡ್ಡ ಏರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬದ ಕೊಂಬಾರು ಗ್ರಾಮದಲ್ಲಿ ನಡೆದಿದೆ.
ಕುಗ್ರಾಮವಾಗಿರುವ ಕೊಂಬಾರಿನ ಕೆಂಜಾಳ ಪಡಿತರ ಅಂಗಡಿಯಲ್ಲಿ ಸರ್ಕಾರದ ಸೂಚನೆ ಪ್ರಕಾರವಾಗಿ ಜನರಿಗೆ ಪಡಿತರವನ್ನು ನೀಡಲಾಗುತ್ತಿದೆ. ಕರ್ಫ್ಯೂ ವೇಳೆಯಲ್ಲಿ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿಯ ವಿತರಣೆಯೂ ಬೆಳಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ನಡೆಯುತ್ತಿದೆ. ಆದರೆ ಇದರ ದಾಖಲಾತಿ ಮಾಡಲು ಗ್ರಾಮದಲ್ಲಿ ಇಂಟರ್ನೆಟ್ ಸೌಲಭ್ಯವೇ ಇಲ್ಲ. ಬಿಎಸ್ಎನ್ಎಲ್ ಮತ್ತು ಏರ್ಟೆಲ್ ನೆಟ್ವರ್ಕ್ ಸಿಗದೆ ಪಡಿತರದ ದಾಖಲಾತಿಗೆ ನ್ಯಾಗಬೆಲೆ ಅಂಗಡಿ ಸಿಬ್ಬಂದಿ ಗುಡ್ಡ ಏರಿ ಕೂರಬೇಕಾಗಿದೆ.
ದಾಖಲಾತಿಯಾಗದೆ ಪಡಿತರ ವಿತರಣೆಗೂ ಅಡ್ಡಿಯಾಗುತ್ತಿದ್ದು, ಪ್ರತಿದಿನ ಪಡಿತರಕ್ಕಾಗಿ ಬಂದ ಜನ ಇಂಟರ್ನೆಟ್ ಸಮಸ್ಯೆಯಿಂದ ಮತ್ತೆ ಖಾಲಿ ಕೈಲಿ ಹೋಗಬೇಕಾಗಿದೆ. ಜನರ ಸಂಕಷ್ಟ ಕಂಡು ನ್ಯಾಯಬೆಲೆ ಅಂಗಡಿ ಸಿಬ್ಬಂದಿ ಪಕ್ಕದಲ್ಲೇ ಇರುವ ಗುಡ್ಡ ಹತ್ತಿದರೂ ಇಂಟರ್ನೆಟ್ ಸಿಗದೆ, ಜನರಿಗೂ ಪಡಿತರವೂ ನೀಡಲಾಗದೆ ಮತ್ತೆ ಗುಡ್ಡ ಇಳಿದಿದ್ದಾರೆ.
21ನೇ ಶತಮಾನದಲ್ಲೂ ಹಳ್ಳಿಗಳ ಈ ಶೋಚನೀಯ ಸ್ಥಿತಿ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರಾಮಸ್ಥರು "ಗ್ರಾಮದಲ್ಲಿ ಇಂಟರ್ನೆಟ್ ಸಮಸ್ಯೆ ಬಹಳ ವರ್ಷಗಳಿಂದ ಇದೆ, ಈ ಬಗ್ಗೆ ಸ್ಥಳೀಯ ಶಾಸಕ-ಸಂಸದರ ಜೊತೆ ಹಲವು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಕೆಲವೊಮ್ಮೆ ಮರ-ಗುಡ್ಡ ಹತ್ತಿದರೆ ಇಂಟರ್ನೆಟ್ ಸಿಗುತ್ತದೆ. ಮಳೆ ಬಂದರೆ ಎಷ್ಟೇ ಎತ್ತರದ ಪ್ರದೇಶಕ್ಕೆ ಹೋದರೂ ಇಂಟರ್ನೆಟ್ ಸಿಗೋದಿಲ್ಲ. ಇಂಟರ್ನೆಟ್ ಇಲ್ಲದೆ ಪಡಿತರವೂ ಸಿಗುತ್ತಿಲ್ಲ' ಎಂದು ಅಳಲು ವ್ಯಕ್ತಪಡಿಸಿದ್ದಾರೆ.