ಟವರ್ ಗೆ ಬಳ್ಳಿ ಸುತ್ತಿ ಬಿಎಸ್ ಎನ್ ಎಲ್ ವಿರುದ್ಧ ಗ್ರಾಮಸ್ಥರ ಪ್ರತಿಭಟನೆ
ಮಂಗಳೂರು, ಜೂನ್ 18: ದಕ್ಷಿಣ ಕನ್ನಡ ಜಿಲ್ಲೆಯ ಕಾಡಂಚಿನ ಸುಳ್ಯ ಪರಿಸರದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದೆ. ಕಾಡಿನಿಂದ ಜನವಸತಿ ಪ್ರದೇಶಗಳಿಗೆ ನುಗ್ಗುತ್ತಿರುವ ಆನೆಗಳು ತೋಟಗಳಿಗೆ ನುಗ್ಗಿ ಕೃಷಿ ನಾಶಪಡಿಸುತ್ತಿವೆ. ಈ ನಡುವೆ ಇಲ್ಲಿಯ ಗ್ರಾಮಸ್ಥರಿಗೆ ಏಕೈಕ ಸಂಪರ್ಕ ವ್ಯವಸ್ಥೆಯಾಗಿದ್ದ ಬಿ ಎಸ್ ಎನ್ ಎಲ್ ಕೂಡ ತನ್ನ ಸೇವೆಯನ್ನು ಸ್ಥಗಿತಗೊಳಿಸಿದೆ.
ಸುಳ್ಯ ತಾಲ್ಲೂಕಿನ ಹರಿಹರ ಪಳ್ಳತ್ತಡ್ಕ ಹಾಗೂ ಸುತ್ತಮುತ್ತಲಿನ ಗ್ರಾಮದ ಜನರ ಸಂಪರ್ಕ ಸಾಧನವಾದ ಬಿಎಸ್ಎನ್ಎಲ್ ಮೊಬೈಲ್ ಸೇವೆ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿರುವುದು ಗ್ರಾಮಸ್ಥರಿಗೆ ದಿಕ್ಕೇ ತೋಚದಂತಾಗಿದೆ. ವಿದ್ಯುತ್ ಇಲ್ಲದ ಸಂದರ್ಭದಲ್ಲಿ ಮಾತ್ರ ಬಂದ್ ಆಗುತ್ತಿದ್ದ ಬಿ ಎಸ್ ಎನ್ ಎಲ್ ಮೊಬೈಲ್ ಟವರ್ ಇದೀಗ ವಿದ್ಯುತ್ ಇರುವ ಸಂದರ್ಭದಲ್ಲೂ ಕೈ ಕೊಡುತ್ತಿದೆ. ಈ ಕುರಿತು ಗ್ರಾಮಸ್ಥರು ಬಿಎಸ್ಎನ್ಎಲ್ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ದೊರೆಯಲಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ, ಕೃಷಿ ನಾಶ
ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಮೊಬೈಲ್ ಟವರ್ ಗೆ ತೊಂಡೆ, ಬಸಳೆ ಮೊದಲಾದ ತರಕಾರಿ ಬಳ್ಳಿಗಳನ್ನು ಸುತ್ತಿ ಪ್ರತಿಭಟನೆ ನಡೆಸಿದರು.
ಅತ್ಯಂತ ಕುಗ್ರಾಮವಾಗಿರುವ ಈ ಪ್ರದೇಶದಲ್ಲಿ ಸರ್ಕಾರಿ ಸಾಮ್ಯದ ಬಿಎಸ್ಎನ್ಎಲ್ ಸೇವೆಯನ್ನು ಹೊರತುಪಡಿಸಿ ಬೇರೆ ಯಾವ ಸೇವೆಗಳೂ ಇಲ್ಲದ ಕಾರಣ ಅನಿವಾರ್ಯವಾಗಿ ಈ ಭಾಗದ ಜನ ಬಿಎಸ್ಎನ್ಎಲ್ ಅನ್ನೇ ಅವಲಂಬಿಸಬೇಕಿದೆ. ಈ ಭಾಗದಲ್ಲಿ ಕಾಡಾನೆಗಳ ಹಾವಳಿಯೂ ನಿರಂತರವಾಗಿದ್ದು, ತುರ್ತು ಸಂದರ್ಭದಲ್ಲಿ ಸಂಪರ್ಕ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.