ಮಂಗಳೂರು: 15 ದಿನವಾದರೂ ಇಳಿಯದ ನೆರೆ ನೀರು, ಮನೆಯಿಂದ ಹೊರಬರಬೇಕಾದರೆ ಬೇಕು ಬೋಟ್!
ಮಂಗಳೂರು, ಜುಲೈ 11: ಈ ಬಾರಿಯ ಮಹಾ ಮಳೆ ನಕ್ಷತ್ರಗಳಾದ ಆರಿದ್ರಾ, ಪುನರ್ವಸು ಮಳೆ ಜನರ ಬದುಕನ್ನು ತೊಯ್ದು ತೊಪ್ಪೆ ಮಾಡಿದೆ. ಎಲ್ಲೆಡೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿ ಬದುಕು ಹೈರಾಣಾಗಿದೆ. ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ಕೂಡ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರ, ಖಾಸಗಿ, ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಇನ್ನು ಕಳೆದ 15 ದಿನಗಳಿಂದ ಮಂಗಳೂರು ತಾಲೂಕಿನ ಕಂದಾವರ ಗ್ರಾಮ ಪಂಚಾಯತ್ ಹಾಗೂ ಮೂಡಿಕೆರೆ ಪ್ರದೇಶದ ಜನತೆ ದಿನ ಮಳೆಯಿಂದ ಭಾರೀ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. 2 ವಾರಗಳಿಂದ ಸುರಿದ ಮಳೆಯಿಂದ ಏರಿದ ಪ್ರವಾಹ ಇಳಿಮುಖ ಕಂಡಿಲ್ಲ.
ಪ್ರವಾಹ ಪೀಡಿತ ಪ್ರದೇಶಗಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಜು.12ರಿಂದ ಭೇಟಿ
ಇಲ್ಲಿನ 35 ಕುಟುಂಬಗಳ ಮನೆಗಳು, ತೋಟಗಳು ಸಂಪೂರ್ಣ ಜಲಾವೃತಗೊಂಡಿದೆ. ಈಗಾಗಲೇ ಹಲವು ಕುಟುಂಬಗಳು ಸೂರು ಕಳೆದುಕೊಂಡಿವೆ. ನೀರಿನ ಮಟ್ಟದಲ್ಲಿ ಇಳಿಕೆ ಕಾಣದ ಕಾರಣ ಇನ್ನೂ ಹಲವಾರು ಮನೆಗಳು ಕುಸಿಯುವ ಭೀತಿಯಲ್ಲಿದೆ. ಅಲ್ಲದೆ ಎಕರೆಗಟ್ಟಲೆ ಕೃಷಿಭೂಮಿ ಹಾನಿಗೊಳಗಾಗಿವೆ. ಇದಕ್ಕೆಲ್ಲಾ ಮರವೂರಿನ ಅವೈಜ್ಞಾನಿಕ ಕಿಂಡಿ ಅಣೆಕಟ್ಟೆ ಕಾರಣ ಎಂದು ಸಂತ್ರಸ್ತ ಜನತೆ ಅವಲತ್ತು ಕೊಳ್ಳುತ್ತಿದ್ದಾರೆ.
ಅದ್ಯಪಾಡಿ ಹಾಗೂ ಮೂಡುಕೆರೆ ಗ್ರಾಮದ ಜನತೆಗೆ ನೆರೆ ಹೊಸತೇನಲ್ಲ. ಆದರೆ ಮರವೂರಿನಲ್ಲಿ ಕಿಂಡಿ ಅಣೆಕಟ್ಟು ಕಟ್ಟಿದ ಬಳಿಕ ಏರಿದ ನೆರೆ 10-15 ದಿನಗಳಾದರೂ ಇಳಿಮುಖವಾಗುವುದಿಲ್ಲ. ಪರಿಣಾಮ ತುರ್ತು ವೇಳೆ ಅಗತ್ಯ ವಸ್ತುಗಳನ್ನು ತರಲೂ ತೊಂದರೆಯಾಗುತ್ತದೆ. ದೋಣಿಯನ್ನೇ ಅವಲಂಬಿಸುವ ಪರಿಸ್ಥಿತಿ ಉಂಟಾಗುತ್ತದೆ.
ಕಾಲುವೆ ನಿರ್ಮಾಣಕ್ಕೆ ಒತ್ತಾಯ
ಇಲ್ಲಿನ ಜನತೆ ಕೃಷಿಯನ್ನೇ ನಂಬಿ ಬದುಕುತ್ತಿದ್ದು, ಈ ರೀತಿಯಲ್ಲಿ ನೀರು ನಿಂತು ಸಂಪೂರ್ಣ ಬೆಳೆ ಹಾನಿಗೊಳಗಾಗುತ್ತಿದೆ. ಆದ್ದರಿಂದ ಈ ಸಮಸ್ಯೆಯಿಂದ ಬಿಡುಗಡೆಯಾಗಲು ಮಳೆಗಾಲದ ಸಂದರ್ಭ ಕಿಂಡಿ ಅಣೆಕಟ್ಟಿನಲ್ಲಿ ನಿಯಮಿತವಾಗಿ ನೀರು ಹರಿದು ಹೋಗಲು 20 ಅಡಿ ಅಗಲಕ್ಕೆ ಕಾಲುವೆ ನಿರ್ಮಾಣವಾಗಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸರಕಾರ, ಸ್ಥಳೀಯ ಜನಪ್ರತಿನಿಧಿಗಳು ಗಮನಹರಿಸಬೇಕಾಗಿದೆ.
ಮಂಗಳೂರು; ಗೌರಿ ಹೊಳೆಗೆ ಬಿದ್ದ ಕಾರು, ಯುವಕರು ನಾಪತ್ತೆ
ಕಿಂಡಿ ಅಣೆಕಟ್ಟಿನಿಂದ ನೆಲೆಳೆದುಕೊಂಡ ಹಲವು ಕುಟುಂಬ
ಕಂದಾವರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅದ್ಯಪಾಡಿ ಬೈಲು ಹಾಗೂ ಮೂಡುಕೆರೆ ಪ್ರದೇಶ ಹತ್ತು ದಿನಗಳಿಂದ ಜಲಾವೃತ ಗೊಂಡು ಇಲ್ಲಿನ ನಿವಾಸಿಗಳ ಜನಜೀವನ ಅಸ್ತವ್ಯಸ್ತವಾಗಿದೆ. ಮರವೂರಿನ ಅವೈಜ್ಞಾನಿಕ ಕಿಂಡಿ ಆಣೆಕಟ್ಟೆಯೇ ಇದಕ್ಕೆ ಕಾರಣ ಎಂಬುದು ಗ್ರಾಮಸ್ಥರ ಆರೋಪವಾಗಿದೆ. ಈಗಾಗಲೇ ಹಲವು ಕುಟುಂಬಗಳು ನೆಲೆ ಕಳೆದು ಕೊಂಡಿದ್ದು, ಇನ್ನೂ ನೀರಿನಮಟ್ಟ ಹೆಚ್ಚಾದರೆ ಅಳಿದುಳಿದ ಕುಟುಂಬಗಳೂ ಮನೆ ಕಳೆದುಕೊಳ್ಳುವ ಭೀತಿಯಲ್ಲಿವೆ.
ತೋಟಗಳು ಜಲಾವೃತ, ರೈತರಿಗೆ ಭಾರೀ ನಷ್ಟ
"ಈ ಪ್ರದೇಶದಲ್ಲಿ ಸುಮಾರು 35 ಕುಟುಂಬಗಳಿದ್ದು, ಎಕರೆಗಟ್ಟಲೆ ಕೃಷಿ ಭೂಮಿ ಇದೆ. ಆದರೆ ನೆರೆಯಿಂದಾಗಿ ಕುಟುಂಬಗಳಿಗೆ ಭಾರೀ ನಷ್ಟವಾಗುತ್ತಿದೆ. ಸುರೇಶ್ ಮಸ್ಕರೇನಸ್, ವಾಲ್ಟರ್, ಎಲಿಯಾಸ್ ಡಿಸೋಜ, ಲೋಕಯ್ಯ ಮೂಲ್ಯ, ರೋಶನ್ ಡಿಸೋಜ, ಮಸ್ಕರೇನಸ್, ಲಾರಾ ರಾಯ್, ಜೊಸೇಫ್ ಡೆನಿಸ್, ಮಸ್ಕರೇನಸ್, ಎಲಿಯಾಸ್, ಕ್ಲಮೆಂಟ್, ಮೌರಿಸ್, ಫ್ರಾನ್ಸಿಸ್ ಮೊದಲಾದವರ ಮನೆ ತೋಟಗಳು ಜಲಾವೃತವಾಗಿವೆ. ಜೋರು ಮಳೆ ಬಂದರೆ ಹತ್ತು- ಹದಿನೈದು ದಿನ ಕಳೆದರೂ ನೀರು ಇಳಿಯುವುದಿಲ್ಲ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಅಗತ್ಯ ವಸ್ತುಗಳನ್ನೂ ತರಲು ಕಿ. ಮೀ. ಗಟ್ಟಲೆದೋಣಿಯಲ್ಲೇ ಸಾಗಬೇಕಾಗಿದೆ" ಎಂದು ಗ್ರಾಮದ ಹಿರಿಯರಾದ ಎಲಿಯಾಸ್ ಹೇಳಿದ್ದಾರೆ.
ಪರಿಹಾರದ ಭರವಸೆ ನೀಡಿದ ಸಿಎಂ ಬೊಮ್ಮಾಯಿ
ಸೋಮವಾರ ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಬಸವರಾಜ ಬೊಮ್ಮಾಯಿ, "ಮಲೆನಾಡು, ಕೊಡಗು, ಕರಾವಳಿ ಹಾಗೂ ಉತ್ತರ ಕನ್ನಡ ಭಾಗದಲ್ಲಿಕಳೆದ 10 ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ. ಈಗಾಗಲೇ ಸಂಬಂಧಿಸಿದ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಹಾಗೂ ನೆರವಾಗಿಯೂ ಮಾತನಾಡಿದ್ದು, ಮಳೆ ತಗ್ಗಿರುವುದರಿಂದ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ, ಸ್ಥಿತಿಗತಿಯನ್ನು ಅವಲಂಬಿಸಿ ಪರಿಹಾರಕ್ಕೆ ಸೂಚನೆ ನೀಡುತ್ತೇನೆ" ಎಂದು ತಿಳಿಸಿದ್ದಾರೆ.