ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವಿಕ್ರಂ ಹುಲಿ ಸಾವು
ಮಂಗಳೂರು, ಅಕ್ಟೋಬರ್ 26: ಇಲ್ಲಿನ ಪಿಲಿಕುಳ ಜೈವಿಕ ಉದ್ಯಾನ ವನದ ಹಳೆ ತಲೆಮಾರಿನ ಹುಲಿ ವಿಕ್ರಂ ಇಂದು ವಯೋ ಸಹಜ ಆರೋಗ್ಯ ಸಮಸ್ಯೆಯಿಂದ ಸಾವನ್ನಪ್ಪಿದೆ.
ವಿಕ್ರಂ ಹುಲಿ ನಾಲ್ಕು ವರ್ಷವಿದ್ದಾಗ, 2003ರಲ್ಲಿ ಶಿವಮೊಗ್ಗದ ತಾವರೆಕೊಪ್ಪ ಸಫಾರಿಯಿಂದ ಪಿಲಿಕುಳ ಜೈವಿಕ ಉದ್ಯಾನವನಕ್ಕೆ ಕರೆತರಲಾಗಿತ್ತು. ವಿಕ್ರಂ ಹುಲಿಗೆ ಕದಂಬ, ಕೃಷ್ಣ, ವಿನಯ, ಅಕ್ಷಯ, ಮಂಜು, ಅಮರ್, ಅಕ್ಬರ್, ಅಂತೋನಿ, ಒಲಿವರ್ ಎಂಬ ಹತ್ತು ಮರಿಗಳಿದ್ದು, ಅವು ದೇಶದ ವಿವಿಧ ಮೃಗಾಲಯಗಳಲ್ಲಿವೆ.
ಪಿಲಿಕುಳ ನಿಸರ್ಗಧಾಮದಲ್ಲಿ ನಾಯಿಗಳ ದಾಳಿಗೆ ಹತ್ತು ಬಾರ್ಕಿಂಗ್ ಡೀರ್ ಸಾವು
21 ವರ್ಷದ ವಿಕ್ರಂ ಆರೋಗ್ಯದಲ್ಲಿ ಈಚೆಗೆ ಸಮಸ್ಯೆ ಕಾಣಿಸಿಕೊಂಡಿತ್ತು. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹುಲಿಗೆ ಪಶು ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ಹುಲಿಗೆ ದೃಷ್ಟಿಹೀನತೆ, ಸಂಧಿವಾತ, ಮೂತ್ರಪಿಂಡಗಳಿಗೆ ಸಂಬಂಧಿಸಿದ ಕಾಯಿಲೆಗಳು ಕಾಣಿಸಿಕೊಂಡಿದ್ದವು. ಈ ಸಮಸ್ಯೆಗಳಿಗೆ ಹುಲಿಗೆ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆದರೆ ಒಂದು ವಾರದಿಂದ ಆಹಾರ ಸೇವನೆಗೂ ಹಿಂದೇಟು ಹಾಕುತ್ತಿತ್ತು. ಇಂದು ಆರೋಗ್ಯ ತೀರಾ ಹದಗೆಟ್ಟು ವಿಕ್ರಂ ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.