'ಕೇಂದ್ರದಲ್ಲಿ ಕಾಂಗ್ರೆಸ್ ಬಂದರೆ ವಿಜಯಾ ಬ್ಯಾಂಕ್ ವಿಲೀನ ರದ್ದು'
ಮಂಗಳೂರು, ಮಾರ್ಚ್ 03: ವಿಜಯಾ ಬ್ಯಾಂಕ್ ವಿಲೀನ ವಿವಾದ ಮುಂಬರುವ ಲೋಕಸಭಾ ಚುನಾವಣೆಯ ಪ್ರಮುಖ ವಿಷಯವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಈ ವಿಲೀನ ವಿವಾದ ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.
ಈ ನಡುವೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ವಿಜಯ ಬ್ಯಾಂಕ್ ವಿಲೀನ ಮಾಡಲು ಬಿಡುವುದಿಲ್ಲ ಎಂದು ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ತಿಳಿಸಿದ್ದಾರೆ .
ವಿಜಯಾ ಬ್ಯಾಂಕ್: ಒಗ್ಗಟ್ಟಿನಲ್ಲಿ ಕೊರತೆಯಿದೆ ಎಂದು ಜಗಜ್ಜಾಹೀರು ಮಾಡಿದ ಜನಪ್ರತಿನಿಧಿಗಳು
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ದಕ್ಷಿಣ ಕನ್ನಡದ ಪ್ರತಿಷ್ಟೆಯ ಪ್ರತೀಕವಾಗಿರುವ ವಿಜಯ ಬ್ಯಾಂಕ್ ವಿಲೀನ ಮಾಡಿರುವುದು ಖಂಡನೀಯ. ವಿಜಯ ಬ್ಯಾಂಕ್ ವಿಲೀನ ಮಾಡದಂತೆ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಈ ವಿಚಾರ ಹಣಕಾಸು ಸಮಿತಿಗೆ ಬರುವುದಿಲ್ಲವಾದರೂ ಬಿಜೆಪಿಯು ಬ್ಯಾಂಕ್ ವಿಲೀನ ಮಾಡುತ್ತಿದೆ ಎಂದು ಹೇಳಿದ ಮೊಯ್ಲಿ ಅವರು, ಮುಂದೆ ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು, ವಿಜಯ ಬ್ಯಾಂಕ್ ವಿಲೀನ ಮಾಡಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.