"ನನ್ನ ಜೀವಕ್ಕಾಗಿ ಅವರ ಪ್ರಾಣವನ್ನೇ ಪಣಕ್ಕಿಟ್ಟರು..." ಕಣ್ಣೀರಿಟ್ಟ ಕೊರೊನಾ ಗುಣಮುಖ ವ್ಯಕ್ತಿ
ಮಂಗಳೂರು, ಏಪ್ರಿಲ್ 20: "ಕೊರೊನಾ ಇರುವುದು ಗೊತ್ತಾಗಿ ಆಸ್ಪತ್ರೆಗೆ ಸೇರಿದಾಗಿನಿಂದ ನನ್ನನ್ನು ಉಳಿಸಬೇಕೆಂಬ ಒಂದೇ ಕಾರಣಕ್ಕೆ ನರ್ಸ್ ಗಳು, ವೈದ್ಯರು ಎಷ್ಟೆಲ್ಲಾ ಪ್ರಯತ್ನ ಪಟ್ಟರು... ಪೊಲೀಸರು ಎಷ್ಟು ಪ್ರೀತಿಯಿಂದ ನನ್ನನ್ನು ನಡೆಸಿಕೊಂಡರು... ನನ್ನನ್ನು ಉಳಿಸಬೇಕೆಂದು ಅವರು ಪಡುತ್ತಿದ್ದ ಕಷ್ಟವನ್ನು ನೆನೆಸಿಕೊಂಡರೆ ಗೊತ್ತೇ ಆಗದೇ ಕಣ್ಣು ತುಂಬಿಕೊಳ್ಳುತ್ತದೆ..."
ಹೀಗೆ ಭಾವುಕವಾಗಿ ಮಾತನಾಡುತ್ತಾ ಗದ್ಗದಿತವಾಗಿದ್ದು ತೊಕ್ಕಟ್ಟು ಮೂಲದ ಕೊರೊನಾ ಗುಣಮುಖ ವ್ಯಕ್ತಿ. ಬೆಂಗಳೂರಿನ ಪಾದರಾಯನಪುರದಲ್ಲಿ ನಿನ್ನೆ ರಾತ್ರಿ ನಡೆದ ಗಲಭೆಯ ಒಂದು ಘಟನೆ ಇದೀಗ ರಾಜ್ಯದಲ್ಲಿ ಚರ್ಚೆಗೆ ಈಡಾಗಿದೆ. ಈ ನಡುವೆ ಕೊರೊನಾದಿಂದ ಗುಣಮುಖನಾದ ಈ ವ್ಯಕ್ತಿ ಆಡಿರುವ ಈ ಮಾತು ಎಲ್ಲರ ಗಮನ ಸೆಳೆದಿದೆ. ಮೂರು ದಿನಗಳ ಹಿಂದೆ ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ವಾಪಸ್ಸಾಗಿರುವ ಈ ವ್ಯಕ್ತಿಯು ಕೊರೊನಾದಿಂದ ಆಸ್ಪತ್ರೆ ಸೇರಿದಾಗಿನಿಂದ ಇಲ್ಲಿಯವರೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ರೀತಿ, ತಮ್ಮನ್ನು ನೋಡಿಕೊಂಡ ಎಲ್ಲರಿಗೂ ಧನ್ಯವಾದ ಹೇಳಿರುವ ಅವರ ಭಾವುಕ ನುಡಿಗಳು ಇದೀಗ ವೈರಲ್ ಆಗಿದೆ. ಆ ಮಾತುಗಳೇನು... ಇಲ್ಲಿ ನೋಡೋಣ...
ಕೊರೊನಾದಿಂದ ಸಂಪೂರ್ಣ ಗುಣಮುಖರಾಗಿ ಮನೆಗೆ ವಾಪಸ್ಸಾಗಿರುವ ಈ ವ್ಯಕ್ತಿಯು ಕೊರೊನಾದಿಂದ ಆಸ್ಪತ್ರೆ ಸೇರಿದಾಗಿನಿಂದ ಇಲ್ಲಿಯವರೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ರೀತಿ, ತಮ್ಮನ್ನು ನೋಡಿಕೊಂಡ ಎಲ್ಲರಿಗೂ ಧನ್ಯವಾದ ಹೇಳಿರುವ ಅವರ ಭಾವುಕ ನುಡಿಗಳು ಇದೀಗ ವೈರಲ್ ಆಗಿದೆ. ಆ ಮಾತುಗಳೇನು... ಇಲ್ಲಿ ನೋಡೋಣ...#coronavirusinindia #COVID pic.twitter.com/amtfUIKSIg
— oneindiakannada (@OneindiaKannada) April 20, 2020
ಡಿಸ್ಜಾರ್ಜ್ ನಂತರ ಬಹಿರಂಗ ಪತ್ರ ಬರೆದ ಜುಬಿಲಿಯಂಟ್ ಕಂಪನಿ ಮೊದಲ ಸೋಂಕಿತ
"ನನ್ನ ಜೀವಕ್ಕಾಗಿ ಮಿಡಿದವರು ಇವರು"
"ಪೊಲೀಸ್ ಇಲಾಖೆಯವರು ನನ್ನನ್ನು ಪ್ರೀತಿಯಿಂದ ನೋಡಿಕೊಂಡರು. ಆಸ್ಪತ್ರೆಯಲ್ಲಿ ಅತ್ಯುತ್ತಮ ಚಿಕಿತ್ಸೆ ನೀಡಿ ಯಾವುದೇ ಕೊರತೆಯಾಗದಂತೆ ನೋಡಿಕೊಂಡರು. ನನ್ನ ಜೀವಕ್ಕಾಗಿ ವೈದ್ಯರು, ಅಲ್ಲಿನ ನರ್ಸ್ ಗಳು ಎಷ್ಟೊಂದು ಕಷ್ಟಪಟ್ಟರು, ಅವರ ಜೀವವನ್ನೇ ಪಣಕ್ಕಿಟ್ಟರು..." ಎಂದು ಗದ್ಗದಿತರಾದರು ತೊಕ್ಕೊಟ್ಟು ಮೂಲದ ಈ ಗುಣಮುಖ ವ್ಯಕ್ತಿ.
ಚಪ್ಪಾಳೆ ಹೊಡೆದು ಸ್ವಾಗತಿಸಿದ ಜನ
ಕೊರೊನಾದಿಂದಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮೂರು ದಿನಗಳ ಹಿಂದೆ ಈ ವ್ಯಕ್ತಿ ಡಿಸ್ಚಾರ್ಜ್ ಆಗಿ ಬಂದರು. ಈ ವ್ಯಕ್ತಿ ಮನೆಗೆ ಹಿಂತಿರುಗಿದ ವೇಳೆ, ಸ್ಥಳೀಯರೆಲ್ಲರೂ ಇದ್ದಲ್ಲೇ ನಿಂತು ಚಪ್ಪಾಳೆ ಹೊಡೆದು ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಆಗ ಈ ವ್ಯಕ್ತಿ ಭಾವುಕವಾಗಿ ತಮ್ಮ ಅನುಭವಗಳನ್ನು ಹಂಚಿಕೊಂಡರು.
"ಕಣ್ಣು ತುಂಬಿ ಬಂತು ಅವರ ಕಷ್ಟ ನೋಡಿ"
"ಆಸ್ಪತ್ರೆಯಲ್ಲಿ ನನಗೆ ಒಳ್ಳೆಯ ಚಿಕಿತ್ಸೆ ನೀಡಿದರು. ಸಿಬ್ಬಂದಿ ನನಗೆ ಯಾವುದೇ ಕುಂದುಕೊರತೆ ಆಗದಂತೆ ನೋಡಿಕೊಂಡರು. ನಮಗೆ ಏನೋ ಒಂದು ತೊಂದರೆ ಎದುರಾದರೆ ಸಾಕು, ತಕ್ಷಣವೇ ಅದಕ್ಕೆ ಸ್ಪಂದಿಸಿ ಸಮಸ್ಯೆ ನಿವಾರಿಸುತ್ತಿದ್ದರು. ನೀರಿಲ್ಲ ಎಂದರೆ ಬೆಳಗ್ಗಿನ ಜಾವ ನಾಲ್ಕು ಗಂಟೆಗೇ ಬಂದು ವ್ಯವಸ್ಥೆ ಮಾಡಿಸಿದರು. ಆಗ ನನಗೆ ಅನಿಸಿದ್ದು ಒಂದೇ... ನನ್ನ ಜೀವ ಉಳಿಸುವುದಕ್ಕಾಗಿ ಇವರು ಎಷ್ಟೊಂದು ಕಷ್ಟಪಡುತ್ತಿದ್ದಾರೆ ಎಂದು. ನಾನು ಕೊರೊನಾದಿಂದ ಸಾವನ್ನಪ್ಪಬಾರದು ಎಂದು ಎಲ್ಲರೂ ಎಷ್ಟು ಶ್ರಮಿಸುತ್ತಿದ್ದರು... ಇದನ್ನು ನೋಡುತ್ತಿದ್ದರೆ ಕಣ್ಣು ತುಂಬಿಬಂದಿತ್ತು" ಎಂದು ಭಾವುಕರಾದರು ಅವರು.
"ನರಕದಿಂದ ನಮ್ಮನ್ನು ಹೊರತರಲು ಕಷ್ಟಪಡುತ್ತಿದ್ದಾರೆ"
"ನಮಗೆ ಕೇವಲ ಮಾಸ್ಕ್ ಹಾಕಿಕೊಳ್ಳುವುದೇ ಎಷ್ಟು ಕಷ್ಟ ಅನ್ನಿಸುತ್ತದೆ. ಆದರೆ ಅವರೆಲ್ಲರೂ ಪಿಪಿಟಿ ಕಿಟ್ ಧರಿಸುತ್ತಿದ್ದರು. ತುಂಬಾ ಬೆವರುತ್ತಿದ್ದರು. ಆದರೂ ನಮ್ಮ ಪ್ರಾಣ ಉಳಿಸಬೇಕೆಂಬ ಒಂದೇ ಕಾರಣಕ್ಕಾಗಿ ಎಲ್ಲವನ್ನೂ ಸಹಿಸಿಕೊಳ್ಳುತ್ತಿದ್ದಾರೆ. ಇವೆಲ್ಲಾ ಯಾರಿಗಾಗಿ ಮಾಡುತ್ತಿದ್ದಾರೆ? ನಮಗಾಗಿ ಅಲ್ಲವೇ, ನಮ್ಮ ಪ್ರಾಣ ಕಾಪಾಡಲು ಅವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದಾರಲ್ಲವೇ? ನರಕದಿಂದ ನಮ್ಮನ್ನು ಹೊರತರಲು ಇಷ್ಟು ಕಷ್ಟಪಡುತ್ತಿರುವವರಿಗೆ ನಾವು ಸಹಾಯ ಮಾಡೋಣ ಎಂದು ಹೇಳಿದ್ದಾರೆ. ಅವರು ಮಾತನಾಡಿರುವ ಈ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ.
ಪೋಸ್ಟ್ ಹಂಚಿಕೊಂಡ ಪೊಲೀಸ್ ಆಯುಕ್ತ
ತೊಕ್ಕಟ್ಟುವಿನ ಈ ವ್ಯಕ್ತಿ ಮಾತನಾಡಿರುವ ಈ ವಿಡಿಯೋವನ್ನು ಮಂಗಳೂರು ನಗರ ಪೊಲೀಸ್ ಆಯುಕ್ತ ಡಾ.ಪಿ.ಎಸ್ ಹರ್ಷ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಕೊರೊನಾದಿಂದ ಹೊರತರಲು ವೈದ್ಯರು, ಪೊಲೀಸರು, ನರ್ಸ್ ಗಳು, ಇನ್ನಿತರ ಸಿಬ್ಬಂದಿ ಪಟ್ಟಿರುವ ಶ್ರಮವನ್ನು ಅವರ ಬಾಯಿಯಲ್ಲೇ ಕೇಳಿ, ಅವರ ಅನುಭವಗಳನ್ನು ಕೇಳಿ ತಿಳಿಯಿರಿ, ಸರ್ಕಾರದೊಂದಿಗೆ ಕೈ ಜೋಡಿಸಿ ಎಂದು ಬರೆದುಕೊಂಡಿದ್ದಾರೆ.