ಪ್ರವೀಣ್ ತೊಗಾಡಿಯಾ ಮಂಗಳೂರು ಪ್ರವೇಶಿಸುವಂತಿಲ್ಲ
ಮಂಗಳೂರು, ಜನವರಿ 19 : ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ಅವರು ಮಂಗಳೂರು ನಗರ ಪ್ರವೇಶಿಸದಂತೆ ಪೊಲೀಸರು ನಿಷೇಧ ಹೇರಿದ್ದಾರೆ. ಜನವರಿ 18 ರಿಂದ 24ತನಕ ತೊಗಾಡಿಯಾ ಅವರು ಮಂಗಳೂರಿಗೆ ಆಗಮಿಸುವಂತಿಲ್ಲ.
ಮಂಗಳೂರು ನಗರ ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರು ಈ ಕುರಿತು ಸೋಮವಾರ ಸಂಜೆ ಆದೇಶ ಹೊರಡಿಸಿದ್ದಾರೆ. ಜನವರಿ 20ರಂದು ಪ್ರವೀಣ್ ತೊಗಾಡಿಯಾ ಅವರು ಮಂಗಳೂರು ನಗರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಾಗಿತ್ತು. [ಮಂಗಳೂರಿಗೆ ನೂತನ ಪೊಲೀಸ್ ಆಯುಕ್ತರ ನೇಮಕ]
ಪ್ರವೀಣ್ ತೊಗಾಡಿಯಾ ಅವರ ವಿರುದ್ಧ ಕಲಂ 144 (3) ಸಿಆರ್ಪಿಸಿ ಅನ್ವಯ ಜನವರಿ 18 ರಿಂದ 24ರವರೆಗೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರವೇಶ ಮತ್ತು ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧಾಜ್ಞೆ ಹೊರಡಿಸಲಾಗಿದೆ. [ಕರಾವಳಿ ಭಾಗದಲ್ಲಿ ಒಂದು ವರ್ಷದಲ್ಲಿ 217 ಕೊಲೆ]
ತೊಗಾಡಿಯಾ ಅವರ ಪ್ರವೇಶದಿಂದ ನಗರದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಉಂಟಾಗಬಹದು ಎಂಬುದನ್ನು ಪರಿಗಣಿಸಿ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಈ ನಿಷೇಧಾಜ್ಞೆ ಹೊರಡಿಸಿದೆ.
ಇದೇ ಮೊದಲಲ್ಲ : ಪ್ರವೀಣ್ ತೊಗಾಡಿಯಾ ಅವರಿಗೆ ನಿಷೇಧ ಹೇರುತ್ತಿರುವುದು ಇದೇ ಮೊದಲಲ್ಲ. 2015ರಲ್ಲಿ ಬೆಂಗಳೂರು, ಉಡುಪಿ, ಮೈಸೂರಿಗೆ ಪ್ರವೀಣ್ ತೊಗಾಡಿಯಾ ಅವರು ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿತ್ತು.