ತಕ್ಷಣ ಕುದ್ರೋಳಿ ಕಸಾಯಿಖಾನೆ ಮುಚ್ಚಿ: ವಿಎಚ್ ಪಿ ಒತ್ತಾಯ
ಮಂಗಳೂರು, ಅಕ್ಟೋಬರ್. 28: ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನಿದೆ. ಆದರೆ ಕುದ್ರೋಳಿ ಕಸಾಯಿಖಾನೆಯಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಹತ್ಯೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಕುದ್ರೋಳಿ ಕಸಾಯಿಖಾನೆ ಮುಚ್ಚಬೇಕು ಎಂದು ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಒತ್ತಾಯಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕುದ್ರೋಳಿ ಕಸಾಯಿಖಾನೆಯಲ್ಲಿ ನಿರಂತರ ಗೋಹತ್ಯೆ ನಡೆಯುತ್ತಿದೆ. ಪ್ರತಿ ತಿಂಗಳು 350-400 ಜಾನುವಾರುಗಳ ಹತ್ಯೆ ನಡೆಯುತ್ತಿದ್ದು, ಈ ದಾಖಲೆಗಳು ಮಾಹಿತಿ ಹಕ್ಕಿನಿಂದ ಪಡೆದ ಮಾಹಿತಿಯಿಂದಲೇ ಬಹಿರಂಗವಾಗಿದೆ ಎಂದು ಸ್ಪಷ್ಟಪಡಿಸಿದರು.
ಕಸಾಯಿಖಾನೆ ವಿವಾದದ ಕುರಿತು ಪ್ರಧಾನಿಗೆ ಪತ್ರ ಬರೆಯಲಿರುವ ಖಾದರ್
ಈ ಕುರಿತು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ ಎಂದು ಹೇಳಿದ ಶರಣ್ ಪಂಪ್ ವೆಲ್ ಪೊಲೀಸರು ಈವರೆಗೂ ಪ್ರಕರಣ ದಾಖಲಿಸಿಕೊಂಡಿಲ್ಲ. ಪ್ರಕರಣ ದಾಖಲಿಸದಂತೆ ಒತ್ತಡ ಹೇರಲಾಗುತ್ತಿದೆ ಎಂದು ದೂರಿದರು.
ನಗರ ಪಾಲಿಕೆ ಆಯುಕ್ತ ನಝೀರ್ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರಲ್ಲದೇ ಕುದ್ರೋಳಿ ಕಸಾಯಿಖಾನೆಯ ಗುತ್ತಿಗೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಕುದ್ರೋಳಿಯಲ್ಲಿ ಅತ್ಯಾಧುನಿಕ ಕಸಾಯಿಖಾನೆ ನಿರ್ಮಾಣ: ಇದು ಸಾಧ್ಯನಾ?
ಮಾಹಿತಿಯಂತೆ ಕುದ್ರೋಳಿ ಕಸಾಯಿಖಾನೆಯಲ್ಲಿ ಕಳೆದ 6 ತಿಂಗಳಲ್ಲಿ 1,800 ಜಾನುವಾರುಗಳ ಹತ್ಯೆ ನಡೆದಿದೆ. ಜಿಲ್ಲೆಯಲ್ಲಿ ಅನಧಿಕೃತ ಬೀಫ್ ಸ್ಟಾಲ್ ಗಳು ಕಾರ್ಯಾಚರಿಸುತ್ತಿವೆ. ತಕ್ಷಣ ಸರಕಾರ ಇದರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.