ಮಂಗಳೂರು: ಲವ್ ಜಿಹಾದ್ ವಿರುದ್ದ ಹಿಂದೂ ಸಂಘಟನೆಗಳಿಂದ ಅಭಿಯಾನ
ಮಂಗಳೂರು, ಜನವರಿ 3: ಮಂಗಳೂರಿನಲ್ಲಿ ಲವ್ ಜಿಹಾದ್ ವಿರುದ್ಧ ವಿಶ್ವ ಹಿಂದೂ ಪರಿಷತ್, ಬಜರಂಗದಳ ಮತ್ತು ದುರ್ಗಾವಾಹಿನಿ ಅಭಿಯಾನ ಆರಂಭಿಸಿವೆ. ನಗರದ ಪಿವಿಎಸ್ ವೃತ್ತದ ಬಳಿ ಇರುವ ಲಕ್ಷ್ಮೀ ನಾರಾಯಣ ದೇವಸ್ಥಾನದಿಂದ 15 ದಿನಗಳ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಕರಪತ್ರ ಹಂಚುವ ಮೂಲಕ ಹಿಂದೂ ಸಂಘಟನೆಗಳು ಜಾಗೃತಿ ಅಭಿಯಾನ ಆರಂಭಿಸಿವೆ.
ಇತ್ತೀಚೆಗೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲವ್ ಜಿಹಾದ್ ಪ್ರಕರಣಗಳು ಜಾಸ್ತಿಯಾಗುತ್ತಿದ್ದು, ಈಗಾಗಲೇ ಹಲವು ಪ್ರಕರಣಗಳು ಬೆಳಕಿಗೆ ಬಂದಿದೆ. ಹತ್ತಾರು ಯುವತಿಯರು ನಾಪತ್ತೆಯಾಗಿದ್ದಾರೆ. ಈ ಹಿನ್ನಲೆಯಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ, ಹಿಂದೂ ಯುವತಿಯರಿಗೆ ಲವ್ ಜಿಹಾದ್ ನಿಂದ ಆಗುವ ತೊಂದರೆಗಳ ಬಗ್ಗೆ ಮನವರಿಕೆ ಮಾಡಲಾಗುತ್ತಿದೆ ಎಂದು ವಿಎಚ್ ಪಿ ಹಾಗೂ ಬಜರಂಗದಳ ಮುಖಂಡರು ತಿಳಿಸಿದ್ದಾರೆ.
ಅಭಿಯಾನಕ್ಕಾಗಿ ನಾಲ್ಕು ತಂಡಗಳನ್ನು ಸಿದ್ದಪಡಿಸಲಾಗಿದ್ದು ಕಾಲೇಜುಗಳ ಮುಂಭಾಗ ವಿದ್ಯಾರ್ಥಿಗಳಿಗೆ ಕರ ಪತ್ರ ಹಂಚಿ ಜಾಗೃತಿ ಮೂಡಿಸಲಾಗುತ್ತಿದೆ. ಅಭಿಯಾನದಲ್ಲಿ ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ನೂರಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದು ಲವ್ ಜಿಹಾದ್ ನ ಜಾಲಕ್ಕೆ ಬೀಳುವ ಮುನ್ನ ಎಚ್ಚರ ವಹಿಸುವಂತೆ ಸೂಚನೆ ನೀಡಲಾಗುತ್ತಿದೆ.