ಹಂತಕ ಎಂದು ಫುಡ್ ಡೆಲಿವರಿ ಹುಡುಗನ ವಿರುದ್ಧ ಮಂಗಳೂರಲ್ಲಿ ದೂರು!
ಮಂಗಳೂರು, ಆಗಸ್ಟ್ 9: ಮನೆ ಬಳಿ ಫುಡ್ ಡೆಲಿವರಿ ಮಾಡಲು ಬಂದ ಡೆಲಿವರಿ ಬಾಯ್ ತನ್ನ ಕೊಲೆ ಮಾಡಲು ಬಂದ ಹಂತಕ ಎಂದು ತಪ್ಪಾಗಿ ಗ್ರಹಿಸಿದ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಪೊಲೀಸ್ ಠಾಣೆಗೆ ತನ್ನ ಕೊಲೆ ಯತ್ನ ಎಂದು ದೂರು ನೀಡಿ ಪೊಲೀಸರನ್ನು ಪೇಚಿಗೆ ಸಿಲುಕಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮಂಗಳೂರಿನ ಬಿಕರ್ನಕಟ್ಟೆಯ ನಿವಾಸಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತ ಕಾರ್ತಿಕ್, ಭಾನುವಾರ (ಆಗಸ್ಟ್ 7) ರಾತ್ರಿ 10.45ರ ವೇಳೆಗೆ ಪಡೀಲ್ ಭಾಗದಿಂದ ಮನೆಗೆ ಹಿಂದುರುಗುತ್ತಿದ್ದ ವೇಳೆಯಲ್ಲಿ ಅವರ ಕಾರನ್ನು ದ್ವಿಚಕ್ರ ವಾಹನ ಹಿಂಬಾಲಿಸಿಕೊಂಡು ಬಂದಿದ್ದು, ಅವರ ಮನೆಯ ಬಳಿಯೇ ಆ ಬೈಕ್ ಕೂಡಾ ನಿಂತಿದೆ.
Breaking; ವಿಡಿಯೋ, ಮಂಗಳೂರು ಸಮುದ್ರದಲ್ಲಿ ಮುಳುಗಿದ ಬೋಟ್
ಈ ಹಿಂದೆ ವಿದೇಶದಿಂದ ಕೊಲೆ ಬೆದರಿಕೆ ಕರೆಗಳು ಬಂದ ಹಿನ್ನಲೆಯಲ್ಲಿ ಆತಂಕಗೊಂಡ ಕಾರ್ತಿಕ್, ಆ ಬೈಕ್ ನಲ್ಲಿ ಬಂದವರು ತನ್ನ ಹತ್ಯೆ ನಡೆಸಲು ಬಂದ ಹಂತಕರು ಎಂದು ಭಾವಿಸಿ ಸಾಮಾಜಿಕ ಜಾಲತಾಣದಲ್ಲಿ ಮತ್ತು ಪೊಲೀಸ್ ಠಾಣೆಗೆ ಕೊಲೆಯತ್ನವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಮತ್ತು ಕೆಲ ಮಾಧ್ಯಮಗಳಲ್ಲಿ ಮಂಗಳೂರಿನ ವಿಎಚ್ಪಿ ಕಾರ್ಯಕರ್ತನ ಹತ್ಯೆಗೆ ಯತ್ನವಾಗಿದೆ. ಮೂರು ಬಾರಿ ದ್ವಿಚಕ್ರ ವಾಹನಗಳಲ್ಲಿ ಅಪರಿಚಿತರು ಕಾರು ಹಿಂಬಾಲಿಸಿದ್ದಾರೆ. ಮಂಗಳೂರಿನ ಬಜ್ಜೋಡಿ-ಬಿಕರ್ನಕಟ್ಟೆ ರಸ್ತೆಯಲ್ಲಿ ಕಾರು ಫಾಲೋ ಮಾಡಿ ಬೈಕ್ ತಾಗಿಸಿ ಪರಾರಿಯಾಗಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು.
ಪೂರಕವಾಗಿ ಅದೇ ದಿನ ರಾತ್ರಿ 11.43 ಗಂಟೆಗೆ ವಿಎಚ್ಪಿ ಕಾರ್ಯಕರ್ತನಿಗೆ +1 (661)748-02** ಸಂಖ್ಯೆಯಿಂದ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ತುಳು ಮಿಶ್ರಿತ ಮುಸ್ಲಿಂ ಭಾಷೆಯಲ್ಲಿ ಮಾತನಾಡಿದ ಅಪರಿಚಿತ ವ್ಯಕ್ತಿ, " ಇನಿ ತಪ್ಪಯ ಪಂಡ್ ದ್ ಖುಷಿ ಮಲ್ಪೋಡ್ಚಿ, ಗೊತ್ತುಂಡು, ನನ್ನ ಮೂಜಿ ಜನ ಪಂಪುವೆಲ್ ಡ್ ಉಲ್ಲೆರತ್ತಾ, ಬುಡ್ಪುಜಿ ಯಾನ್, ಕರ್ತಿನ ಬೇನೆ ಉಂಡು" (ಈ ದಿನ ತಪ್ಪಿಸಿಕೊಂಡಿದ್ದೀಯಾ ಎಂದು ಖುಷಿ ಪಡಬೇಡ, ಗೊತ್ತಿದೆ, ಇನ್ನೂ ಮೂರು ಜನ ಪಂಪುವೆಲ್ ನಲ್ಲಿ ಇದ್ದಾರೆ, ನಾನು ಬಿಡುವುದಿಲ್ಲ, ಕೊಂದ ನೋವು ಇದೆ) ಎಂದು ಬೆದರಿಕೆ ಹಾಕಿದ್ದ. ಈ ಬಗ್ಗೆ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 506, 507ನಡಿ ಎಫ್ಐಆರ್ ದಾಖಲಾಗಿದೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಇದು ಸತ್ಯಕ್ಕೆ ದೂರವಾದ ವಿಚಾರ. ಈ ರೀತಿಯ ಯಾವುದೇ ಘಟನೆ ಆಗಿಲ್ಲ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಬೆಳಗ್ಗೆ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಬೈಕ್ ನಲ್ಲಿ ಅಪರಿಚಿತರು ಬಂದು ಫಾಲೋ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಇಂಟರ್ ನೆಟ್ ಕಾಲ್ ಮಾಡಿ ಬೆದರಿಕೆ ಹಾಕಿದ್ದಾರೆ ಎಂದು ದೂರು ಕೊಟ್ಟಿದ್ದರು.
ದೂರುದಾರರನ್ನು ಹೆಚ್ಚಿನ ವಿಚಾರಣೆ ನಡೆಸಲಾಗಿತ್ತು. ದೂರುದಾರರಿಗೆ ಇಂಟರ್ ನೆಟ್ ಕಾಲ್ ಬಂದಿದೆ. ಆದರೆ ದೂರುದಾರರ ಮನೆ ಬಳಿ ಬೈಕ್ ನಲ್ಲಿ ಬಂದಿದ್ದು ಫುಡ್ ಡೆಲಿವರಿ ಹುಡುಗ. ದೂರುದಾರರ ಪಕ್ಕದ ಮನೆಗೆ ಫುಡ್ ಡೆಲಿವರಿ ಮಾಡೋಕೆ ಬಂದಿದ್ದ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ.
ಘಟನೆ ಬಗ್ಗೆ ಅಪಪ್ರಚಾರ ಮಾಡಲಾಗಿತ್ತು. ಬೈಕ್ ನಲ್ಲಿ ಬಂದು ಹತ್ಯೆಗೆ ಪ್ರಯತ್ನಿಸಿದ್ದರು ಎಂದು ಅಪಪ್ರಚಾರ ಮಾಡಲಾಗಿತ್ತು. ಆದರೆ ಈ ರೀತಿಯ ಯಾವುದೇ ಘಟನೆ ನಡೆದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಬೇಡಿ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಸ್ಪಷ್ಟನೆ ನೀಡಿದ್ದಾರೆ.