ಪಾಕ್ ಪ್ರತಿದಾಳಿಗೆ ಸದಾ ಸನ್ನದ್ಧರಾಗಿರಿ:ಡಾ. ಎಂ.ವೀರಪ್ಪ ಮೊಯ್ಲಿ
ಮಂಗಳೂರು, ಫೆಬ್ರವರಿ 26: ಭಾರತೀಯ ವಾಯು ಸೇನೆಯ ಪರಾಕ್ರಮಕ್ಕೆ ದೇಶದಾದ್ಯಂತ ಪ್ರಶಂಸೆ ವ್ಯಕ್ತವಾಗುತ್ತಿದೆ. ಎಲ್ ಓಸಿ ಯನ್ನು ದಾಟಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾಗದಲ್ಲಿದ್ದ ಜೈಶ್-ಎ-ಮಹಮ್ಮದ್ ಉಗ್ರಗಾಮಿ ಶಿಬಿರಗಳನ್ನು ಧ್ವಂಸಗೊಳಿಸಿದ ಭಾರತೀಯ ವಾಯುಸೇನೆಯ ಪರಾಕ್ರಮಕ್ಕೆ ಬಹುಪರಾಕ್ ಹೇಳಲಾಗುತ್ತಿದೆ.
ವಾಯುಸೇನೆಯ ಪರಾಕ್ರಮಕ್ಕೆ ಮಾಜಿ ಕೇಂದ್ರ ಸಚಿವ ಡಾ. ಎಂ.ವೀರಪ್ಪ ಮೊಯ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ವಾಯು ಸೇನೆ ಉಗ್ರಗ್ರಾಮಿಗಳ ತಾಣವನ್ನು ಛೇದಿಸಿರುವುದು ಸ್ವಾಗತಾರ್ಹ.ಆದರೆ ಯಾವುದೇ ರೀತಿಯ ಪ್ರತಿದಾಳಿಯನ್ನು ಎದುರಿಸಲು ನಾವು ಸದಾ ಸನ್ನದ್ಧರಾಗಿರಬೇಕು ಎಂದು ತಿಳಿಸಿದ್ದಾರೆ.
ಪಾಕಿಸ್ತಾನದಿಂದ ಗಡಿನಿಯಂತ್ರಣ ರೇಖೆ ಉಲ್ಲಂಘನೆ, ಯುದ್ಧದ ಸೂಚನೆ?
ನಾವು ಯಾವತ್ತೂ ಯಾವುದೇ ರೀತಿಯಲ್ಲಿ ಮುಂದುವರಿಯುವಾಗ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತೇವೆ. ಆದರೆ ಪಾಕಿಸ್ತಾನಕ್ಕೆ ಆ ಭಾವನೆ ಇಲ್ಲ. ಹತಾಶ ಹಾಗೂ ಉಗ್ರಗಾಮಿಗಳ ತಾಣವನ್ನು ಹೊಂದಿರುವ ದೇಶ. ಅಂತಹ ದೇಶದ ಮೇಲೆ ದಾಳಿ ಮಾಡುವಾಗ ಸರ್ವ ರೀತಿಯ ಸಿದ್ಧತೆ ಮಾಡಿರುವ ವಿಶ್ವಾಸ ನಮಗಿದೆ ಎಂದರು.
ಸರ್ಜಿಕಲ್ ಸ್ಟ್ರೈಕ್: ಸುಳ್ಳಿನ ಸರಮಾಲೆ ಕಟ್ಟಿ ಕೊನೆಗೆ ಸತ್ಯ ಒಪ್ಪಿಕೊಂಡ ಪಾಕ್
ಇದರಲ್ಲಿ ಯಾವುದೇ ರೀತಿಯ ರಾಜಕೀಯ ಇಲ್ಲ. ವೈರಿಗಳನ್ನು ಸದೆಬಡಿಯುವ ಕೆಲಸ ಸರ್ಕಾರದ್ದು. ಪುಲ್ವಾಮಾದಲ್ಲಿ ನಡೆದ ಘಟನೆಯು ಗುಪ್ತಚರ ಮಾಹಿತಿ ನೀಡುವಲ್ಲಿ ವೈಫಲ್ಯವಾದ ಕಾರಣ ಸಂಭವಿಸಿದ್ದು. ಹಾಗಾಗಿ ಸದಾ ಎಚ್ಚರವಾಗಿರಬೇಕು ಎಂದು ವೀರಪ್ಪ ಮೊಯ್ಲಿ ಹೇಳಿದರು.