'ನೀರಿನ ವಿಚಾರದಲ್ಲಿ ಖಾದರ್ ಬೇಜಾವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ'
ಮಂಗಳೂರು, ಮೇ 19: ದಕ್ಷಿಣ ಕನ್ನಡ ಜಿಲ್ಲೆಯ ಜನ ಎದುರಿಸುತ್ತಿರುವ ನೀರಿನ ಸಮಸ್ಯೆಯನ್ನು ಬಗೆಹರಿಸುವಲ್ಲಿ ರಾಜ್ಯ ಸರಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯುಟಿ ಖಾದರ್ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರ ಶಾಸಕ ವೇದವ್ಯಾಸ್ ಕಾಮತ್ ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯ ಜನ ಹಿಂದೆಂದೂ ಕಂಡಿರದ ನೀರಿನ ಸಮಸ್ಯೆಯನ್ನು ಈ ಬಾರಿ ಎದುರಿಸುತ್ತಿದ್ದಾರೆ. ರಾಜ್ಯ ಸರಕಾರ ಕೈಗೆತ್ತಿ ಕೊಂಡಿರುವ ಎತ್ತಿನಹೊಳೆ ಯೋಜನೆಯಿಂದಾಗಿ ಜಿಲ್ಲೆಯ ಜನರಿಗೆ ತೊಂದರೆಯಾಗುತ್ತಿದೆ ಎನ್ನುವ ವಿಚಾರದಲ್ಲಿ ಬಿಜೆಪಿ ಪಕ್ಷ, ಸಂಸದರು ಹಾಗೂ ಜಿಲ್ಲೆಯ ಜನ ಹಲವು ರೀತಿಯ ಪ್ರತಿಭಟನೆಗಳನ್ನು ಈ ಹಿಂದೆಯೇ ಮಾಡಿದ್ದಾರೆ.
ಅರಣ್ಯ ನಾಶದಿಂದ ನೀರಿನ ಅಭಾವ : ವೀರೇಂದ್ರ ಹೆಗ್ಗಡೆ ವಿಷಾದ
ಆದರೆ ರಾಜ್ಯ ಸರಕಾರ ಇದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಯೋಜನೆಯನ್ನು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ಪ್ರಾರಂಭಿಸಿದೆ. ಇದರಿಂದಾಗಿ ಜಿಲ್ಲೆಯ ಜನರಿಗೆ ಅನ್ಯಾಯವಾಗಿದ್ದು, ಮುಂದಿನ ಅಧಿವೇಶನದಲ್ಲಿ ಈ ವಿಚಾರವನ್ನಿಟ್ಟು ಜಿಲ್ಲೆಯ ಬಿಜೆಪಿಯ ಏಳು ಜನ ಶಾಸಕರೂ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ನಮ್ಮ ಹೋರಾಟದಿಂದ ಸರಕಾರ ಯೋಜನೆಯನ್ನು ರದ್ದುಗೊಳಿಸುತ್ತಾ ಎನ್ನುವುದನ್ನು ಹೇಳಲಾಗದು ಎಂದ ಕಾಮತ್, ಆದರೆ ಜಿಲ್ಲೆಯ ಜನರಿಗೆ ತೊಂದರೆಯಾಗಲು ನಾವು ಬಿಡುವುದಿಲ್ಲ ಎಂದು ಹೇಳಿದ ಅವರು ಜಿಲ್ಲೆಯಲ್ಲಿ ಇಷ್ಟೊಂದು ನೀರಿನ ಬರವಿದ್ದರೂ ಯು.ಟಿ.ಖಾದರ್ ಚುನಾವಣೆಯ ಹಿಂದೆ ಓಡಾಡುತ್ತಿದ್ದಾರೆ.
ಧರ್ಮಸ್ಥಳದಲ್ಲಿ ನೀರಿನ ಅಭಾವ:ದರ್ಶನ ಮುಂದೂಡುವಂತೆ ವೀರೇಂದ್ರ ಹೆಗ್ಗಡೆ ಮನವಿ
ಸಚಿವರು ಕನಿಷ್ಠ ಪಕ್ಷ ಮಂಗಳೂರು ನಗರ ಪಾಲಿಕೆ ಅಧಿಕಾರಿಗಳಿಗೆ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿರ್ವಹಿಸುವಂತೆ ಸೂಚನೆಯನ್ನೂ ನೀಡಿಲ್ಲ. ನೀರಿನ ವಿಚಾರದಲ್ಲಿ ಸಚಿವರು ಬೇಜಾವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ರಾಜ್ಯ ಸರಕಾರವೂ ಜಿಲ್ಲೆಯ ನೀರಿನ ಸಮಸ್ಯೆಗೆ ಸ್ಪಂದಿಸಿಲ್ಲ ಎಂದು ವೇದವ್ಯಾಸ್ ಕಾಮತ್ ಕಿಡಿಕಾರಿದರು.