ಬಿಜೆಪಿ ಅಂದರೆ 'ಬಲಾತ್ಕಾರಿ ಜಾನ್ ಲೇವಾ ಪಾರ್ಟಿ': ಜಿಗ್ನೇಶ್ ಮೇವಾನಿ
ಮಂಗಳೂರು, ಏಪ್ರಿಲ್ 28: ಗುಜರಾತಿನ ವಡಗಾಂವ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ. ಬಂಟ್ವಾಳದ ಬಿ.ಸಿ ರೋಡ್ ನಲ್ಲಿ ಆಯೋಜಿಸಲಾಗಿದ್ದ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಅವರು ಕರ್ನಾಟಕ ಹತ್ತು ಪರ್ಸೆಂಟ್ ಸರ್ಕಾರ ಎಂದಿದ್ದ ಪ್ರದಾನಿ ಮೋದಿ ಅವರಿಗೆ ತಿರುಗೇಟು ನೀಡಿದರು.
ಮೋದಿ ಅವರದ್ದು 80ರಿಂದ 90ಪರ್ಸೆಂಟ್ ಕಮಿಷನ್ ಪಡೆಯೋ ಸರ್ಕಾರ ಎಂದು ವಾಗ್ದಾಳಿ ನಡೆಸಿದ ಅವರು, ಕರ್ನಾಟಕ ಸರಕಾರದ ಆಡಳಿತದ ಕುರಿತು ಮಾತನಾಡುವ ನೈತಿಕತೆ ಮೋದಿ ಅವರಿಗಿಲ್ಲ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತಿಭ್ರಮಣೆಯಾಗಿದೆ: ಪ್ರಕಾಶ್ ರೈ
ವರ್ಷಕ್ಕೆ ಎರಡು ಕೋಟಿ ಉದ್ಯೋಗ ನೀಡುತ್ತೇನೆಂದು ಹೇಳಿದ್ದೀರಿ, ನಾಲ್ಕು ವರ್ಷದಲ್ಲಿ 8 ಕೋಟಿ ಉದ್ಯೋಗ ನೀಡಬೇಕಿತ್ತು . ಆದರೆ ನಾಲ್ಕು ವರ್ಷದಲ್ಲಿ ನಾಲ್ಕು ಲಕ್ಷ ಉದ್ಯೋಗ ಕೂಡ ನಿಮ್ಮಿಂದ ನೀಡಲಾಗಿಲ್ಲ ಎಂದು ಆರೋಪಿಸಿದರು.
"ದಲಿತರ ಮೇಲೆ ನಡೆಯುವ ದೌರ್ಜನ್ಯವನ್ನು ನಿರ್ಲಕ್ಷಿಸಲಾಗುತ್ತಿದೆ. ಅಟ್ರಾಸಿಟಿ ಕಾನೂನನ್ನು ತೆಗೆದು ಹಾಕಲು ಮೋದಿ ಹೊರಟಿದ್ದಾರೆ," ಎಂದು ದೂರಿದ ಅವರು, ಕರ್ನಾಟಕಕ್ಕೆ ಬರೋ ಮುನ್ನ ದಲಿತರ ರಕ್ಷಣೆಗೆ ಸುಗ್ರೀವಾಜ್ಞೆ ಮೂಲಕ ಕಾನೂನು ತನ್ನಿ," ಎಂದು ಒತ್ತಾಯಿಸಿದರು.
ದಲಿತರ ರಕ್ಷಣೆಗೆ ಬಲಿಷ್ಠ ಕಾನೂನು ತನ್ನಿ ಇಲ್ಲದಿದ್ದರೆ ಕರ್ನಾಟಕದಲ್ಲಿ 'ಮೋದಿ ಗೋ ಬ್ಯಾಕ್' ಚಳವಳಿ ಆರಂಭಿಸುತ್ತೇವೆ ಎಂದು ಎಚ್ಚರಿಸಿದ ಅವರು, "ಸ್ವಾತಂತ್ರ್ಯಕ್ಕಾಗಿ ಆರ್.ಎಸ್.ಎಸ್ ನ ಎಷ್ಟು ಮಂದಿ ಬಲಿದಾನ ಮಾಡಿದ್ದಾರೆ?" ಎಂದು ಪ್ರಶ್ನಿಸಿದರು.
"ಸಂವಿಧಾನ ಬದಲಿಸುತ್ತೇವೆ ಎಂದಿರುವ ಬಿಜೆಪಿ ನಾಯಕರು ದೇಶದ್ರೋಹಿಗಳು. ಬಿಜೆಪಿಯ 50 ಕ್ಕೂ ಹೆಚ್ಚು ಶಾಸಕರು ಅತ್ಯಾಚಾರ ಆರೋಪ ಎದುರಿಸುತ್ತಿದ್ದಾರೆ. ಬಿಜೆಪಿ ಅಂದರೆ ಬಲಾತ್ಕಾರಿ ಜಾನ್ ಲೇವಾ ಪಾರ್ಟಿ," ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
"ಗುಜರಾತಿನಲ್ಲಿ ಅದಾನಿ, ಅಂಬಾನಿಯಿಂದ 80 ಪರ್ಸೆಂಟ್ ಕಮಿಷನ್ ಪಡೆದಿದ್ದಾರೆ. ಮೋದಿ 80 ಪರ್ಸೆಂಟ್ ಕಮಿಷನ್ ಪಡೆದ ಮಹಾನ್ ಚೋರ," ಎಂದು ಅವರು ಕಿಡಿಕಾರಿದರು.
ಹೀಗಾಗಿ ಇಂಥ ಮೋದಿಯನ್ನು ಕರ್ನಾಟಕಕ್ಕೆ ಬರದಂತೆ ನೋಡಿಕೊಳ್ಳಬೇಕು . 2019ರ ಚುನಾವಣೆ ನಮ್ಮ ಗುರಿಯಾಗಬೇಕು. ಮೋದಿ ದಕ್ಷಿಣ ಭಾರತ ಪ್ರವೇಶಿಸದಂತೆ ತಡೆಯಬೇಕು ಎಂದು ಅವರು ಕರೆ ನೀಡಿದರು.