ಮಂಗಳೂರು: ಗೋ ಕಳ್ಳತನ ತಡೆಯಲು ಗೋರಕ್ಷಾ ದಳ ಆರಂಭಿಸಿದ ಬಜರಂಗದಳ
ಮಂಗಳೂರು, ಆಗಸ್ಟ್. 03: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗೋ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿವೆ. ಇನ್ನೊಂದೆಡೆ ಪೊಲೀಸ್ ಇಲಾಖೆ ಇದನ್ನು ತಡೆಯುವ ನಿಟ್ಟಿನಲ್ಲಿ ಹಲವಾರು ನಟೋರಿಯಸ್ ಗೋ ಕಳ್ಳರನ್ನು ಬಂಧಿಸಿದೆ. ಆದರೆ ಜಿಲ್ಲೆಯಲ್ಲಿ ಮಾತ್ರ ಗೋ ಕಳ್ಳತನ ಅವ್ಯಾಹತವಾಗಿ ನಡೆಯುತ್ತಲೇ ಇದೆ.
ಈ ವಿಚಾರ ಮುಂಬರುವ ದಿನಗಳಲ್ಲಿ ಸಂಘರ್ಷಕ್ಕೆ ಕಾರಣವಾಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಮುಂಬರುವ ಲೋಕಸಭಾ ಚುನಾವಣೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ದನ ಕಳವು ಪ್ರಕರಣ ಪ್ರಮುಖ ವಿಷಯವಾಗಲಿದೆ.
ಗೋಗಳ್ಳತನ ವಿರುದ್ದ ಅಮರಣಾಂತ ಉಪವಾಸ, ರಾಜಾರಾಂ ಭಟ್ ಆಸ್ಪತ್ರೆಗೆ
ಈ ನಡುವೆ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗೋ ಕಳ್ಳತನ ಪ್ರಕರಣವನ್ನು ನಿಲ್ಲಿಸಲು ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಪೊಲೀಸರಂತೆ ಕಾರ್ಯ ನಿರ್ವಹಿಸಲು ಪ್ರತ್ಯೇಕ ದಳ ರಚನೆಗೆ ಮುಂದಾಗಿವೆ. ಗ್ರಾಮಾಂತರ ಪ್ರದೇಶದ ಕೃಷಿಕರ ಮನೆಗಳಿಗೆ ನುಗ್ಗುವ ದುಷ್ಕರ್ಮಿಗಳನ್ನು ತಡೆಯಲು ವಿಶ್ವ ಹಿಂದೂ ಪರಿಷತ್, ಬಜರಂಗ ದಳ ಮುಂದಾಗಿದೆ.
ಗೋವುಗಳ ರಕ್ಷಣೆಗೆ ಹಿಂದೂ ಸಂಘಟನೆಗಳು ಪ್ರತೀ ಗ್ರಾಮಗಳಲ್ಲಿ ಇದೀಗ ಗೋರಕ್ಷ ದಳವನ್ನು ಸಂಘಟಿಸಿವೆ. ಇಂತಹ ಗೋರಕ್ಷಾದಳವನ್ನು ರಚಿಸುವ ಯೋಚನೆ 2 ವರ್ಷಗಳ ಹಿಂದೆ ರೂಪಿಸಲಾಗಿತ್ತಾದರೂ ಈಗ ಕಾರ್ಯ ರೂಪಕ್ಕೆ ತರಲಾಗಿದೆ.
ತಡರಾತ್ರಿ ಕಾರು, ಲಾರಿ , ಜೀಪ್ ಗಳಲ್ಲಿ ಬರುತ್ತಿದ್ದ ಶಸ್ತ್ರ ಸಜ್ಜಿತ ದನಗಳ್ಳರು ಹಟ್ಟಿಗಳಿಗೆ ನುಗ್ಗಿ ದನಗಳನ್ನು ಅಪಹರಿಸುವುದು ಮಾತ್ರವಲ್ಲ ಮನೆಯ ಮಾಲಿಕರಿಗೆ ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಕೂಡ ಹಾಕಿದ ಹಲವಾರು ಪ್ರಕರಣಗಳು ಜಿಲ್ಲೆಯಲ್ಲಿ ನಡೆದಿವೆ.
ಇಂತಹ ಪ್ರಕರಣ ಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ಶ್ರಮಿಸುತ್ತಿದೆ ಆದರೂ ಸಾದ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಎಚ್ ಪಿ ಹಾಗು ಬಜರಂಗದಳ ಗೋವುಗಳ ರಕ್ಷಣೆಗೆ ಮುಂದಾಗಿವೆ.
ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಗೋರಕ್ಷಾ ದಳವನ್ನು ಪ್ರಾರಂಭಿಸಲು ಯೋಜನೆ ರೂಪಿಸಿದ್ದು, ಪ್ರಥಮ ಪ್ರಯೋಗವಾಗಿ ಅತೀ ಹೆಚ್ಚು ಗೋಕಳ್ಳತನವಾದ ಮಂಗಳೂರು ಹೊರವಲಯದ ಮೂಡುಶೆಡ್ಡೆಯಲ್ಲಿ ಈ ದಳವನ್ನು ಸಂಘಟಿಸಲಾಗಿದೆ.
ಮುಂಬರುವ ದಿನಗಳಲ್ಲಿ ಗುರುಪುರ, ಉಳ್ಳಾಲ ವ್ಯಾಪ್ತಿಯ ಗ್ರಾಮಗಳಲ್ಲೂ ಸೇರಿ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 100 ಕಡೆಗಳಲ್ಲಿ ಗೋರಕ್ಷ ದಳ ಮುಂದಿನ ಎರಡು ತಿಂಗಳಲ್ಲಿ ಪ್ರಾರಂಭಗೊಳ್ಳಲಿದೆ ಎಂದು ವಿ ಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ ತಿಳಿಸಿದ್ದಾರೆ.
ಗೋಕಳ್ಳರ ಬಳಿ ಶಸ್ತ್ರವಿದ್ದಾಗ ಗೋವುಗಳನ್ನು ಕಾಯುವ ನಾವು ಆತ್ಮರಕ್ಷಣೆಗೆ ಶಸ್ತ್ರ ಹಿಡಿದುಕೊಳ್ಳಬಾರದು ಎಂಬ ನಿಯಮವಿಲ್ಲ ಎಂದು ಹೇಳುತ್ತಾರೆ ಹಿಂದೂ ಸಂಘಟನೆಗಳ ಮುಖಂಡರು.
ಪ್ರತೀ ಗ್ರಾಮಗಳಲ್ಲಿ ಈ ಗೋರಕ್ಷಾದಳದಲ್ಲಿ 25ರಿಂದ 30 ಜನರ ತಂಡ ರಚಿಸಲು ತೀರ್ಮಾನಿಸಲಾಗಿದೆ. ಅವರ ಪೈಕಿ ಸರತಿಯಂತೆ ಸುಮಾರು 5ರಿಂದ 6 ಜನರು ರಾತ್ರಿ ವೇಳೆ ಆಯಾಯ ಗ್ರಾಮದಲ್ಲಿ ಗೋವುಗಳ ಪಹರೆ ಕಾಯುವ ಮೂಲಕ ಗೋವುಗಳ ರಕ್ಷಣೆ ಮಾಡಲಿದ್ದಾರೆ.
ಕಾನೂನಿನೊಂದಿಗೆ ಸಹಕಾರ ನೀಡುವ ಮೂಲಕ ಗೋರಕ್ಷಾದಳ ಸ್ವಯಂ ಸೇವಕರು ತಮ್ಮ ಗ್ರಾಮಕ್ಕೆ ಬರುವ ವಾಹನಗಳ ಮೇಲೂ ಕಣ್ಣಿರಿಸಿ ಪೊಲೀಸರಿಗೆ ಸೂಚನೆ ನೀಡುವುದಲ್ಲದೇ, ಗೋಕಳ್ಳರನ್ನು ಹಿಡಿದು ಪೊಲೀಸರಿಗೊಪ್ಪಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಲಾಗಿದೆ .
ಅಲ್ಲದೇ, ಗೋವುಗಳನ್ನು ಸಾಕಲು ಯಾರಿಗಾದರೂ ಸಮಸ್ಯೆಯಿದ್ದಲ್ಲಿ ಆ ಗೋವುಗಳನ್ನು ಗೋಶಾಲೆಗಳಿಗೆ ನೀಡುವ ವ್ಯವಸ್ಥೆ ಕೂಡ ಮಾಡಲಿದ್ದಾರೆ.
ಕರಾವಳಿಯಲ್ಲಿ ಈ ವರೆಗೆ ಗೋವುಗಳ ಸಂಬಂಧಿಸಿದ ವಿಚಾರದಲ್ಲೇ ಹಲವಾರು ಗಲಭೆಗಳು ನಡೆದಿವೆ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೋವುಗಳ ವಿಚಾರದಲ್ಲಿ ಸಂಘರ್ಷಗಳು ನಡೆಯುತ್ತಲೇ ಇರುತ್ತವೆ. ಆದರೆ ಈ ನಡುವೆ ಹಿಂದೂ ಸಂಘಟನೆಗಳು ರೂಪಿಸಿರುವ ಗೋರಕ್ಷಾದಳ ದಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣಿಸುವ ಲಕ್ಷಣಗಳು ಕಾಣಿಸುತ್ತಿವೆ.
ಉತ್ತರ ಭಾರತದಲ್ಲಿ ನಡೆಯುತ್ತಿರುವ ಸಾಮೂಹಿಕ ಹಲ್ಲೆ ಪ್ರಕರಣಗಳು ಭಾರೀ ಸುದ್ದಿಯಾಗುತ್ತಿದ್ದ, ವಿವಾದಕ್ಕೆ ಗುರಿಯಾಗುತ್ತಿವೆ. ಈ ಸಾಮೂಹಿಕ ಗುಂಪು ಹಲ್ಲೆ ಗಳು ಅಂತರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿ ದೇಶದ ಮಾನ ಹರಾಜು ಮಾಡಲಾಗುತ್ತದೆ.
ಇಂತಹ ಸಾಮೂಹಿಕ ಗುಂಪು ಹಲ್ಲೇ ಪ್ರಕರಣಗಳು ದಕ್ಷಿಣಕನ್ನಡ ಜಿಲ್ಲೆಯಲ್ಲೂ ಆರಂಭವಾಗುವ ಆತಂಕ ವ್ಯಕ್ತಪಡಿಸಲಾಗಿದೆ.