"ಉಳ್ಳಾಲ ಪಾಕಿಸ್ತಾನವಾಗಿದೆ"; ಕಲ್ಲಡ್ಕ ಪ್ರಭಾಕರ ಭಟ್ಟರ ವಿವಾದಾತ್ಮಕ ಹೇಳಿಕೆಗೆ ಖಾದರ್ ತಿರುಗೇಟು
ಮಂಗಳೂರು, ನವೆಂಬರ್ 03: "ಕಲ್ಲಡ್ಕ ಪ್ರಭಾಕರ ಭಟ್ಟರು ತಮ್ಮ ಹೇಳಿಕೆ ಕುರಿತು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಸಾರ್ವಜನಿಕ ಹೇಳಿಕೆಗಳು ಸಮಾಜದ ಒಗ್ಗಟ್ಟಿಗೆ ಪೂರಕವಾಗಿರಬೇಕು. ಆದರೆ ಪ್ರತಿಯೊಬ್ಬರೂ ಈ ರೀತಿಯ ಹೇಳಿಕೆಯನ್ನು ನೀಡುತ್ತಾ ಬಂದರೆ ಸಮಾಜ ಹಾಗೂ ದೇಶಕ್ಕೆ ಮಾರಕ" ಎಂದು ಪ್ರತಿಕ್ರಿಯೆ ನೀಡಿದ್ದಾರೆ ಶಾಸಕ ಯು.ಟಿ.ಖಾದರ್.
ಸೋಮವಾರ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್, ಉಳ್ಳಾಲಕ್ಕೆ ಹೋದಲ್ಲಿ ಪಾಕಿಸ್ತಾನಕ್ಕೆ ಹೋದಂತೆ ಅನಿಸುತ್ತದೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟೀಕೆಗಳು ವ್ಯಕ್ತವಾಗಿದ್ದವು. ಈ ಹೇಳಿಕೆಗೆ ಶಾಸಕ ಖಾದರ್ ವಿರೋಧ ವ್ಯಕ್ತಪಡಿಸಿದ್ದಾರೆ.
ಕಲ್ಲಡ್ಕ ಭಟ್ರೇ, ಮಂಗಳೂರು ಹಾಳು ಮಾಡಿದ್ದಾಯಿತು, ಬೆಂಗಳೂರಿನವರನ್ನಾದರೂ ನೆಮ್ಮದಿಯಿಂದ ಇರಲು ಬಿಡಿ
"ದೇಶಪ್ರೇಮ ಇರುವವರು, ಸಮಾಜದ ಮೇಲೆ ಪ್ರೀತಿಯಿರಿಸಿರುವವರು ಈ ರೀತಿ ಹೇಳಿಕೆಗಳನ್ನು ನೀಡುವುದಿಲ್ಲ. ಈ ರೀತಿಯ ಹೇಳಿಕೆಗಳು ಕಲ್ಲಡ್ಕ ಪ್ರಭಾಕರ ಭಟ್ಟರ ಬಾಯಿಯಲ್ಲಿ ಬರುತ್ತದೆ ಎಂದರೆ ಆಶ್ಚರ್ಯವಾಗುತ್ತದೆ" ಎಂದರು. ಸಾರ್ವಜನಿಕ ಹೇಳಿಕೆಗಳು ಸಮಾಜದ ಒಗ್ಗಟ್ಟಿಗೆ ಪೂರಕವಾಗಿರಬೇಕು. ಹಿರಿಯರಾದ ಕಲ್ಲಡ್ಕ ಭಟ್ಟರು ಈ ರೀತಿ ಹೇಳಿಕೆ ನೀಡಿರುವುದು ಉಳ್ಳಾಲ ಕ್ಷೇತ್ರದ ಪ್ರತಿಯೊಬ್ಬರಿಗೂ ನೋವುಂಟು ಮಾಡಿದೆ ಎಂದು ಹೇಳಿದರು.
ಭಾರತದ ಎಲ್ಲಾ ಸಂಸ್ಕೃತಿ ಉಳ್ಳಾಲದಲ್ಲಿದೆ. ಎಲ್ಲಾ ವರ್ಗದ, ಎಷ್ಟೋ ಸಣ್ಣ ಸಣ್ಣ ಸಮುದಾಯದ ಧಾರ್ಮಿಕ ಆರಾಧನಾ ಕೇಂದ್ರಗಳು ಇಲ್ಲಿವೆ. ಇಲ್ಲಿನ ಕಣ ಕಣದಲ್ಲೂ ಬಹು ಸಂಸ್ಕೃತಿ ಕಂಡುಬರುತ್ತದೆ. ಇಲ್ಲಿ ಎಲ್ಲರೂ ಅತ್ಯಂತ ಪ್ರೀತಿ, ವಿಶ್ವಾಸದಿಂದ ಇದ್ದಾರೆ. ಯಾರೋ ಒಬ್ಬರು ಹೇಳಿದ ತಕ್ಷಣ ಇಲ್ಲಿನ ಚಿತ್ರಣ ಬದಲಾಗುವುದಿಲ್ಲ" ಎಂದು ಕಿಡಿಕಾರಿದ್ದಾರೆ.