ತಾವೇ ಎಳನೀರು ಕೊಚ್ಚಿ ಕುಡಿದ ಸಚಿವ ಯು.ಟಿ. ಖಾದರ್
ಮಂಗಳೂರು, ಜೂನ್ 14 : ಒಬ್ಬ ಶಾಸಕ, ಸಚಿವ ಎಂದರೆ ಆತನ ಜೀವನ ಶೈಲಿ ಐಷಾರಾಮಿಯಾಗಿರುತ್ತದೆ. ಓಡಾಡಲು ಕಾರು, ಇರಲು ಬಂಗಲೆ, ಸಾಕಷ್ಟು ಹಿಂಬಾಲಕರು...ಇವೆಲ್ಲವೂ ಇರುತ್ತದೆ ಎನ್ನುವ ಭಾವನೆ ಜನಸಾಮಾನ್ಯರಲ್ಲಿ ಸಹಜ. ಇದಕ್ಕೆ ನೂರಾರು ಉದಾಹರಣೆಗಳೂ ಸಿಗುತ್ತವೆ. ಆದರೆ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗು ರಾಜ್ಯದ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಈ ವಿಷಯದಲ್ಲಿ ಸ್ವಲ್ಪ ಭಿನ್ನ ಎನಿಸುತ್ತಾರೆ.
ಅವರ ಸರಳ ವ್ಯಕ್ತಿತ್ವ, ಜನರೊಂದಿಗೆ ಬೆರೆಯುವ ರೀತಿಯಿಂದ ವಿಶಿಷ್ಟವಾಗಿ ಅವರು ಕಾಣುತ್ತಾರೆ. ಇದಕ್ಕೆ ಉದಾಹರಣೆ ಎಂಬಂತೆ ಮಂಗಳೂರಿನ ಉಳ್ಳಾಲದಲ್ಲಿ ನಡೆದ ಪ್ರಸಂಗವನ್ನು ಹೇಳಬಹುದು. ಕಡಲ್ಕೊರೆತದಿಂದ ತತ್ತರಿಸಿರುವ, ತನ್ನದೇ ಕ್ಷೇತ್ರ ವ್ಯಾಪ್ತಿಗೆ ಬರುವ ಉಳ್ಳಾಲಕ್ಕೆ ಅಧಿಕಾರಿಗಳೊಂದಿಗೆ ಇಂದು ಯು ಟಿ ಖಾದರ್ ಭೇಟಿ ನೀಡಿದ್ದರು. ಉಳ್ಳಾಲ, ಸೋಮೇಶ್ವರ ಪ್ರದೇಶಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಾಮರ್ಶಿಸಿ, ಸಂತ್ರಸ್ತರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಅಲ್ಲದೆ ಸರ್ಕಾರದಿಂದ ಸಿಗುವ ಪರಿಹಾರವನ್ನು ದೊರಕಿಸಿ ಕೊಡುವ ಅಶ್ವಾಸನೆಯನ್ನು ನೀಡಿದರು.
ಉಳ್ಳಾಲದಲ್ಲಿ ತೀವ್ರ ಕಡಲ್ಕೊರೆತ; ಸಚಿವ ಯು.ಟಿ ಖಾದರ್ ಭೇಟಿ
ಹೀಗೆ ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಣೆ ಮಾಡುತ್ತಿದ್ದ ಸಂದರ್ಭ, ಅವರಿಗೆ ಬಾಯಾರಿಕೆ ಆಗಿದೆ. ಇದಕ್ಕಾಗಿ ಅಧಿಕಾರಿಗಳು ಅಥವಾ ತಮ್ಮ ಪಕ್ಷದ ಕಾರ್ಯಕರ್ತರತ್ತ ನೋಡದೇ ಖಾದರ್ ಅವರು ನೇರವಾಗಿ, ಪಕ್ಕದಲ್ಲೇ ಇದ್ದ ಸಣ್ಣ ಪಟ್ಟಿಗೆ ಅಂಗಡಿಗೆ ತೆರಳಿದ್ದಾರೆ. ಅಷ್ಟೇ ಅಲ್ಲ, ಅಂಗಡಿಯವರಿಂದ ಕತ್ತಿಯನ್ನು ತೆಗೆದುಕೊಂಡು ತಾವೇ ಎಳನೀರು ಕೆತ್ತಿ ಕುಡಿದಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಖಾದರ್ ಅವರ ಈ ಸರಳ ನಡೆ, ನೆರೆದವರ ಹುಬ್ಬೇರಿಸುವಂತೆ ಮಾಡಿತ್ತು.