ರನ್ ವೇಯಿಂದ ವಿಮಾನ ಜಾರಿದ ಪ್ರಕರಣ, ತನಿಖೆಗೆ ಖಾದರ್ ಒತ್ತಾಯ
ಮಂಗಳೂರು, ಜುಲೈ 1: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿನ್ನೆ ಸಂಜೆ ದುಬೈಯಿಂದ ಬಂದಿಳಿದ ವಿಮಾನ ರನ್ ವೇಯಿಂದ ಜಾರಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಈ ಲೋಪದ ಕುರಿತು ಹಾಗು ಘಟನೆಯ ಸಮಗ್ರ ಉನ್ನತ ತನಿಖೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.
ಈ ಸಂಬಂಧ ನಾಗರೀಕ ವಿಮಾನಯಾನ ಮಹಾ ನಿರ್ದೇಶಕ (ಡಿಜಿಸಿಎ)ರೊಂದಿಗೆ ಹಾಗೂ ಸಚಿವಾಲಯದೊಂದಿಗೆ ಮಾತನಾಡಿರುವ ಸಚಿವರು, ಈ ಘಟನೆ ಪೈಲಟ್ ಅಥವಾ ವಿಮಾನದ ದೋಷದಿಂದಾಗಿದೆಯೇ, ಏರ್ ಪೋರ್ಟ್ ವ್ಯವಸ್ಥೆಯಲ್ಲಿ ಏನಾದರೂ ಕೊರತೆಯುಂಟಾಗಿದೆಯೇ ಎಂಬುದರ ಬಗ್ಗೆ ಸಮಗ್ರ ವಿಚಾರಣೆ ನಡೆಸಬೇಕು. ಪ್ರಯಾಣಿಕರ ಸುರಕ್ಷಿತ ಪ್ರಯಾಣಕ್ಕೆ ಉತ್ಕೃಷ್ಟ ಕಾಳಜಿ ವಹಿಸಬೇಕು, ಕೂಡಲೇ ಈ ಬಗ್ಗೆ ಸ್ಪಂದಿಸಬೇಕು ಎಂದು ಸಚಿವ ಖಾದರ್ ಆಗ್ರಹಿಸಿದ್ದಾರೆ.
ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣದ ರನ್ ವೇಯಲ್ಲಿ ಜಾರಿದ ವಿಮಾನ
ದುಬೈನಿಂದ ಮಂಗಳೂರಿಗೆ ಸುಮಾರು 6 ಗಂಟೆಗೆ ಆಗಮಿಸಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ಐಎಕ್ಸ್ 814 ವಿಮಾನ, ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ಸಂದರ್ಭ ರನ್ ವೇ ಬಿಟ್ಟು ಹೊರಗೆ ಜಾರಿದ್ದು, ಪೈಲಟ್ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಈ ವಿಮಾನವು ರನ್ ವೇಗೆ ಬರುವಾಗ ಎಡಕ್ಕೆ ತಿರುಗದೆ ನೇರವಾಗಿ ಮುಂದಕ್ಕೆ ಚಲಾಯಿಸಿದರ ಪರಿಣಾಮ ವಿಮಾನದ ಮುಂದಿನ ಚಕ್ರ ರನ್ ವೇ ಬಿಟ್ಟು ಕಚ್ಚಾ ನೆಲಕ್ಕೆ ಇಳಿದಿದೆ. ಈ ಹಿನ್ನೆಲೆಯಲ್ಲಿ ವಿಮಾನ ಚಕ್ರ ನೆಲದಲ್ಲಿ ಹೂತು ಹೋಗಿದೆ. ಆದರೆ ಅದೃಷ್ಟವಶಾತ್ ಯಾವುದೇ ಹಾನಿಯಾಗದೇ ಪ್ರಯಾಣಿಕರೆಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ವಿಮಾನದಲ್ಲಿ ಪೈಲೆಟ್ ಗಳು ಸೇರಿದಂತೆ ಒಟ್ಟು 183 ಪ್ರಯಾಣಿಕರಿದ್ದರು.