ಡಿಸಿ ಸಿಂಧೂ ಬಿ.ರೂಪೇಶ್ ವರ್ಗಾವಣೆ ಹಿಂದಿನ ಕಾರಣ ಸ್ಪಷ್ಟಪಡಿಸಿ; ಯುಟಿ ಖಾದರ್
ಮಂಗಳೂರು, ಜುಲೈ 30: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಿಂಧೂ ಬಿ. ರೂಪೇಶ್ ಅವರ ವರ್ಗಾವಣೆಯ ಹಿಂದಿನ ಕಾರಣವನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಶಾಸಕ ಯು.ಟಿ ಖಾದರ್ ಒತ್ತಾಯಿಸಿದ್ದಾರೆ.
ಇಂದು ನಗರದಲ್ಲಿ ಮಾತನಾಡಿದ ಅವರು, "ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೇ ವರ್ಷದ ಅವಧಿಯಲ್ಲಿ ಇಬ್ಬರು ಜಿಲ್ಲಾಧಿಕಾರಿಗಳು ಬಂದು ಹೋಗಿದ್ದಾರೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಇದು ವಾಡಿಕೆಯಂತೆ ನಡೆಯುವ ಆಡಳಿತಾತ್ಮಕ ವರ್ಗಾವಣೆ ಎಂದಿದ್ದಾರೆ. ಆದರೆ ಆರು ತಿಂಗಳಲ್ಲಿ ಜಿಲ್ಲಾಧಿಕಾರಿ ಬದಲಾಯಿಸುವ ನಿಯಮವಿಲ್ಲ. ಕನಿಷ್ಠ ಜಿಲ್ಲಾಧಿಕಾರಿ ಒಂದು ವರ್ಷ ಅಥವಾ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಬೇಕು. ಹೀಗೆ ಆರು ತಿಂಗಳೊಳಗೆ ಜಿಲ್ಲಾಧಿಕಾರಿಯವರನ್ನು ವರ್ಗಾವಣೆಯ ಮಾಡಿದ ಹಿಂದಿನ ನೈಜ ಕಾರಣವನ್ನು ಸರ್ಕಾರ ಬಹಿರಂಗಪಡಿಸಬೇಕು" ಎಂದು ಆಗ್ರಹಿಸಿದ್ದಾರೆ.
ದಕ್ಷಿಣ ಕನ್ನಡ ಡಿಸಿ ವರ್ಗಾವಣೆ; ಕಾಂಗ್ರೆಸ್ ನಾಯಕರು ಗರಂ
"ಜಿಲ್ಲಾಧಿಕಾರಿಯಾಗಿದ್ದ ಸಿಂಧೂ ಬಿ.ರೂಪೇಶ್ ಅವರಿಕೆ ಜೀವ ಬೆದರಿಕೆ ಬಂದಾಗ, ಬಿಜೆಪಿ ಶಾಸಕರಾಗಲಿ, ಸಂಸದರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಯಾರೂ ಅದನ್ನು ಖಂಡಿಸುವ ಹೇಳಿಕೆ ನೀಡಿಲ್ಲ, ಧೈರ್ಯ ಹೇಳಿಲ್ಲ. ಪೊಲೀಸ್ ಇಲಾಖೆ ಆರೋಪಿ ಬಂಧಿಸಿದಾಗ ಅದರ ಲಾಭ ಪಡೆದುಕೊಳ್ಳಲು ಮಾತ್ರ ಮುಂದಾಗಿದ್ದಾರೆ" ಎಂದು ಆರೋಪಿಸಿದ್ದಾರೆ.