ಮಂಗಳೂರಿನಲ್ಲಿ ಉಪ್ಪಿ ಪ್ರಚಾರ:ರಿಯಲ್ ಸ್ಟಾರ್ ಸರಳತೆಗೆ ಮಾರು ಹೋದ ಕರಾವಳಿಗರು
ಮಂಗಳೂರು, ಏಪ್ರಿಲ್ 03:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳಿಂದ ಅಬ್ಬರದ ಚುನಾವಣಾ ಪ್ರಚಾರ ನಡೆಯುತ್ತಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಕ್ಷೇತ್ರದಲ್ಲಿ ಜಿದ್ದಾಜಿದ್ದಿ ಸ್ಪರ್ಧೆ ನಡೆಸುತ್ತಿವೆ. ಈ ನಡುವೆ ಮಂಗಳೂರಿನಲ್ಲಿ ನಟ ಉಪೇಂದ್ರ ಉತ್ತಮ ಪ್ರಜಾಕೀಯ ಪಕ್ಷದ ಪರವಾಗಿ ಪ್ರಚಾರ ನಡೆಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಗರದ ಉರ್ವ ಪ್ರದೇಶದಲ್ಲಿ ಪ್ರಚಾರ ನಡೆಸಿದ ಉಪೇಂದ್ರ, ಗ್ರಂಥಾಲಯ, ಮಾರ್ಕೆಟ್, ಆಟೋ ಚಾಲಕರ ಬಳಿ ಹೋಗಿ ಕರ ಪತ್ರ ನೀಡಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಮಂಡ್ಯದಿಂದ ಪ್ರಚಾರ ಆರಂಭಿಸಿದ ರಿಯಲ್ ಸ್ಟಾರ್ ಉಪೇಂದ್ರ
ನಟ ಉಪೇಂದ್ರರನ್ನು ಕಂಡು ಸ್ಥಳೀಯ ಸರ್ಕಾರಿ ಶಾಲೆಯ ಮಕ್ಕಳೆಲ್ಲಾ ಓಡೋಡಿ ಬಂದು ಉಪೇಂದ್ರ ಅವರ ಕೈ ಕುಲುಕಿ ಸಂಭ್ರಮಿಸಿದರು. ಬಿಸಿಲ ಝಳವೂ ಹೆಚ್ಚಾಗಿದ್ದ ಕಾರಣ ಉಪೇಂದ್ರ ಮಕ್ಕಳಿಗೆ ಕಲ್ಲಂಗಡಿ ಹಣ್ಣನ್ನು ಹಂಚಿದರು. ಆ ನಂತರ ಉಪೇಂದ್ರ ಅವರ ಸರಳತೆ ಕಂಡ ಸ್ಥಳೀಯರು ಪ್ರಶಂಸಿಸಿದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ, ಪ್ರಣಾಳಿಕೆಯನ್ನು ಕಾನೂನಡಿ ತರಬೇಕು.ಇಲ್ಲವಾದಲ್ಲಿ ಪ್ರಣಾಳಿಕೆ ಅನ್ನೋದೇ ಬೊಗಸ್ ಆಗಿರುತ್ತದೆ. ಪಕ್ಷಗಳು ತರುವ ಪ್ರಣಾಳಿಕೆಗಳನ್ನು ಪೂರೈಸದಿದ್ದಾಗ ಜನ ಅದನ್ನು ಪ್ರಶ್ನೆ ಮಾಡಿ ಹಕ್ಕಿನಿಂದ ಕೇಳುವಂತಾಗಬೇಕೆಂದು ಎಂದರು. ಮುಂದೆ ಓದಿ...
ನಾಯಕನಾಗಿ ಅಲ್ಲ, ಸೇವಕನಾಗಿ ಕೆಲಸ ಮಾಡ್ತಾರೆ
"ನಮ್ಮದು ರಾಜಕೀಯ ಪಕ್ಷವಲ್ಲ, ಪ್ರಜಾಕೀಯ ಪಕ್ಷ. ಜನರಿಗೇ ಅಧಿಕಾರ ನೀಡುವುದು ನಮ್ಮ ಮುಖ್ಯ ಉದ್ದೇಶ. ಪಕ್ಷದ ಅಭ್ಯರ್ಥಿ ನಾಯಕನಾಗಿ ಅಲ್ಲ, ಸೇವಕನಾಗಿ ಕೆಲಸ ಮಾಡ್ತಾರೆ. ಜನರ ಸಮಸ್ಯೆಗಳನ್ನು ಕೇಂದ್ರಕ್ಕೆ ತಲುಪಿಸಿ ಪರಿಹಾರ ಸೂಚಿಸುವುದು ಪಕ್ಷದ ಆದ್ಯತೆ" ಎಂದು ಉಪೇಂದ್ರ ತಿಳಿಸಿದರು.
ಮೋದಿ, ರಾಹುಲ್ ಗಾಂಧಿಗೆ ಬೆಂಬಲ ನೀಡಲ್ಲ
ನಮ್ಮ ಪಕ್ಷದ ಅಭ್ಯರ್ಥಿ ಗೆದ್ದರೂ ಕೇಂದ್ರದಲ್ಲಿ ಮೋದಿ ಅಥವಾ ರಾಹುಲ್ ಗಾಂಧಿಗೆ ಬೆಂಬಲ ನೀಡಲ್ಲ ಎಂದು ಸ್ಪಷ್ಟಪಡಿಸಿದ ಉಪೇಂದ್ರ, ಜನರ ಅಭಿಪ್ರಾಯ ಪಡೆದು ಅವರು ಏನ್ ಹೇಳ್ತಾರೋ ಅದರಂತೆ ಮುಂದುವರಿಯುತ್ತೇನೆ ಎಂದರು.
ದಕ್ಷಿಣ ಕನ್ನಡ 13, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿ
ಪ್ರಚಾರಕ್ಕೆ 28 ಕ್ಷೇತ್ರಕ್ಕೂ ತೆರಳುತ್ತೇನೆ
ನಮ್ಮ ಪಕ್ಷದಿಂದ ರಾಜ್ಯದ 28 ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಚುನಾವಣೆಗೆ ನಿಲ್ಲಲಿದ್ದಾರೆ. ಅಭ್ಯರ್ಥಿಗಳ ಪರವಾಗಿ ನಾನು ಪ್ರತೀ ಕ್ಷೇತ್ರಕ್ಕೆ ಪ್ರಚಾರ ಮಾಡಲು ತೆರಳುತ್ತೇನೆ. ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲಲೇಬೇಕೆಂದು ನಾನು ಹೇಳಲ್ಲ.ಅಭ್ಯರ್ಥಿ ಆಯ್ಕೆ ಜನರಿಗೇ ಬಿಟ್ಟಿದ್ದು, ಅವರೇ ಗೆಲ್ಲಿಸಬೇಕು ಎಂದು ಉಪೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾನು ಯಾವುದೇ ಕಮೆಂಟ್ ಮಾಡುವುದಿಲ್ಲ
ಸಿಎಂ ಕುಮಾರಸ್ವಾಮಿ ಕರಾವಳಿಗರ ವಿರುದ್ಧ ನೀಡಿದ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಉಪೇಂದ್ರ, ಇಡೀ ದೇಶ, ರಾಜ್ಯಕ್ಕೆ ಗೊತ್ತಿದೆ ಯಾರು ಬುದ್ಧಿವಂತರೆಂದು. ಕರಾವಳಿಯವರು ಬುದ್ಧಿವಂತರೆಂದು ಹೇಳಬೇಕಾಗಿಲ್ಲ. ಕುಮಾರಸ್ವಾಮಿ ಅವರು ನೀಡಿದ ಹೇಳಿಕೆ ಅವರ ವೈಯಕ್ತಿಕ ವಿಚಾರ. ಅದರ ಬಗ್ಗೆ ನಾನು ಯಾವುದೇ ಕಮೆಂಟ್ ಮಾಡುವುದಿಲ್ಲ ಎಂದರು.