ರಾಜ್ಯದಲ್ಲಿ ಅಬ್ಬರಿಸಿದ ಮುಂಗಾರು ಪೂರ್ವ ಮಳೆ: ಅಡಿಕೆ ಬೆಳೆಗಾರರಿಗೆ ನಷ್ಟ
ಮಂಗಳೂರು, ಏಪ್ರಿಲ್ 15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವರುಣ ಆರ್ಭಟಿಸಿದ್ದು, ಪಶ್ಚಿಮ ಘಟ್ಟ ತಪ್ಪಲಿನ ತಾಲ್ಲೂಕುಗಳಲ್ಲಿ ಬಿರುಗಾಳಿ ಅಕ್ಷರಶಃ ಅಟ್ಟಹಾಸ ಮೆರೆದಿದೆ.
ಬಿರುಗಾಳಿ ಸಹಿತ ಮಳೆಗೆ ನೂರಾರು ಅಡಿಕೆ ಮರಗಳು, ತೆಂಗು, ವಿದ್ಯುತ್ ಕಂಬಗಳು ಧರೆಗುರುಳಿವೆ. ಬೆಳ್ತಂಗಡಿ ತಾಲ್ಲೂಕಿನಲ್ಲಿ ಬಿರುಗಾಳಿ ಜೊತೆಗೆ ಎರಡು ಗಂಟೆಗಳ ಕಾಲ ಭಾರೀ ಮಳೆಯಾಗಿದೆ. ಬೆಳ್ತಂಗಡಿ ತಾಲ್ಲೂಕಿನಾದ್ಯಾಂತ ಸುರಿದ ಭಾರೀ ಗಾಳಿ-ಮಳೆಗೆ ನೂರಾರು ಅಡಿಕೆ ಮರಗಳು ನೆಲಕ್ಕುರುಳಿವೆ.
ರಾಜ್ಯದಲ್ಲಿ ಇನ್ನೂ ಮೂರು ದಿನ ಮಳೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ, ಓಡಿಲ್ನಾಳ, ಕುವೆಟ್ಟು, ಮೇಲಂತಬೆಟ್ಟು, ವೇಣೂರು, ಬಜಿರೆ, ನಾರಾವಿ ಸೇರಿದಂತೆ ಹಲವು ಕಡೆಗಳಲ್ಲಿ ಕೃಷಿ ಬೆಳೆಗಳಿಗೆ ಹಾನಿಯಾಗಿದೆ. ವೇಣೂರಿನ ಅಂಡಿಜೆ ಎಂಬಲ್ಲಿ ಮನೆಯ ಹಂಚಿನ ಮೇಲೆ ಮರ ಬಿದ್ದು, ಮನೆ ಭಾಗಶಃ ಹಾನಿಯಾಗಿದೆ.
ಗೇರುಕಟ್ಟೆಯ ವಾಣಿಜ್ಯ ಸಂಕೀರ್ಣದ ಹಂಚುಗಳೆಲ್ಲಾ ಬಿರುಗಾಳಿಗೆ ಹಾರಿಹೋಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ವಿದ್ಯುತ್ ಕಂಬಗಳೂ ತುಂಡಾಗಿ ರಸ್ತೆಗೆ ಬಿದ್ದಿದ್ದು, ಕೆಲವು ಕಡೆಗಳಲ್ಲಿ ವಾಹನ ಸಂಚಾರಕ್ಕೂ ತೊಡಕು ಉಂಟಾಗಿದೆ.
ತಾಲೂಕಿನಲ್ಲಿ 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು, ಹಲವೆಡೆ ಜನ ವಿದ್ಯುತ್ ಬೆಳಕಿಲ್ಲದೆ ರಾತ್ರಿ ಕಳೆಯುವಂತಾಗಿದೆ. ಪ್ರಮುಖವಾಗಿ ಅಡಿಕೆ ಮರಗಳು ಬಿರುಗಾಳಿಗೆ ಮುರಿದುಬಿದ್ದಿದ್ದು, ಅಡಿಕೆ ಬೆಳೆಗಾರ ನಷ್ಟ ಅನುಭವಿಸುವಂತಾಗಿದೆ.
ಸುಳ್ಯ, ಪುತ್ತೂರು, ಬಂಟ್ವಾಳ, ಮೂಡಬಿದರೆ ತಾಲೂಕುಗಳಲ್ಲಿಯೂ ಭಾರೀ ಮಳೆ ಸುರಿದಿದ್ದು, ಮುಂಗಾರು ಪೂರ್ವ ಮಳೆ ಭಾರೀ ನಷ್ಟವನ್ನುಂಟು ಮಾಡಿದೆ. ಮುಂದಿನ ಮೂರುದಿನಗಳ ಕಾಲ ಇದೇ ರೀತಿಯ ಮಳೆ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಸುರಿಯುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದು, ಜನ ಎಚ್ಚರಿಕೆಯಿಂದ ಇರಬೇಕಿದೆ.