ಹಿಜಾಬ್ಗೆ ಪರೋಕ್ಷವಾಗಿ ಬೆಂಬಲ: ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡ ಶಾಸಕ
ಮಂಗಳೂರು, ಮೇ 28: ಮಂಗಳೂರಿನ ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಕಾಲೇಜು ಅಭಿವೃದ್ಧಿ ಸಮತಿ ಸಭೆ ನಡೆಸಲಾಯಿತು. ಇದಕ್ಕಿಂತ ಮೊದಲು ಕಾಲೇಜಿನ ಉಪನ್ಯಾಸಕರೊಂದಿಗೆ ಸಭೆ ನಡೆಸಿದ ಶಾಸಕ ವೇದವ್ಯಾಸ್ ಕಾಮತ್ ಹಿಜಾಬ್ ಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದ ಉಪನ್ಯಾಸಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಲೇಜಿನಲ್ಲಿ ನಡೆದ ಇಷ್ಟೆಲ್ಲಾ ಬೆಳವಣಿಗೆಗಳನ್ನು ನನ್ನ ಗಮನಕ್ಕೆ ತಂದಿಲ್ಲ ಯಾಕೆ ಎಂದು ಪ್ರಶ್ನಿಸಿದ ವೇದವ್ಯಾಸ್ ಕಾಮತ್, ಮುಂದಿನ ಎಲ್ಲಾ ಬೆಳವಣಿಗೆಗಳ ಮಾಹಿತಿಯನ್ನು ನೀಡಬೇಕಾಗಿ ತಾಕೀತು ಮಾಡಿದ್ದಾರೆ.
ಆ ಬಳಿಕ ಮಂಗಳೂರು ವಿವಿ ಕಾಲೇಜಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ನಡೆದಿದೆ. ಸಿಡಿಸಿ ಅಧ್ಯಕ್ಷರು ಆಗಿರುವ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆಯಲ್ಲಿ ನಡೆದ ಸಭೆ ಇದಾಗಿದ್ದು, ಸಭೆ ಬಳಿಕ ಮಂಗಳೂರು ವಿವಿ ಉಪಕುಲಪತಿ ಡಾ.ಸುಬ್ರಹ್ಮಣ್ಯ ಯಡಪಡಿತ್ತಾಯ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಸಿಡಿಸಿ ಸಭೆಯಲ್ಲಿ ಕಾಲೇಜಿನಲ್ಲಿ ನಡೆದ ಘಟನೆಗಳ ಬಗ್ಗೆ ಚರ್ಚಿಸಲಾಗಿದೆ. ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಾಲೇಜಿಗೆ ಹಿಜಾಬ್ ಧರಿಸಿ ಪ್ರವೇಶ ಇಲ್ಲ. ಕಾಲೇಜು ಕ್ಯಾಂಪಸ್ಗೆ ಹಿಜಾಬ್ ಹಾಕಿಕೊಂಡು ಬರಬಹುದು. ತರಗತಿ, ಲೈಬ್ರೆರಿ ಸೇರಿ ಯಾವುದೇ ತರಗತಿಗೆ ಹಾಕಲು ಅವಕಾಶ ಇಲ್ಲ. ಆದರೆ ಅದನ್ನು ಪ್ರತ್ಯೇಕ ಕೊಠಡಿಯಲ್ಲಿ ಕಳಚಿಟ್ಟು ತರಗತಿಗೆ ಬರಬೇಕು. ಇದು ಕಟ್ಟುನಿಟ್ಟಿನ ಪಾಲನೆಯಾಗಿತ್ತದೆ, ತೊಂದರೆಯಾಗದಂತೆ ನೋಡಿಕೊಳ್ತೇವೆ ಎಂದು ಹೇಳಿದ್ದಾರೆ.
ಕೋರ್ಟ್ ಆದೇಶ ಬಳಿಕ ಪರೀಕ್ಷಾ ಪ್ರಕ್ರಿಯೆ ಇದ್ದ ಹಿನ್ನೆಲೆ ಮಾರ್ಗಸೂಚಿ ತಡವಾಯ್ತು. ಆ ಬಳಿಕ ಸಿಂಡಿಕೇಟ್ ಸಭೆ ನಡೆಸಿ ಕ್ರಮ ಕೈಗೊಂಡಿದ್ದೇವೆ. ಹಿಜಾಬ್ಗೆ ಸಪೋರ್ಟ್ ಮಾಡಿದ ಶಿಕ್ಷಕರ ವಿರುದ್ಧ ದೂರಿಗೆ ಸಾಕ್ಷ್ಯ ಇದ್ದರೆ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಮುಸ್ಲಿಂ ವಿದ್ಯಾರ್ಥಿನಿಯರು ಬಂದಾಗ ಅವರಿಗೆ ತಿಳುವಳಿಕೆ ಹೇಳಿದ್ದೇನೆ. ಆದರೆ ಅವರು ಡಿಸಿ ಬಳಿ ಹೋಗ್ತೇನೆ ಅಂದಾಗ ಹೋಗಿ ಅಂದಿದ್ದೇನೆ. ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್ ಮಾಡ್ತೇವೆ, ಬೇರೆ ಕಾಲೇಜು ಹೋಗೋದಾದ್ರೆ ವ್ಯವಸ್ಥೆ ಮಾಡ್ತೇನೆ. ನಮಗೆ ಬಂದ ಆದೇಶದ ಪ್ರಕಾರ ಪದವಿ ಕಾಲೇಜಿಗೂ ಕೋರ್ಟ್ ಆದೇಶ ಅಪ್ಲೈ ಆಗುತ್ತದೆ ಎಂದು ಯಡಪಡಿತ್ತಾಯ ಸ್ಪಷ್ಟನೆ ನೀಡಿದ್ದಾರೆ.
ಮಂಗಳೂರು ವಿವಿ ಕಾಲೇಜಿನಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆ ಬಳಿಕ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಸೋಮವಾರದಿಂದ ವಿದ್ಯಾರ್ಥಿಗಳು ನೂರಕ್ಕೆ ನೂರು ಕೋರ್ಟ್ ಆದೇಶ ಪಾಲಿಸಬೇಕು. ಅವರಿಗೆ ವಿಶ್ರಾಂತಿ ಕೊಠಡಿಯಲ್ಲಿ ಅವಕಾಶ ಕೊಟ್ಟು ತರಗತಿಗೆ ತೆಗೆದಿಟ್ಟು ಹೋಗಲಿ. ಜೊತೆಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕೌನ್ಸೆಲಿಂಗ್ ಮಾಡುವ ಕೆಲಸ ವಿಸಿಯವರು ಮಾಡುತ್ತಾರೆ. ಇಲ್ಲಿನ ವಿದ್ಯಾರ್ಥಿಗಳ ಪ್ರತಿಭಟನೆ ತಪ್ಪಲ್ಲ, ಅದು ಪ್ರಜಾಪ್ರಭುತ್ವದ ಹಕ್ಕು. ಕೋರ್ಟ್ ಆದೇಶ ಪಾಲಿಸದ ಕಾರಣಕ್ಕೆ ಅವರು ಇಲ್ಲಿ ಪ್ರತಿಭಟನೆ ಮಾಡಿದ್ದಾರೆ. ಪದವಿ ಕಾಲೇಜುಗಳಿಗೆ ಕೋರ್ಟ್ ಆದೇಶ ಅನ್ವಯ ಆಗುತ್ತಾ ಅನ್ನೋ ಪ್ರಶ್ನೆ ಇದೆ. ಆದರೆ ಕೋರ್ಟ್ ಆದೇಶದಲ್ಲಿ ಸರ್ಕಾರ, ಉನ್ನತ ಶಿಕ್ಷಣ ಇಲಾಖೆ ಮತ್ತು ಯುನಿವರ್ಸಿಟಿ ಪಾರ್ಟಿ ಮಾಡಲಾಗಿದೆ. ಹೀಗಿರುವಾಗ ಈ ಆದೇಶ ಸಹಜವಾಗಿ ಎಲ್ಲ ಕಾಲೇಜುಗಳಿಗೆ ಅನ್ವಯ ಆಗುತ್ತದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.