ದೀಪಕ್ ರಾವ್ ಸಹೋದರನಿಗೆ ಕೆಐಒಸಿಎಲ್ ನಲ್ಲಿ ಉದ್ಯೋಗ: ಅನಂತ ಕುಮಾರ್ ಹೆಗಡೆ
ಮಂಗಳೂರ, ಜನವರಿ 19: ಮಂಗಳೂರು ಹೊರವಲಯದ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಮನೆಗೆ ಗುರುವಾರ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಭೇಟಿ ನೀಡಿದರು.
ದೀಪಕ್ ರಾವ್ ಕುಟುಂಬ ಸದಸ್ಯರ ಜತೆ ಮಾತುಕತೆ ನಡೆಸಿದ ಸಚಿವರು ದೀಪಕ್ ರಾವ್ ತಾಯಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಾತು ಬಾರದ ದೀಪಕ್ ಸಹೋದರ ಸತೀಶ್ ಗೆ ಕೆಐಒಸಿಎಲ್ ನಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿದ ಸಚಿವರು, ಈ ಸಂಬಂಧ ಕೆಐಒಸಿಎಲ್ ಸಂಸ್ಥೆಯ ಮುಖ್ಯಸ್ಥರ ಜತೆ ಈಗಾಗಲೇ ಮಾತುಕತೆ ನಡೆಸಿರುವುದಾಗಿ ತಿಳಿಸಿದರು.
ದುಷ್ಕರ್ಮಿಗಳಿಂದ ಹತ್ಯೆಯಾದ ದೀಪಕ್, ಬಷೀರ್ ಮನೆಗೆ ಸಿಎಂ ಭೇಟಿ
ಇದೇ ಸಂದರ್ಭದಲ್ಲಿ ವೈಯಕ್ತಿಕ ನೆಲೆಯಲ್ಲಿ 25 ಸಾವಿರ ರೂಪಾಯಿ ಚೆಕ್ ನ್ನು ದೀಪಕ್ ರಾವ್ ಕುಟುಂಬಕ್ಕೆ ಸಚಿವರು ನೀಡಿದರು.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಮೃತರಾದ ದೀಪಕ್ ರಾವ್ ಅವರನ್ನು ಮರಳಿ ಪಡೆಯಲು ಸಾಧ್ಯವಿಲ್ಲ . ಆದರೆ ಕುಟುಂಬ ನಿರ್ವಹಣೆ ದೃಷ್ಟಿಯಿಂದ ದೀಪಕ್ ಸಹೋದರ ಸತೀಶ್ ಅವರಿಗೆ ಉದ್ಯೋಗದ ವ್ಯವಸ್ಥೆ ಮಾಡಲಾಗಿದೆ," ಎಂದು ತಿಳಿಸಿದ ಅವರು, "ಹಿಂದೂ ಸಮಾಜದ ಜತೆ ನಾನಿದ್ದೇನೆ," ಎಂದು ಹೇಳಿದರು.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಬಿಜೆಪಿ ಮುಖಂಡ ಡಾ. ಭರತ್ ಶೆಟ್ಟಿ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು .