ಜಲೀಲ್ ಕೊಲೆಗೂ ನನಗೂ ಸಂಬಂಧವಿಲ್ಲ-ಡಾನ್ ವಿಕ್ಕಿ ಶೆಟ್ಟಿ
ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ. ಅಬ್ದುಲ್ ಜಲೀಲ್ ಕೊಲೆ ಪ್ರಕರಣದಲ್ಲಿ ತನ್ನದು ಯಾವುದೇ ಪಾತ್ರವಿಲ್ಲ ಮತ್ತು ನನ್ನನ್ನು ಸೇರಿಸಿರುವುದರ ಕಾರಣವೇನೆಂದು ತಿಳಿದಿಲ್ಲ ಎಂದು ಭೂಗತ ಪಾತಕಿ ವಿಕ್ಕಿ ಶೆಟ್ಟಿ ತಿಳಿಸಿದ್ದಾರೆ.
ಮಂಗಳೂರು, ಮೇ 2: ಕರೋಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎ. ಅಬ್ದುಲ್ ಜಲೀಲ್ ಕೊಲೆ ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ನನ್ನ ಹೆಸರನ್ನು ಅನಾವಶ್ಯಕವಾಗಿ ಸಿಲುಕಿಸಲಾಗಿದೆ. ಈ ಕೊಲೆ ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಭೂಗತ ಪಾತಕಿ ವಿಕ್ಕಿ ಶೆಟ್ಟಿ ತಿಳಿಸಿದ್ದಾರೆ. ಈ ಮೂಲಕ ಪೊಲೀಸರ ಹೇಳಿಕೆಗೆ ಡಾನ್ ವಿಕ್ಕಿ ಶೆಟ್ಟಿ ಉಲ್ಟಾ ಹೊಡೆದಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ದೂರವಾಣಿ ಕರೆ ಮಾಡಿ ಈ ವಿಚಾರವನ್ನು ತಿಳಿಸಿದ್ದು, ಈ ಪ್ರಕರಣದಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಮತ್ತು ನನ್ನನ್ನು ಸೇರಿಸಿರುವುದರ ಕಾರಣವೇನೆಂದು ತಿಳಿದಿಲ್ಲ. 2015ರಲ್ಲಿ ಉಪಾಧ್ಯಕ್ಷ ಹುದ್ದೆಯ ಆಯ್ಕೆ ಪ್ರಕ್ರಿಯೆ ಸಂದರ್ಭ ಎ. ಅಬ್ದುಲ್ ಜಲೀಲ್ ಕರೋಪಾಡಿಯವರು ಉಪಾಧ್ಯಕ್ಷ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದರು. ಪಕ್ಷದ ಬೇರೆ ಯಾವ ಕಾರ್ಯಕರ್ತರು ನಾಮಪತ್ರ ಸಲ್ಲಿಸಬಾರದೆಂದು ಸಚಿವ ಬಿ. ರಮಾನಾಥ ರೈಯವರು ಸ್ಪಷ್ಟ ಸೂಚನೆ ನೀಡಿದ್ದಾರೆನ್ನಲಾಗಿದೆ. ಅಂದ ಮೇಲೆ ನನ್ನ ಚಿಕ್ಕಪ್ಪನ ಪುತ್ರ ದಿನೇಶ್ ಶೆಟ್ಟಿ ಪಟ್ಲಾ ಅವರು ಉಪಾಧ್ಯಕ್ಷ ಹುದ್ದೆಗೆ ಹೇಗೆ ಆಕಾಂಕ್ಷಿಯಾಗುತ್ತಾರೆ? ಎಂದು ಅವರು ವಿಕ್ಕಿ ಶೆಟ್ಟಿ ಪ್ರಶ್ನಿಸಿದ್ದಾರೆ.[ಮಂಗಳೂರಿನಲ್ಲಿ ಗ್ರಾಪಂ ಉಪಾಧ್ಯಕ್ಷನ ಹತ್ಯೆ ಪ್ರಕರಣ: ತನಿಖೆ ಚುರುಕು]
ಇದಕ್ಕೂ ಮೊದಲು ಹೇಳಿಕೆ ನೀಡಿದ್ದ ಪಶ್ಚಿಮ ವಲಯ ಐಜಿಪಿ ಹರಿಶೇಖರನ್ ಅಬ್ದುಲ್ ಜಲೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಎಂಬಾತನ ಕೈವಾಡ ಇದ್ದು, ಆತನ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಆತ ಎಲ್ಲಿದ್ದಾನೆ ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕಿದೆ. ವಿಕ್ಕಿ ಶೆಟ್ಟಿ ವಿರುದ್ಧ ಕೋಕಾ ಕಾಯ್ದೆ ಜಾರಿಗೊಳಿಸಲುವ ಪ್ರಕ್ರಿಯೆ ನಡೆಯುತ್ತಿದೆ ಎಂದಿದ್ದರು.
ಪ್ರಕರಣದ ರೂವಾರಿ ಕರೋಪಾಡಿ ಮಿತ್ತನಡ್ಕದ ಬೇತ ಮನೆ ನಿವಾಸಿ ಪ್ರಸ್ತುತ ಕನ್ಯಾನದಲ್ಲಿ ಶಾಮಿಯಾನದ ಅಂಗಡಿಯನ್ನು ನಡೆಸುತ್ತಿರುವ ರಾಜೇಶ್ ನಾಯಕ್ ಹಾಗೂ ನರಸಿಂಹ ಯಾನೆ ನರಸಿಂಹ ಶೆಟ್ಟಿಯನ್ನು ಉಡುಪಿಯಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿತ್ತು.
ಇವರಿಬ್ಬರು ಈ ಪ್ರಕರಣದಲ್ಲಿ ಭೂಗತ ಪಾತಕಿ ವಿಕ್ಕಿ ಶೆಟ್ಟಿ ಯಾನೆ ವಿಕ್ರಮ್ ಶೆಟ್ಟಿ ಯಾನೆ ಬಾಲಕೃಷ್ಣ ಶೆಟ್ಟಿಯ ಪಿತೂರಿಯಂತೆ ಈ ಕೃತ್ಯ ನಡೆಸಿದ್ದೇವೆ ಎಂದು ಬಾಯಿ ಬಿಟ್ಟಿದ್ದಾರೆ ಎಂದು ಹರಿಶೇಖರನ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು.[ಕರೋಪಾಡಿ ಜಲೀಲ್ ಹತ್ಯೆ, ಆಕ್ರೋಶಿತರಿಂದ ರಮಾನಾಥ ರೈಗೆ ಘೇರಾವ್]
ಏಪ್ರಿಲ್ 20ರಂದು ಗ್ರಾಮ ಪಂಚಾಯತ್ ಕಚೇರಿಗೆ ನುಗ್ಗಿ ಗ್ರಾಪಂ ಉಪಾಧ್ಯಕ್ಷ ಜಲೀಲ್ ಕರೋಪಾಡಿ ಅವರನ್ನು ನಾಲ್ವರು ಮುಸುಕುಧಾರಿಗಳು ಮಚ್ಚಿನಿಂದ ಹಲ್ಲೆ ನಡೆಸಿದ್ದರು. ಗಂಭೀರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಲೀಲ್ ರನ್ನು ದೇರಳಕಟ್ಟೆಯ ಕಣಚೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.