ಉಳ್ಳಾಲದಲ್ಲಿ ಸರಕಾರಿ ಆಸ್ಪತ್ರೆ ಕಟ್ಟಿಸಲು DYFI ಆಗ್ರಹ
ಮಂಗಳೂರು, ಡಿಸೆಂಬರ್, 14: ಮಂಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆಸ್ಪತ್ರೆಗಳನ್ನು ಸ್ಥಾಪಿಸುವಂತೆ ಒತ್ತಾಯಿಸಿ ಡಿವೈ ಎಫ್ ಐ ಉಳ್ಳಾಲ ವಲಯ ಸಮಿತಿ ಆಗ್ರಹಿಸಿದೆ.
ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ನೇತೃತ್ವದಲ್ಲಿ ಮಂಗಳವಾರ ಉಳ್ಳಾಲದಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಅವರು,3 0, 000 ಜನಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಎಂದು ರಾಜ್ಯ ಸರಕಾರ ಹೇಳುತ್ತಿದೆ.
ಆದರೆ, ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸುಮಾರು ಮೂರುವರೆ ಲಕ್ಷ ಜನಸಂಖ್ಯೆ ಇದೆ. ಆ ಪ್ರಕಾರ ಇಲ್ಲಿ ಕನಿಷ್ಠ 12 ಆರೋಗ್ಯ ಕೇಂದ್ರ ಇರಬೇಕಿತ್ತು. ಈಗ ನಮ್ಮ ಕ್ಷೇತ್ರದಲ್ಲಿ ಇರುವುದು ಕೇವಲ 5 ಸಾರ್ವಜನಿಕ ಆಸ್ಪತ್ರೆಗಳು ಮಾತ್ರ ಎಂದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು 1 ಲಕ್ಷ ಜನಸಂಖ್ಯೆಗೆ 40 ಬೆಡ್ ಗಳುಳ್ಳ ಒಂದು ಸಮುದಾಯ ಆಸ್ಪತ್ರೆ ಬೇಕು ಎಂದು ಸರಕಾರ ಹೇಳಿದೆ. ಆದರೆ, ನಮ್ಮ ಈ ಕ್ಷೇತ್ರದಲ್ಲಿ ಒಂದೇ ಒಂದು ಸಮುದಾಯ ಆಸ್ಪತ್ರೆ ಇಲ್ಲ.
ಇದರಿಂದ ನಮ್ಮ ಭಾಗದಲ್ಲಿ ಸಾಲು-ಸಾಲು ಖಾಸಗಿ ಆಸ್ಪತ್ರೆಗಳು ತಲೆ ಎತ್ತಿವೆ. ಈ ಆಸ್ಪತ್ರೆಗಳು ಮೆಡಿಕಲ್ ಕಾಲೇಜ್ ನಡೆಸುವ ಉದ್ದೇಶದಿಂದ ಇದೇ ಹೊರತು ಜನರ ಸೇವೆ ಕೊಡುವ ಉದ್ದೇಶದಿಂದಲ್ಲ ಎಂದು ಆರೋಪಿಸಿದರು.
ಅಲ್ಲದೇ ಇಲ್ಲಿನ ಖಾಸಗಿ ಆಸ್ಪತ್ರೆಗಳು ಕಾನೂನಿನ ಯಾವುದೇ ನಿಯಮಗಳನ್ನು ಪಾಲಿಸದೆ ಜನರಿಂದ ಬೇಕಾಬಿಟ್ಟಿ ಹಣ ಸುಲಿಗೆ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳು: ಪ್ರತಿ ಗ್ರಾಮಗಳಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಬೇಕು. ಮಂಗಳೂರು ವಿಧಾನಸಭಾ ಕ್ಷೇತ್ರದ ಹೋಬಳಿ ಕೇಂದ್ರಗಳಲ್ಲಿ ಮೂರು ಸಮುದಾಯ ಆಸ್ಪತ್ರೆಗಳನ್ನು ನಿರ್ಮಿಸಬೇಕು.
ಖಾಸಗಿ ಆಸ್ಪತ್ರೆಗಳಲ್ಲಿ ದರಪಟ್ಟಿ ಪ್ರಕಟಿಸುವುದು, ರೋಗಿಯ ಕಡೆಯವರಿಗೆ ದರಪಟ್ಟಿ ನೀಡುವುದು ಮುಂತಾದ ನಿಯಮಗಳನ್ನು ಪಾಲಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಆರೋಗ್ಯ ಸೇವೆ ನಿಯಂತ್ರಣ ಪ್ರಾಧಿಕಾರದ ಸಭೆ ಕರೆಯಬೇಕು.
ಜಿಲ್ಲೆಯಲ್ಲಿ ಒಂದು ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂದು ಸರಕಾರಕ್ಕೆ ಬೇಡಿಕೆಗಳನ್ನು ಮನವಿಯಲ್ಲಿ ಸಲ್ಲಿಸಿದರು.