ಉಡುಪಿ ಪರ್ಯಾಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಹತ್ವದ ಬದಲಾವಣೆ
ಉಡುಪಿ, ಜ 15: ಪೇಜಾವರ ಅಧೋಕ್ಷಜ ಮಠದ ವಿಶ್ವೇಶತೀರ್ಥ ಶ್ರೀಗಳ ಪಂಚಮ ಪರ್ಯಾಯಕ್ಕೆ ನಿರೀಕ್ಷೆಗೂ ಮೀರಿ ಜನಸ್ಪಂದನೆ ವ್ಯಕ್ತವಾಗುತ್ತಿದ್ದು, ಉಡುಪಿ ಜಿಲ್ಲಾಡಳಿತ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿವೆ.
ಈ ಬಾರಿಯ ಪರ್ಯಾಯ ಮೆರವಣಿಗೆ ಮತ್ತು ದರ್ಬಾರಿಗೆ ಜನಸಾಗರವೇ ಹರಿದುಬರುವ ಸಾಧ್ಯತೆ ಹೆಚ್ಚಾಗಿರುವುದರಿಂದ, ಉಡುಪಿ ಕೃಷ್ಣಮಠದ ಇದುವರೆಗಿನ ಇತಿಹಾಸದಲ್ಲೆ ಇದೇ ಮೊದಲ ಬಾರಿಗೆ ಪರ್ಯಾಯ ದರ್ಬಾರ್ ನಡೆಯುವ ಸ್ಥಳವನ್ನು ಬದಲಾಯಿಸಲಾಗಿದೆ.
ಕಾರ್ಯಕ್ರಮವನ್ನು ಇನ್ನಷ್ಟು ಭಕ್ತರು ವೀಕ್ಷಿಸುವ ಸಲುವಾಗಿ, ಪರ್ಯಾಯ ದರ್ಬಾರ್ ಅನ್ನು ಕೃಷ್ಣಮಠದ ವಿಶಾಲವಾದ ಪಾರ್ಕಿಂಗ್ ಪ್ರದೇಶದಲ್ಲಿ ಸ್ಥಳಾಂತರಿಸಲಾಗಿದೆ. (ಪರ್ಯಾಯಕ್ಕೆ ಯಾರು ಬರ್ತಾರೆ, ಯಾರು ಬರೋಲ್ಲ)
ಇದುವರೆಗಿನ ಉಡುಪಿ ಇತಿಹಾಸದಲ್ಲಿ ಪರ್ಯಾಯ ದರ್ಬಾರ್, ಮಠಕ್ಕೆ ಹೊಂದಿಕೊಂಡಿರುವ ರಾಜಾಂಗಣದಲ್ಲಿ ನಡೆಯುತ್ತಿತ್ತು. ಈಗ ಹತ್ತು ಸಾವಿರಕ್ಕೂ ಹೆಚ್ಚು ಜನ ಕೂತು ವೀಕ್ಷಿಸಲು ಸಾಮರ್ಥ್ಯವಿರುವ ಪಾರ್ಕಿಂಗ್ ಜಾಗಕ್ಕೆ ಸ್ಥಳಾಂತರಿಸಲಾಗಿದೆ.
ಆಳ್ವಾಸ್ ಪ್ರತಿಷ್ಠಾನದ ಡಾ. ಮೋಹನ್ ಆಳ್ವ ನೇತೃತ್ವದಲ್ಲಿ ಭವ್ಯ ದರ್ಬಾರ್ ಸಭಾಂಗಣ ರೂಪುಗೊಳ್ಳುತ್ತಿದ್ದು ಸಭಾಂಗಣಕ್ಕೆ 'ಆನಂದತೀರ್ಥ ಮಂಟಪ' ಎಂದು ಹೆಸರಿಡಲಾಗಿದೆ.
ಹೊರೆಕಾಣಿಕೆ
ಪೇಜಾವರ ಶ್ರೀಗಳ ಪರ್ಯಾಯಕ್ಕೆ ಎಲ್ಲಾ ವರ್ಗದಿಂದ ಹೊರೆಕಾಣಿಕೆಯ ಮಹಾಪೂರವೇ ಹರಿದು ಬರುತ್ತಿದ್ದು, ಮುಸ್ಲಿಂ ಸಮುದಾಯದವರು ಮತ್ತು ಉಡುಪಿ ಧರ್ಮಪ್ರಾಂತ್ಯದ ಕ್ರೈಸ್ತರು ಹೊರೆಕಾಣಿಕೆ ಸಮರ್ಪಿಸಿ ಭಾವೈಕ್ಯತೆ ಮೆರೆದಿದ್ದಾರೆ. ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ನೇತೃತ್ವದಲ್ಲಿ ಹೊರೆಕಾಣಿಕೆಯನ್ನು ಗುರುವಾರ (ಜ 14) ಸಮರ್ಪಿಸಲಾಗಿದೆ.
ಒಲಿಪೆ ಸಂಪ್ರದಾಯ
ಮಠದ ಸಂಪ್ರದಾಯದಂತೆ ಅಷ್ಠಮಠಗಳ ಪೈಕಿ ಏಳು ಮಠಗಳಿಗೆ ಪರ್ಯಾಯ ಪೀಠವನ್ನೇರಲಿರುವ ಪೇಜಾವರ ಮಠದಿಂದ ಹೊರೆಕಾಣಿಕೆ ಅರ್ಪಿಸಲಾಗಿದೆ. ಅಕ್ಕಿ, ಬೆಲ್ಲ, ತರಕಾರಿ, ದವಸಧಾನ್ಯ ಸೇರಿದಂತೆ ಇತರ ಪದಾರ್ಥಗಳನ್ನು ಪರ್ಯಾಯ ಪೀಠವನ್ನೇರಲಿರುವ ಮಠದಿಂದ ಉಳಿದ ಏಳು ಮಠಕ್ಕೆ ನೀಡುವ ಸಂಪ್ರದಾಯಕ್ಕೆ 'ಒಲಿಪೆ'ಎಂದು ಕರೆಯಲಾಗುತ್ತದೆ.
ಆಳ್ವಾಸ್ ಸಂಸ್ಥೆಯಿಂದ ಗೂಡುದೀಪ
ಮೂಡಬಿದರೆ ಆಳ್ವಾಸ್ ಸಂಸ್ಥೆಯಿಂದ ಉಡುಪಿ ನಗರದ ಪ್ರಮುಖ ಬೀದಿ, ವೃತ್ತಗಳಲ್ಲಿ ಗೂಡುದೀಪ ಹಾಕಲಾಗಿದೆ. ಪರ್ಯಾಯ ಸಮಿತಿಯ ಗೌರವಾಧ್ಯಕ್ಷರಾಗಿರುವ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ, ಪರ್ಯಾಯ ವ್ಯವಸ್ಥೆಯನ್ನು ವೀಕ್ಷಿಸಿದ್ದಾರೆ.
ಜನವರಿ 16ರಂದು 2 ಜಿಲ್ಲೆಗಳಿಂದ ಹೊರೆಕಾಣಿಕೆ
ಹೊರೆಕಾಣಿಕೆ ಪದ್ದತಿಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುವುದು ದಕ್ಷಿಣಕನ್ನಡ ಮತ್ತು ಕಾಸರಗೋಡು ಜಿಲ್ಲೆಯಿಂದ ಬರುವ ಹೊರೆಕಾಣಿಕೆ. ಮಂಗಳೂರಿನಿಂದ ಆರಂಭವಾಗುವ ಹೊರೆಕಾಣಿಕೆ ಮೆರವಣಿಗೆ ಶನಿವಾರ (ಜ 16) ಉಡುಪಿ ಪ್ರವೇಶಿಸಲಿದೆ. ಹಾಗಾಗಿ, ಶನಿವಾರ ಮಂಗಳೂರು - ಉಡುಪಿ ಹೆದ್ದಾರಿ ಸಂಚಾರದಲ್ಲಿ ವ್ಯತ್ಯಯವಾಗಲಿದೆ.
ಬರುವ ಗಣ್ಯರ ಪಟ್ಟಿ ಬಹುತೇಕ ಅಂತಿಮ
ಹಿರಿಯ ಮುಖಂಡ ಅಡ್ವಾಣಿ, ಕೇಂದ್ರ ಸಚಿವ ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಸುರೇಶ್ ಪ್ರಭು, ಅನಂತ ಕುಮಾರ್, ಸದಾನಂದಗೌಡ, ಸಿದ್ದೇಶ್ವರ, ಆಂಧ್ರ, ರಾಜಸ್ಥಾನ ಮತ್ತು ಮಹಾರಾಷ್ಟ್ರದ ಸಿಎಂ ಭಾಗವಹಿಸುವುದು ಬಹುತೇಕ ಅಂತಿಮವಾಗಿದೆ. ಮಾಜಿ ಸಿಎಂ ಯಡಿಯೂರಪ್ಪ, ಕುಮಾರಸ್ವಾಮಿ, ಧರಂಸಿಂಗ್, ಜಗದೀಶ್ ಶೆಟ್ಟರ್, ವೀರಪ್ಪ ಮೊಯ್ಲಿ, ರಾಜ್ಯ ಗೃಹಸಚಿವ ಪರಮೇಶ್ವರ್, ಆರ್ ವಿ ದೇಶಪಾಂಡೆ, ದಿನೇಶ್ ಗುಂಡೂರಾವ್ ಸೇರಿದಂತೆ ರಾಜ್ಯ ಸರಕಾರದ ಸಚಿವರು ಪರ್ಯಾಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.